Tuesday, December 1, 2009

ವೃತ್ತಿಧರ್ಮದ ದ್ವಂದ್ವ

ನಾನು ಒಬ್ಬ "ಐಟಿ"ಗ. "ಐಟಿ" ಎಂದ ತಕ್ಷಣ ನಮ್ಮ ಮನಸ್ಸಿಗೆ ಹಲವಾರು ಗುಣಗಳು ಮೋಡುವುದು ಸಹಜ. ಬೆಂಗಳೂರಿನಲ್ಲಿ ಇರುವವರಿಗೆ ಇದರ ಬಗ್ಗೆ ಗೊತ್ತಿರುವುದು ಸರ್ವೇ ಸಾಮಾನ್ಯ.


ಪ್ರಶ್ನೆ: ಮತ್ತೆ ಇವಾಗ ಯಾಕಪ್ಪಾ ಇದರ ಬಗ್ಗೆ ಚರ್ಚೆ?
ಉತ್ತರ: ಇತ್ತೀಚಿನ ದಿನಗಳಲ್ಲಿ ನನ್ನ ತಲೆಯಲ್ಲಿ ಕೊರೆಯುತ್ತಿರುವ ವಿಷಯದ ಹುಳ ನಿಮಗೂ ಹಾಕೋಣಾ ಅಂತ.


ಭಾರತೀಯರು ತಮ್ಮ ಪುರಾತನ ಐತಿಹಾಸಿಕ ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ ಅಂತ ದೂರುವವರು ಇದ್ದಾರೆ. ಒಂದು ರೀತಿಯಲ್ಲಿ ಅದು ಸತ್ಯವೇ (ಇದರ ಬಗ್ಗೆ ಚರ್ಚೆ ಬೇಡ). ಆದರೆ ಇದಕ್ಕೆ ’ಐಟಿ’ಯೇ ಕಾರಣ ಅಂತ ಹೇಳುವವರಿದ್ದಾರೆ. ಐಟಿನವರಿಂದಲೇ ಗಾರ್ಡನ್ ಸಿಟಿ ಪಬ್ ಸಿಟಿಯಾಯಿತು, ಅಂತ ನಮ್ಮನ್ನೇ ದೂಷಿಸ್ತಾರೆ.


ಪ್ರಶ್ನೆ: ಇದನ್ನೆಲ್ಲಾ ನೀನು ನಂಬ್ತೀಯಾ?
ಉತ್ತರ: ಗೊತ್ತಿಲ್ಲ. ಆದರೆ ನನಗೆ ತಿಳಿದವರ ವೃತ್ತಿಯಲ್ಲಿ ತಮ್ಮ ಮನೆತನದ ಆಚರಣೆಗಳನ್ನು ಕಳಚಿ, ತಮ್ಮ ಐಟಿ ಕೆಲಸವೇ ಮಹಾನ್ ಕಾರ್ಯ, ಸಮಯವೆಲ್ಲಾ ಈ ಕೆಲಸಕ್ಕೇ ಹಾಕಬೇಕು ಎಂದು ಹೇಳುವವರೇ ಹೆಚ್ಚು ಇದ್ದಾರೆ.


ಐಟಿ ಕೆಲಸ, ಸಮಾನ್ಯ ಬೇರೆ ಎಲ್ಲ ಕೆಅಸಗಳಂತೆ ಒಂದು ಅಷ್ಟೆ. ಆದರೆ ನಮಗೆ ಅದು ಹೆಚ್ಚು ದಿಮಾಂಡಿಂಗ್ ಅಂತ ಅನಿಸುವುದು ಅದರ ಕಾಂಪಿಟಿಟಿವ್ನೆಸ್ಸ್ ಇಂದ. ಅಂದರೆ, ನಾನು ನನ್ನ ಕೆಲಸಗಳನ್ನು ಮುಗಿಸುವುದಕ್ಕೆ ಇಷ್ಟು ಸಮಯ ಬೇಕು ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಅದು ಬೇರೆಯವರು ಎಷ್ಟು ಕೆಲಸ ಮಾಡುತ್ತಾರೆ ಅನ್ನುವುದರ ಆದಾರದ ಮೇಲೆ ನಿಂತಿದೆ.


ಪ್ರಶ್ನೆ: ಇಂತಹ ಕಾಂಪಿಟಿಟಿವ್ನೆಸ್ಸ್ ಬೇರೆ ಕ್ಷೇತ್ರದಲ್ಲು ಇರಬಹುದಲ್ಲಾ?
ಉತ್ತರ: ಇರಬಹುದು. ಆದರೆ ಬೇರೆ ಕ್ಷೇತ್ರದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕುವುದು ಕಡಿಮೆ. ಕೆಲಸದ ಭಯ (ಇನ್ಸೆಕ್ಯೂರಿಟಿ ಫೀಲಿಂಗ್) ಐಟಿಯಲ್ಲಿ ಹೆಚ್ಚು.


ಪ್ರಶ್ನೆ: ಬೇರೆ ಎಷ್ಟೋ ಜನ ಕೆಲಸ ಕಳ್ಕೊಂಡಿಲ್ವಾ? ಬಾಂಕು, ಸಪ್ಪೋಟು ಇಟಿಸಿ.
ಉತರ: ಹೌದು. ಇಲ್ಲಿ ಐಟಿ ಅಂದರೆ ಎಮ್‍ಎನ್‍ಸಿ ಅಂತ ಹೇಳ್ಬಹುದಾ ಹಾಗಿದ್ದರೆ? ಎಮ್‍ಎನ್‍ಸಿನವರಿಗೆ ಮಾನವೀಯತೆ ಸ್ವಲ್ಪ ಕಡಿಮೆ ;-)


ವೈಯಕ್ತಿಕವಾಗಿ ನಾನು ಇಂತಹ ಮಾತುಗಳನ್ನು ಒಪ್ಪುವುದುಲ್ಲ. ನಾನು ಕೂಡ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೀನಿ. ಆದರೆ ನನ್ನ ಕೆಲಸ ನನ್ನ ಪ್ರವೃತ್ತಿಗೆ ಅಡ್ಡಿ ಬಂದಿತೆಂದು ನನಗೆ ಅನಿಸುವುದಿಲ್ಲ. ಆದರೆ ಐಟಿನವರು ತಮ್ಮ ಮನೆತನದ ಸಂಸ್ಕೃತಿಯನು ಮರೆಯುತ್ತಿರುವುದು ನಿಜವಲ್ಲವೇ? ಸೋ ... ಇಲ್ಲಿ (ಐಟಿನಲ್ಲಿ) ಅದೊಂತರಾ ಸೆಳೆತನ ಇದೆ ಅಂತ ಅರ್ಥ ಅಲ್ವಾ? ನನ್ನಲ್ಲೂ ಈ ಆಕರ್ಷಣೆ ಮೂಡಿದ್ರೆ? ನಾನೂ ಹೀಗೇ ಎಲ್ಲರಂತೆ ಇಲ್ಲೇ ಕೊಳಿಬೇಕಾ? ಇದಿಲ್ಲದಿದ್ದರೆ ಏನು ಮಹಾ? ಸುಮ್ಮನೆ ಇಲ್ಲಿಂದ ಹೊರಗೆ ಬಂದು ಮತ್ತೇನಾದರೂ ಮಾಡುವುದರ ಬಗೆ ಯೋಚಿಸಬಹುದಲ್ಲವೇ!!


ಪ್ರಶ್ನೆ: ಯಾಕೆ ಕೆಲಸ ಬೀಡಬೇಕು? ಕೆಲಸ ಇಷ್ಟ ಆಗ್ತಿಲ್ವಾ?
ಉತ್ತರ: ಕೆಲಸ ಇಷ್ಟ. ನನಗೇನು ತೊಂದರೆ ಇಲ್ಲ ಇಲ್ಲಿ. ಒಳ್ಳೆ ಹೆಸರೂ ಇದೆ. ಯಾರ ಜೊತೆನೂ ಜಗಳವಾಡಿಲ್ಲ. ನಾನೇನು ರಾತ್ರಿಯೆಲ್ಲ ಕೂತು ಕೆಲಸ ಮಾಡ್ಬೇಕಿಲ್ಲ. ಬರಿ ೬ ಗಂಟೆವರಿಗೆ ಅಷ್ಟೆ. ಆದರೆ ಬೇರೆಯವರ ದೃಷ್ಟಿಕೋನ ಬೇರೆ ರೀತಿಯಲ್ಲಿ ಇದೆ. ಮಾತುಮಾತಿಗೂ ಅವರು ಕೇಳುವ ಪ್ರಶ್ನೆ "ನೀನು ಐಟಿನಲ್ಲಿ ಇದಿಯಾ. ಯಾವ ತೊಂದರೆಯೂ ಇಲ್ಲ. ಅದಕ್ಕೆ ನಿನಗೆ ನಮ್ಮ ಕಷ್ಟ ಅರ್ಥ ಆಗಲ್ಲ" ಅಂತ. ಮುಂದೆ ನಾನೇನು ಮಾತಾಡ್ಲಿ?


ಪ್ರಶ್ನೆ: ಇದನ್ನು ಬಿಟ್ಟು ಇನ್ನೇನು ಮಾಡ್ಬೇಕು ಅಂತ ಯೋಚನೆ ಮಾಡ್ತಿದೀಯ?
ಉತ್ತರ: ಗೊತ್ತಿಲ್ಲ.


ಪ್ರಶ್ನೆ: ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುವ ಪ್ಲಾನ್?
ಉತ್ತರ: ನನ್ನ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಹೋಗಬೇಕಾದರೆ ಕೆಲವೊಂದು ಅರ್ಹತೆಗಳಿರಬೇಕು. ಈಗ ಸಧ್ಯಕ್ಕೆ ಅದು ನನಗೆ ಇದೆ ಅಂತ ನನಗೆ ಅನಿಸುತ್ತಿಲ್ಲ. ಸುಮ್ಸುಮ್ನೆ ಎಲ್ಲರೂ ಅಲ್ಲಿಗೆ ಹೂಗಕ್ಕಾಗಲ್ಲ.


ಪ್ರಶ್ನೆ: ಮುಂದೆ ಏನು ಅಂತ ಗೊತ್ತಿಲ್ದೇನೆ ಇದ್ದರೆ ಹೇಗೆ? ಹೊಟ್ಟೆಗೆ ಏನು ಮಾಡ್ತೀಯ?
ಉತ್ತರ: ದೇವರು ಏನಾದ್ರು ಒಂದು ದಾರಿ ತೋರಿಸ್ತಾನೆ.


ಪ್ರಶ್ನೆ: ನಿನಗೆ ಇನ್ನೂ ಮದುವೆ ಕೂಡ ಆಗಿಲ್ಲ. ಕೆಲಸಾನೂ ಇಲ್ಲದಿದ್ರೆ ನಿನಗೆ ಯಾರು ಹೆಣ್ಣು ಕೊಡೊಲ್ಲ.
ಉತ್ತರ: !!!


ಪ್ರಶ್ನೆ: ಉದ್ಯೋಗಂ ಪುರುಷಲಕ್ಷಣಂ.
ಉತ್ತರ: ಹೌದು. ಆದರೆ ಉದ್ಯೋಗ ಅಂದ್ರೆ ಏನು? ದುಡ್ದು ಸಂಪಾದಿಸುವ ಕೆಲಸಮಾತ್ರವೇ ಉದ್ಯೋಗವೇ? ಮನೆಯಲ್ಲಿ ಗಾರ್ಡನಿಂಗ್, ವೇದಪಾಠ, ಬ್ಲಾಗಿಂಗ್, ಸಮಾಜ ಸೇವೆ, ಓದು, ಅಂತ ಆಕ್ಟಿವ್ ಆಗಿ ಇದ್ದರೆ ಅದು ಉದ್ಯೋಗ ಅಂತ ಅನ್ನಿಸ್ಕೊಳಲ್ವಾ? ಬರೀ ದುಡ್ಡಿನಿಂದ ಇದನ್ನು ಅಳಿಯಬೇಕಾ?
....
....
ಪ್ರಶ್ನೆ: ಇವಾಗ ಏನು ನಿನ್ನ ಪ್ರಾಬ್ಲಮ್ಮು?
ಉತ್ತರ: ಇವತ್ತು "ವಿಶ್ವ ಮಂಗಲ ಗೌ ಗ್ರಾಮ ಯಾತ್ರೆ"ಯ ಸಮಾವೇಶ ಬೆಂಗಳೂರಿನಲ್ಲಿ ಇದೆ. ಆದರೆ ನನಗೆ ಹೋಗಕ್ಕೆ ಅಗ್ತಿಲ್ಲ. ಇಲ್ಲಿ ನನ್ನನ್ನು ಯಾರು ಕಾಟ್ಟಾಕಿಲ್ಲ. ಆದರೆ ವೃತ್ತಿಧರ್ಮ ಅಂತ ಇದೆಯಲ್ಲಾ? ನನ್ನ ಜವಾಬ್ದಾರಿಯನ್ನ ಬಿಟ್ಟು ಹೋಗಕ್ಕೆ ಮನಸ್ಸಿಲ್ಲ. ಬಿಡುವುದಕ್ಕೂ ಮನಸ್ಸಿಲ್ಲ.


ಓಓಓ ಹಾಗೆ!!!


ಎಲ್ಲವೂ ದ್ವಂದ್ವಮಯವಾಗಿದೆ. ಇಷ್ಟೊತ್ತು ಏನೇನು ಬರ್ದೆ ಅಂತ ಕೂಡ ಗೊತ್ತಾಗ್ತಿಲ್ಲ. ನಿಮಗೇನಾದ್ರು ಅರ್ಥ ಆಯ್ತಾ?

ಚಿತ್ರ: ಅಂತರ್ಜಾಲ

Saturday, November 14, 2009

ಮಾಮಕಾಃ ಪಾಂಡವಾಶ್ಚೈವ


ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ

ಮಾಮಕಾಃ ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ


ಭವದ್ಗೀತೆಯ ಈ ಸಾಲು ಎಲ್ಲರಿಗೂ ಚಿರಪರಿಚಿತ. ಕುರುಕ್ಷೇತ್ರ ಮಹಾಯುದ್ಧದ ಮೂಲ ಕಾರಣ, ಈ ಒಂದು ಸಾಲು ಎತ್ತು ತೋರಿಸುತ್ತದೆ. ಮಹಾರಾಜ ಧೃತರಾಷ್ಟ್ರ, ಸಂಜಯನಿಗೆ ಹೇಳುವ ಮಾತಿದು. ಕುರುಕ್ಷೇತ್ರದ ಯುದ್ಧದಲ್ಲಿ ನಡೆಯುವ ಪ್ರಸಂಗಗಳನ್ನು ವಿವರಿಸುವಂತೆ ಸಂಜಯನಿಗೆ ಹೇಳುತ್ತಾನೆ. ಇಲ್ಲಿ ಕೌರವರನ್ನು "ಮಾಮಕಾಃ" ಎಂಬಲ್ಲಿ "ನನ್ನವರು ಮತ್ತು ಪಾಂಡವರು" ಎಂದು ಒಂದೇ ಮನೆಯಲ್ಲೇ ಇದ್ದು ಬೆಳೆದ ಕೌರವ-ಪಾಂಡವರನ್ನು ಬೇರೆಬೇರೆಯಾಗೇ ಕಾಣುತ್ತಾನೆ. ಮೊನ್ನೆ "ವಂದೇ ಮಾತರಮ್" ಹಾಡಿಗೆ ಫತ್ವಾ ಹೊರಡಿಸಲಾಗಿದೆ. ಕಾರಣ, ಮುಸಲ್ಮಾನರು ಬೇರೆ ಯಾರನ್ನೂ ಪೂಜಿಸಬಾರದೆಂದು. ಇವರಿಗೂ ಅಂಧ ಧೃತರಾಷ್ಟ್ರನಿಗೂ ಇರುವ ವ್ಯತ್ಯಾಸ ಇಷ್ಟೇ, ಆ ಅಂಧರಾಜ ರಾಷ್ಟ್ರದ ಹಿತದ ಬಗ್ಗೆ ಯೋಚಿಸದೆ, ತನ್ನ ಮಕ್ಕಳ ಅಧಿಕಾರದ ಸ್ವಾರ್ಥ ಮನೋಭಾವವನ್ನೇ ಬೆಳೆಸಿಕೊಂಡು ಬಂದ. ಇವತ್ತು ಒಂದು ಮತದ ಸ್ವಾರ್ಥಕ್ಕೆ ರಾಷ್ಟ್ರವನ್ನು ಪೂಜಿಸುವ ಗೀತೆಯನ್ನು ತಡೆದು ನಿಲ್ಲಿಸುವ ಪ್ರಯತ್ನ.


ಕುರುಕ್ಷೇತ್ರ ಯುದ್ದದ ಪ್ರಾರಂಭದಲ್ಲಿ ಅರ್ಜುನ ತನ್ನ ಶಸ್ತ್ರಾಸ್ತ್ರಗಳನ್ನು ಕಳಚಿ, ಕೆಳಗಿಟ್ಟು ತಾನು ಯುದ್ಧ ಮಾಡುವುದಿಲ್ಲವೆಂದು ಹೇಳುತ್ತಾನೆ. ಕಾರಣ, ತನ್ನ ಶತ್ರುಸೈನ್ಯದಲ್ಲಿ ಅವನಿಗೆ ಎಲ್ಲರೂ ತನ್ನವರೇ ಕಾಣಿಸುತ್ತಾರೆ (ಸ್ವಜನೇ ಶತೃಸೈನ್ಯೆ). ಕೌರವರಿಗೂ ಪಾಂಡವರಿಗೂ ಇದ್ದ ವ್ಯತ್ಯಾಸ ಈ ಮನೋಭಾವವೇ. ಆದರೆ ತನ್ನವರು ಎಂಬ ಮಮಕಾರಕ್ಕಿಂತ, ರಾಷ್ಟ್ರದ ಹಿತ ಮುಖ್ಯ, ಧರ್ಮವನ್ನು ಕಾಪಾಡುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶ್ರೀ ಕೃಷ್ಣ ನಮಗೆಲ್ಲರಿಗೂ ಗೀತೆಯ ಮೂಲಕ ಸಂದೇಶವನ್ನು ಕೊಟ್ಟಿದ್ದಾನೆ. ಭಗವದ್ಗೀತೆಯ ಪೂರ್ಣ ಸಾರವನ್ನು ತಿಳಿಯಬೇಕಾದರೆ, ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಯಬೇಕು.


ವಂದೇ ಮಾತರಮ್ ವಿರುದ್ಧ ಮಾತುಗಳು ಕೇಳುತ್ತಿರುವುದು ಇದೇನು ಮೊದಲನೆಯ ಸಲವಲ್ಲ. ಆದರೆ ಎಷ್ಟು ಸಲ ಇದರ ಬಗ್ಗೆ ಮಾತಾದರೂ, ಇದರ ಬಗ್ಗೆ ಹೆಚ್ಚು ಜನ ಕಾಳಜಿಯನ್ನೇ ತೋರಿಸುವುದಿಲ್ಲ. ಅದು ತಪ್ಪಲ್ಲ. ಕೆಟ್ಟದ್ದನ್ನು ಇಗ್ನೋರ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು. ಇತಿಹಾಸವು ನಮಗೆ ತೋರಿಸುವ ಘೋರಾತಿಘೋರ ವನ್ನಿವೇಷಗಳನ್ನು ನಾವು ಎಷ್ಟು ಬೇಗ ಮರೆತುಬಿಡುತ್ತೇವೆ ಅಲ್ಲವೇ? ಎಲ್ಲವನ್ನೂ ಮರೆತರೆ ಇತಿಹಾಸ ಓದುವುದಾದರೂ ಯಾಕೆ?


ರಮಾಯಣದಲ್ಲಿ ಕೈಕೇಯಿ-ಮಂತರರ ಪಿತೂರಿಯಿಂದ ರಾಮ ಕಾಡಿಗೆ ಹೋಗಬೇಕಾಯಿತು. ಕೈಕೇಯ ರಾಜ್ಯ ಈಗಿನ ಅಫ್ಗಾನಿಸ್ಥಾನ್-ರಶ್ಶ್ಯಾ ಬಾರ್ಡರ್. ಅವರು ಭಾರತಕ್ಕೆ ಬಂದಿದ್ದು ಈಗ ಭಯೋತ್ಪಾದಕರು ಬರುತ್ತಿರುವ ದಾರಿಯಲ್ಲೇ. ಮಹಭಾರತದಲ್ಲಿ, ಗಾಂಧಾರಿ-ಶಕುನಿಯರು ಕೂಡ ಬಂದಿದ್ದು ಅದೇ ದಾರಿಯಲ್ಲೇ. ಈಗಲೂ ನಾವು ಈ ದಾರಿಯನ್ನು ಮುಕ್ತವಾಗಿ ಓಡಾದಲು ಬಿಡುತ್ತಿದ್ದೇವೆ. ಭಾರತೀಯರು ಎಷ್ಟು ಕರುಣಾಮಯಿಗಳು. ಎಲ್ಲರಿಗೂ "ಬನ್ನಿ ಬನ್ನಿ, ನಮ್ಮನ್ನು ದೋಚಿ, ನೀವು ಸುಖವಾಗಿರಿ" ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇಂತಹವರನ್ನು ತನ್ನ ಭೂಮಿಯಲ್ಲಿ ಹೆತ್ತಿದ್ದಕ್ಕೆ ಭಾರತ ಮಾತೆ ಎಷ್ಟು ಸಂತೋಶ ಪಡುತ್ತಿದ್ದಾಳೋ.


ದ್ವಾಪರಯುಗದಲ್ಲಿ ಶ್ರೀ ಕೃಷ್ಣ, ಸಮುದ್ರದ ನೆಲದಲ್ಲೇ ದ್ವಾರಕೆಯೆಂಬ ನಗರವನ್ನು ನಿರ್ಮಾಣ ಮಾಡಿದ. ಸಮುದ್ರದಿಂದ ಬರುವ ಅಪಾಯಗಳಿಂದ ರಾಷ್ಟ್ರವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಲಿ. ನಂತರ ಏನಾಯಿತು ನೋಡಿ. ಮಹಮ್ಮದ್ ಘಝ್ನಿ ಸಮುದ್ರಿಂದ ದಾಳಿ ನಡೆಸಿ ಸೊಮನಾಥ ದೇವಾಲಯವನ್ನು ಮಟ್ಟ ಹಾಕಿದ ಎಂದು ಕೇಳ್ಪಟ್ಟೆ. ಇತ್ತೀಚೆಗೆ ನಡೆದ ಮುಂಬೈ ದಾಳಿಯಲ್ಲಿ ಕೂಡ ಭಯೋದ್ಪಾದಕರು ಸಮುದ್ರದಿಂದ ಬಂದಿಳಿದಿದ್ದರು. ಆದರೆ ನಾವು ಭಾರತೀಯರು ತೆರೆದ ಹೃದಯದಿಂದ ಎಲ್ಲರನ್ನೂ ಒಪ್ಪಿಕೊಳ್ಳಬೇಕಲ್ಲವೇ? ಅದಕ್ಕೇ ಹೊಸ ಭದ್ರಕೋಟೆಗಳನ್ನು ಕಟ್ಟುವುದಿಲ್ಲ. ಬೇರೆಯವರು ನಮ್ಮ ಮೇಲೆ ಎಷ್ಟು ಕೈ ಮಾಡಿದರೂ ನಾವು ಅಂತಹ ದುಃಸಾಹಸಕ್ಕೆ ಕೈ ಹಾಕುವುದಿಲ್ಲ. ಸುಭಾಶ್ ಚಂದ್ರ ಬೋಸ್ ಅವರ "ಇಂಡಿಯನ್ ನಾಶನಲ್ ಆರ್ಮಿ" ಇಂದ ನಮಗೆ ಸ್ವಾತಂತ್ರ್ಯ ಬಂದಿದ್ದು ನಿಜವಾದರೂ, ನಾವು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ನಾವು ಅಹಿಂಸಾವಾದಿಗಳಲವೇ?


ಅರ್ಜುನ, ಚಂದ್ರಗುಪ್ತರು ನಮಗೆ ಸಿಗಬಹುದೇನೋ. ಆದರೆ ಅವರ ಸಾರಥಿಯಾಗಿ ಒಬ್ಬ ಶ್ರೀ ಕೃಷ್ಣ, ಚಾಣಕ್ಯ ಅಥವಾ ವಿವೇಕಾನಂದ ಬರಬಾರದೇ?

Wednesday, October 28, 2009

೫೦೦ರ ಸಂಭ್ರಮ


ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.

ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.

ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?

ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.

Wednesday, October 14, 2009

ಮರಳಿ ಬಾ ಪುಣ್ಯಕೋಟಿ



ಬಹಳ ವರುಷಗಳಿಂದ ನನಗೊಂದು ಆಸೆ. ಮನೆಯಲ್ಲಿ ಒಂದು ಹಸು ಇರಬೇಕೆಂದು. ಆದರೆ ಈ ಬೆಂಗಳೂರಿನಲ್ಲಿ ಅದನ್ನು ಮೇಯಿಸಲು ಎಲ್ಲಿಗೆ ಕಳಿಸುವುದು? ಹಸು ಆರೋಗ್ಯದಿಂದ ಇರಬೇಕಾದರೆ ಅದು ದಿನಕ್ಕೆ ಐದಾರು ಗಂಟೆಗಳವರಿಗಾದರೂ ಓಡಾಡಿ ಮೇಯಬೇಕು. ಕೂತಲ್ಲೇ ಕೂತರೆ ಅದು ನಿಶ್ಪ್ರಯೋಜಕವಾಗುತ್ತದೆ. ನನ್ನ ಕನಸು ಕನಸಾಗಿಯೇ ಉಳಿಯಿತು.


ಹಸು ಮನೆಯಲ್ಲಿದ್ದರೆ ಮನೆಗೆ ಒಳ್ಳೆಯದು ಎಂಬ ಭಾವನೆ ಇದೆ. ಹಸುವಿನ ಪ್ರಯೋಜನ ಎಲ್ಲರಿಗೂ ತಿಳಿದ ವಿಷಯವೇ. ಪಾಕೆಟ್ ಹಾಲಿಗಿಂತ ಹಸುವಿನ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಪುಷ್ಟಿದಾಯಕ ಎಂದು ವಿಜ್ಙಾನವೇ ಹೇಳುತ್ತದೆ. ಅದರ ಮೂತ್ರ, ಸಗಣಿಯಿಂದ ನಿರೋಧಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಸುವೊಂದಿದ್ದರೆ ಎಚ್೧ಎನ್೧ ಗೆ ಹೆದರಬೇಕಾಗಿಲ್ಲ ಅಲ್ಲವೇ?
ಈಗ ಯಾಕಪ್ಪ ಇದರ ಬಗ್ಗೆ, ಅದೂ ಬೆಂಗಲೂರಿನಲ್ಲಿ ಅಂತ ಯೋಚನೆ ಮಾಡ್ತಿದಿರಾ? ಭಾರತೀಯ ಹಸುವಿನ ೧೦೦ಕ್ಕೂ ಹೆಚ್ಚು ತಳಿಗಳಲ್ಲಿ ಕೇವಲ ೩೩ ತಳಿಗಲು ಇನ್ನು ನಶಿಸದೇ ಉಳಿದುಕೊಂಡಿದೆ. ಇದರ ಬಗ್ಗೆ ನಾವು ಏನು ಮಾಡುತ್ತಿದ್ದೀವಿ?


ನಮ್ಮ ಇತಿಹಾಸದಲ್ಲಿ ನಾವು ನೋಡುತ್ತೇವೆ, ಹಸುಗಳು ಆಧಾರವಾಗಿದ್ದ ರಾಜ್ಯಗಳು ಬೆಳವಣಿಗೆಯ ಹಾದಿಯಲ್ಲಿ ಸಾಗಿತು. ಆದರೆ ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ. ನಮ್ಮ ಪ್ರಧಾನ ಉದ್ಯಮ ಕೃಶಿ ಎಂದು ಹೇಳಿಕೊಂಡರೂ, ನಾವು ಪಾಶ್ಚಾತ್ಯದ ಹಾದಿನನ್ನು ಅನುಸರಿಸುತ್ತಿದ್ದೇವೆ. ಹಳ್ಳಿಗಳಿಂದ ರೈತರು ತಮ್ಮ ಬೇಸಾಯವನ್ನು ಬಿಟ್ಟು ಪಟ್ಟಣದ ಕಡೆ ಮುಖ ಮಾಡಿದ್ದಾರೆ. ಅವರನ್ನು ದೂಶಿಸುವುದು ಉಚಿತವಲ್ಲ. ಪಟ್ಟಣಗಳಲ್ಲಿರುವವರು ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ರೈತರು ಮಾತ್ರ ಹಳ್ಳಿಗಳಲ್ಲೇ ಉಳಿಯಬೇಕು ಎಂದು ನಾವು ಯಾಕೆ ನಿರೀಕ್ಷಿಸಬೇಕು? ಆದರೆ ಹೀಗಯೇ ಮುಂದುವರೆದರೆ, ನಮ್ಮಲ್ಲಿ ಹಣವಿರಬಹುದೇನೋ ಆದರೆ ಉಣ್ಣಲು ಅನ್ನ ಇರುವುದಿಲ್ಲ. ಹೇಗೆ ಕಳೆದ ೨೦-೨೫ ವರುಷಗಳಿಂದ ಪಟ್ಟಣಗಳಲ್ಲಿ ಐಟಿ ಆಂದೋಲನವಾಯಿತೋ ಹಾಗೆ ಈಗ ಕೃಶಿ ಮತ್ತು ಗೋ ಆಂದೋಲನವಾಗಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಅದೋಗತಿ. ಗೋವನ್ನು ಕಾಪಾಡುವುದು ಎಲ್ಲರ ಕರ್ತವ್ಯವಲ್ಲವೇ? ಅದು ಬರಿ ರೈತರಿಗೆ ಸಂಬಂದಪಟ್ಟ ವಿಷಯವೇ?


ಸೆಪ್ಟಂಬರ್ ೩೦ನೇ ತಾರೀಕು ಕುರುಕ್ಷೇತ್ರದಲ್ಲಿ "ವಿಷ್ವ ಮಂಗಲ ಗೋ-ಗ್ರಾಮ ಯಾತ್ರೆ" ಪ್ರಾರಂಭವಾಯಿತು. ಯಾತ್ರೆ ೧೦೮ ದಿನ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದಲೂ ಸಾಗಿ ನಾಗಪುರದಲ್ಲಿ ಅಂತ್ಯಗೊಳ್ಳಲಿದೆ. ಬೆಂಗಲೂರಿಗೆ ಡಿಸೆಂಬರ್ ೧ನೇ ತಾರೀಕು ಬರುತ್ತದೆ. ಭಾರತದ ಪ್ರತಿಷ್ಠಿತ ಸ್ವಾಮಿ-ಸಂತರು ಸೇರಿ ಮಾಡುತ್ತಿರುವ ಈ ಕಾರ್ಯಕ್ರಮ, ಹೆಚ್ಚು ಜನರನ್ನು ಗೋ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ http://kan.gougram.org/ ಗೆ ಭೇಟಿನೀಡಿ.


ಇದರಲ್ಲಿ ನಮ್ಮ ಪಾತ್ರವೂ ಇದೆ. ಈ ಯಾತ್ರೆಯ ಫಲ ಹೆಚ್ಚು ಜನರಿಗೆ ಮುಟ್ಟಬೇಕಾಗಿದೆ. ಹೆಚ್ಚೆಚ್ಚು ಜನರು, ರೈತರು, ಕೈಗಾರಿಕೋದ್ಯಮರು, ರಾಜಕಾರಿಣಿಗಳು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಈಗಲೇ ಅಡಿಗಟ್ಟು ಹಾಕಬೇಕಿದೆ. ನೀವೂ ಇದಕ್ಕೆ ಕೈ ಜೋಡಿಸ್ತೀರ ಅಲ್ವಾ?

Wednesday, September 30, 2009

ಸಹಜವೇ ಅಸಹಜ


ಇವತ್ತು ದಿನಪತ್ರಿಕೆಯಲ್ಲಿ ಓದಿದ್ದು, "ಒಬ್ಬ ಅಟೊ ಡ್ರೈವರ್ ಒಬ್ಬ ಗಿರಾಕಿಗೆ ಅವರು ಬಿಟ್ಟು ಹೋಗಿದ್ದ ಲಾಪ್‍ಟಾಪ್‍ಅನ್ನು ಹಿಂತಿರುಗಿಸಿ ಕೊಟ್ಟ" ಎಂದು. ಆ ಡ್ರೈವರ್ ಮಾಡಿದ ಕೆಲಸ ಶ್ಲಾಘನೀಯ. ಆದರೂ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ದೊಡ್ಡ ವಿಷಯವೇ? ಹೌದು ಅದು ದೊಡ್ಡ ವಿಷಯ. ಯಾಕೆಂದರೆ ಈಗಿನ ಕಾಲದಲ್ಲಿ ಅಷ್ಟು ಕೂಡ ಯಾರು ಮಾಡುವುದಿಲ್ಲ. ಅಂದರೆ, ಯಾವುದು ಸಹಜವಾಗಿ ಆಗಬೇಕೋ ಅದು ಅಪರೂಪವಾಗಿದೆ ಎಂದೇ ಅರ್ಥವಲ್ಲವೇ? ಇಂತಹ ವಿಷಯಗಳನ್ನು ಪತ್ರಿಕೆಯಲ್ಲಿ ಓದಿ ಸಂತೋಷಪಡಬೇಕೋ ದುಃಖಪಡಬೇಕೋ ತಿಳಿಯುತ್ತಿಲ್ಲ.


ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಒಂದೇ ಸುದ್ದಿ. ಕಾಂಗ್ರೆಸ್ ಪಾರ್ಟಿಯ ರಾಜಕಾರಣಿಯರು ವಿಮಾನದಲ್ಲಿ ಎಕೊನೊಮಿ ಕ್ಲಾಸ್ನಲ್ಲೇ ಪ್ರಯಾಣ ಮಾಡುತ್ತಾರಂತೆ. ಅದರ ಉದ್ದೇಶ, ಪ್ರಜೆಗಳ ಹಣವನ್ನು ತಮ್ಮ ಸುಖಕ್ಕೋಸ್ಕರ ದುರುಪಯೋಗ ಆಗಬಾರದು ಎಂದು. ಅಂದರೆ ಇಷ್ಟು ವರ್ಷ ದುರುಪಯೋಗವಾಗುತ್ತಿತ್ತು ಅಂತೆಲ್ಲವೇ? ಹೋದ ವಾರ "ಬೆತ್ತಲೆ ಜಗತ್ತು" ಲೇಖನದಲ್ಲಿ ಪ್ರತಾಪ್ ಸಿಂಹ ಇದರ ಬಗ್ಗೆ ದೇರ್ಘವಾಗಿ ಬರೆದಿದ್ದಾರೆ.


ಅಭಿಶೇಕ್ ಭಚ್ಚನ್ ಮತ್ತು ಐಶ್ವರ್ಯ ಭಚ್ಚನ್ ಅಮಿತಾಬ್ ಮತ್ತು ಜಯ ಜೊತೇಗೇ ಇರ್ತಾರೆ. ಬೇರೆ ಮನೆ ಮಾಡುವುದಿಲ್ಲವಂತೆ. ಅದಕ್ಕೇನು? ಅವನಿಗೆ ನೊಬೆಲ್ ಪ್ರೈಜ಼್ ಕೊಡಬೇಕೇ? ತಂದೆ ತಾಯಿಯ ಜೊತೆ ಇರುವುದು ಅಷ್ಟು ಅಸಹಜವಾಗಿದೆಯೇ?


ಈ ರೀತಿಯ ಸುದ್ದಿಗಳು ಪತ್ರಿಕೆಯಲ್ಲಿ ಪದೇ ಪದೇ ನೋಡುತ್ತೇವೆ. ಅದು ಬಿಡಿ. ನಮ್ಮ ನಿತ್ಯ ಜೀವನದಲ್ಲಿ ಕೂಡ ಇದನ್ನು ನೋಡಬಹುದು. ಉದಾಹರಣೆಗೆ -


ಕೆಲವರಿಗೆ ಬೆಳಗ್ಗೆ ಬೇಗ ಏಳುವುದೇ ದೊಡ್ಡ ಸಾಹಸ ಮಾಡಿದಂತೆ. ದಿನಾ ಬೇಗ ಏಳುವವರು ಎಷ್ಟೋ ಜನ ಇದ್ದಾರೆ. ಆದರೆ ಅವರನ್ನು ಕಂಡರೆ, ಅದೇನು ಮಹಾ ಅವರು ಮೊದಲಿನಿಂದಲೂ ಬೇಗ ಎದ್ದು ಅಭ್ಯಾಸ. ಅದಕ್ಕೆ ಅವರಿಗೆ ಏನು ಕಷ್ಟ ಆಗಲ್ಲ. ನಿದಾನವಾಗಿ ೯ ಅಥವ ೧೦ ಗಂಟೆಗೆ ಏಳುವವನು ಅಪರೋಪವಾಗಿ ಒಂದು ದಿನ ಬೇಗ ಎದ್ದರೆ, ಅದೇ ದೊಡ್ಡ ಸುದ್ದಿ. ಅಕ್ಕಪಕ್ಕದಲ್ಲಿದ್ದವರಿಗೆ, ನೆಂಟರಿಗೆ ಸಂತೋಷದಿಂದ ಹೇಳ್ಕೋತಾರೆ "ರೀ ಇವತ್ತು ನನ್ನ ಮಗ ಬೆಳಗ್ಗೆ ೫ ಗಂಟೆಗೇ ಎದ್ದ ಗೊತ್ತಾ?".

ರೋಡಿನಲ್ಲಿ ಪ್ರಯಾಣಿಸುವಾಗ ಒಬ್ಬ ಆಕ್ಸಿಡೆಂಟ್ ಆಗಿ ಮೃತಪಡುತ್ತಾನೆ. ಅದನ್ನು ಕೇಳಿ, "ಅದೇನು ಮಹಾ. ದಿನಾ ಆಗ್ತಾನೆ ಇರತ್ತೆ ಮರಣಗಳು". ಪ್ರತೀ ದಿನ ಆಕ್ಸಿಡೆಂಟ್ ಆದರೂ, ಒಂದು ಮರಣವನ್ನು ಅಷ್ಟು ಸಾಧಾರಣಾವಾಗಿ ಕಾಣಬಹುದೇ?

ಹೀಗೇ, "ಆಯುಧಪೂಜೆಗೆ ಅವನ ಬೈಕನ್ನು ಅವನೇ ತೊಳೆದನಂತೆ", "ಆಫೀಸಿಗೆ ಊಟ ಮನೆಯಿಂದಲೇ ತೆಗೆದುಕೊಂಡು ಹೋಗ್ತಾನೆ. ಹೊರಗಡೆ ಹೋಟೆಲ್ನಲ್ಲಿ ತಿನ್ನಲ್ವಂತೆ", "ಅವನು ಕನ್ನಡದಲ್ಲೇ ಮಾತಾಡ್ತಾನೆ" .. ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. common sense is not common ಅನ್ನುವ ಹಾಗೆ, ಯಾವುದು ಸಹಜವಾಗಿ ನಡಿಯಬೇಕೋ, ಅದೇ ಅಪರೂಪದ ವಿಷಯಗಳು. ಇದೆಲ್ಲ ಮನುಷ್ಯ ಅಷ್ಟು ಸ್ವಾರ್ಥಿ ಆಗಿರುವುದಿಂದಲೋ, ಪಾಷ್ಚಾತ್ಯ ಸಂಸ್ಕೃತಿ ನಮ್ಮನ್ನು ಹೇಗೆ ಮಾಡಿದೆಯೋ ಅಥವಾ ನಮ್ಮ ನಿರ್ದಿಷ್ಟಮಾನವೇ ಇಳಿದಿದೆಯೋ ತಿಳಿಯುತ್ತಿಲ್ಲ.

Wednesday, September 16, 2009

ಮತ್ತೆ ಬಂದ ಗೋಪಿಯ ಕಂದ


ಮೊನ್ನೆ ಶನಿವಾರ ಕೃಷ್ಣ ಮತ್ತೆ ಮನೆಗೆ ಬಂದಿದ್ದ (ದಿನಾಗ್ಲು ಮನೇಲೇ ಇರ್ತಾನೆ. ಆದರೆ ಅವನು ಇದ್ದ ಗುರುತು ಮಾತ್ರ ವರುಷಕ್ಕೆ ಒಂದೇ ಸಲ). ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು, ಮಂಟಪದ ಮೇಲೆ ಏರಿ ಕೂತೇಬಿಟ್ಟ. ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ಏನೋ ಒಂತರಾ ಕುಶಿ. ಕೃಷ್ಣನಿಗೆ ಮಾಡುವ ತಿಂಡಿತಿನಿಸುಗಳು ಇನ್ಯಾರಿಗೂ ಮಾಡುವುದೇ ಇಲ್ಲ. ಅದೇನು ಮೋಡಿ ಮಾಡಿದಾನೋ ಅವನು. ಆದರೂ ಪರವಾಗಿಲ್ಲ. ಅವನ ಹೆಸರಿನಲ್ಲಿ ನಮಗೂ ತಿಂಡಿ ಸಿಗತ್ತೆ. ಅದೂ ಒಂದಾ ಎರಡಾ, ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟು, ಬರ್ಫಿಗಳು, ಉಂಡೆಗಳು ಅಂತ ಸುಮಾರು ೧೫-೨೦ ಬಗೆಬಗೆಯ ತಿಂಡಿಗಳು ಮಾಡ್ತೀವಿ ನಮ್ಮಲ್ಲಿ. ಹೊಟ್ಟೆ ಗತಿ ಏನು ಅಂತ ಮಾತ್ರ ಕೇಳಬೇಡಿ.

ಕುಶಿ ಪಡಲು ಮತ್ತೊಂದು ಕಾರಣ ಇದೆ. ಕೃಷ್ಣೆ ಬಂದಮೇಲೆ ಹರಿಶಿನ ಕುಂಕುಮ ನೆಪದಲ್ಲಿ ಗೋಪಿಕಾ ಸ್ತ್ರೀಯರೂ ಬರಬೇಕು ಅಲ್ವೇ? ಎಲ್ಲರೂ ಬಂದು ಕೃಷ್ಣನನ್ನು ನೋಡಿ ಹೋದರು. ಕೃಷ್ಣನ ಕೃಪೆಯಿಂದ ನಮಗೂ ಅವರ ದರ್ಶನದ ಭಾಗ್ಯ ಸಿಕ್ತು ;-)

ಕೃಷ್ಣನ ಕಾಲು ಗುರುತು ಹೀಗಿತ್ತು.


ಕೃಷ್ಣ ಮಂಟಪದಲ್ಲಿ ಹೀಗೆ ಕಾಣಿಸುತ್ತಿದ್ದ.


ಎಲ್ಲಾ ಸರಿ. ಆದ್ರೆ ಯಾಕೆ ಕೃಷ್ಣನಿಗೆ ಮಾತ್ರ ಈ ಸಡಗರ? ಪಾಪ ರಾಮ ಏನು ಪಾಪ ಮಾಡಿದ್ದ? ಕೃಶ್ಣಾನೋ ಒಬ್ಬ ಗೊಲ್ಲ. ಅವನಿಗೆ ಇಷ್ಟೊಂದು ತಿಂಡಿಗಳು, ಮಂಟಪ, ರಾತ್ರಿ ನಿದ್ದೆ ಕೆಟ್ಟು ಇವನಿಗೆ ಪೂಜೆ. ಆದ್ರೆ ರಾಮ ಒಬ್ಬ ರಾಜ. ಅವನಿಗೆ ಇನ್ನಷ್ಟು ಸಡಗರ ಆಗಿರಬೇಕಲ್ಲವೇ? ಊಹು, ಬರಿ ಒಂದಿಷ್ಟು ಕೋಸಂಬರಿ ಪಾನಕ.

ರಾಜನಾದರೂ ರಾಮ ಕಾಡಿಗೆ ಹೋಗಬೇಕಾಯಿತು. ಹೆಂಡತಿಯಿಂದ ದೂರ ಇರಬೇಕಾಯಿತು. ಕೃಷ್ಣ ರಾಜಾನೂ ಅಲ್ಲ, ಮಂತ್ರಿನೂ ಅಲ್ಲ. ಆದರೂ ಗೋಕುಲದಲ್ಲಿ ಅವನೇ ರಾಜನ ಹಾಗೆ ಇದ್ದ. ಮಥುರಾಗೆ ಬಂದಮೇಲೂ ಅಷ್ಟೇ. ಒಂದಲ್ಲ ಎರಡಲ್ಲ ೧೬೦೦೦ ಹೆಂಡತಿಯರು.

ಈಗ ನೀವೇ ಹೇಳಿ, ನೀವು ಸಿಂಹಾಸನದ ಮೇಲೆ ಕೂತು ರಾಮನ ಹಾಗೆ ಆಗಬೇಕೋ ಅಥವಾ ಒಬ್ಬ ಸಾಮಾನ್ಯ ಮನುಷ್ಯನಾಗಿ ಕೃಷ್ಣನ ಹಾಗೆ ಆಗಬೇಕೋ? ಈ ರಾಜಕಾರಿಣಿಗಳು ಯಾಕೆ ಪದವಿ ಪದವಿ ಅಂತ ಸಾಯ್ತಾರೋ. ರಾಮ ಕೃಷ್ಣರನ್ನ ನೋಡಿ ಕಲ್ತ್ಗೋಬಾರ್ದೇ.

Monday, August 31, 2009

ಚಾತುರ್ಮಾಸ

ಚಾತುರ್ಮಾಸ ಬಂದರೆ ಸಾಕು, ಹಬ್ಬ ಹರಿದಿನಗಳು ಶುರು, ಮುಹೂರ್ತಗಳು ಹೆಚ್ಚು, ಎಲ್ಲೆಲ್ಲೂ ಸಡಗರವೆ. ಅದಕ್ಕೆ ಜೋಡಿಸಿಕೊಂಡು, ನನಗೆ ಆಫೀಸಿನಲ್ಲಿ ಕೆಲಸವೂ ಹೆಚ್ಚು. ಇನ್ನು ಪಿತೃ ಪಕ್ಷ ಬಂದರೆ ಕೇಳುವುದೇ ಬೇಡ. ಇರುವವರನ್ನು ಬಿಟ್ಟು ಇಲ್ಲದಿರುವವರನ್ನು ನೆನೆಸುವುದೇ ಈ ಪಕ್ಷದ ಮಹಿಮೆ. ಅದು ಮಾಡಬಾರದು, ಇದು ಮಾಡಬಾರದು ಎಂಬ ನಿರ್ಬಂಧ ಬೇರೆ. ಪಕ್ಷದಲ್ಲಿ ಅಪ್ಪನಿಗೆ ದಿನವೂ ಫಲಹಾರ ಆಗಬೇಕು. ಒಂದೇ ವೇಳೆ ಊಟ. ಅದರಲ್ಲೂ ಕೆಲವೊಂದು ತರಕಾರಿಗಳು ಉಪಯೋಗಿಸುವಹಾಗಿಲ್ಲ. ಅಯ್ಯೋ ಯಾವಾಗಾದ್ರೂ ಮುಗಿಯತ್ತೋ ಈ ಪಕ್ಷ ಅಂತ ಅಮ್ಮ ಕಾಯ್ತಿರ್ತಾರೆ.


ಈ ಚಾತುರ್ಮಾಸದಲ್ಲಿ ನಮ್ಮ ಮಠದ ಸ್ವಾಮಿಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಮಠಗಳಲ್ಲಿ ಒಂದು ನಿಯಮ ಇದೆ. ಸನ್ಯಾಸಿಗಳು ಚಾತುರ್ಮಾಸದಲ್ಲಿ ಪ್ರಯಾಣ ಮಾಡಬಾರದು. ಚಾತುರ್ಮಾಸದ ೨ ತಿಂಗಳ ಅವಧಿಯಲ್ಲಿ ಒಂದೇ ಕಡೆಯಲ್ಲಿ ಇರಬೇಕು (ಚಾತುರ್ಮಾಸ ಅಂದ್ರೆ ೪ ತಿಂಗಳಲ್ವಾ ಅಂತ ಕೇಳಬೇಡಿ. ೪ ತಿಂಗಳು ಒಂದೇ ಕಡೆ ಇರಲು ಆಗದೆ ಇದ್ದಲ್ಲಿ, ೪ ಪಕ್ಷಗಳ ಕಾಲ ಚಾತುರ್ಮಾಸ ವ್ರತವನ್ನು ಅನುಷ್ಠಾನಗೊಳಿಸುತ್ತಾರೆ). ಸ್ವಾಮಿಗಳು ಇದಾರಲ್ಲ ಅಂತ ಆಗಾಗ ಮಠಕ್ಕೆ ಹೋಗಿಬರುತ್ತೇನೆ. ರಿಸಿಶನ್ ಟೈಮ್ ನೋಡಿ, ಇದನೆಲ್ಲ ಸ್ವಲ್ಪ ಹೆಚ್ಚು ಪಾಲಿಸಬೇಕು. ಸಂಕಟ ಬಂದಾಗ ವೆಂಕಟರಮಣ ಅಂತ ಕೇಳಿಲ್ವೇ?


ಸಾಮಾನ್ಯವಾಗಿ ತಿನ್ನುವ ವಿಚಾರದಲ್ಲಿ ನಾನು ಸ್ವಲ್ಪ choosy. ಕೆಲವೊಂದು ತರಕಾರಿಗಳನ್ನು ಬಿಟ್ಟರೆ ಬೇರೆ ಯಾವುದನ್ನು ಮುಟ್ಟುವುದಿಲ್ಲ. ತುಪ್ಪದಿಂದ ಮಾಡಿದ ಸಿಹಿ ಅಂದ್ರೆ ದೂರ ಓದ್ತೀನಿ. ಚಿಕ್ಕ ವಯಸ್ಸಿನಿಂದ ಅಭ್ಯಾಸವಾಗಿರುವುದರಿಂದ ಅಮ್ಮ ಮಾಡಿದ ಸಿಹಿಗಳು ಮಾತ್ರ ತಿಂತೀನಿ. ಆದ್ರೆ ಮಠಕ್ಕೆ ಹೋದಾಗೆಲ್ಲಾ ಅಲ್ಲೇ ಊಟ. ತುಪ್ಪ ಸೋರುತ್ತಿರುತ್ತದೆ. ಆದರೂ ಬೇಸರವಿಲ್ಲದೆ ಅಲ್ಲಿ ಮಾಡಿದ ಊಟ ಮಾತ್ರ ಹೊಟ್ಟೆ ಸೇರುತ್ತದೆ. ಹೇಗೆ ಅಂತ ನನಗೂ ತಿಳಿಯದ ವಿಷಯ. ಮೊನ್ನೆ ಮಠದಲ್ಲಿ ಊಟ ಹೀಗಿತ್ತು - ಅನ್ನ, ಸೌತೆಕಾಯಿ ಕೂಟು, ಸೀ ಕುಂಬಳಕಾಯಿ ಹುಳಿ, ಸುವರ್ಣಗೆಡ್ಡೆ ಪಲ್ಯ, ಮೆಣಸಿನ ಸಾರು, ಸಜ್ಜಪ್ಪ, ಮೊಸರು. ಇದರಲ್ಲಿ ಸಾಮಾನ್ಯವಾಗಿ ಮೆಣಸಿನ ಸಾರು, ಮೊಸರು ಬಿಟ್ಟರೆ ಯಾವುದೂ ಹಿಡಿಸುವುದಿಲ್ಲ. ಆದರೆ ಮಠದಲ್ಲಿ ಎಲ್ಲವೂ ರುಚಿಯೇ. ಎಲೆಯಲ್ಲಿ ಸ್ವಲ್ಪವೂ ಮಿಗಿಸದೆ, ತಿಂದಿದ್ದೆ. ಮಠದಲ್ಲಿ ತಿಳಿದವರು ಒಬ್ಬರು, ಸ್ವಲ್ಪ ಸಜ್ಜಪ್ಪವನ್ನು ಮನೆಗೂ ಪಾರ್ಸೆಲ್ ಮಾಡಿಕೊಟ್ಟರು. ಆದರೆ, ಮನೆಯಲ್ಲಿ ಅದು ಬೇಡವಾಗಿಹೋಯಿತು. ಏನು ವಿಚಿತ್ರ ಅಲ್ವ?


ಇನ್ನು ಈ ಸಲದ ಚಾತುರ್ಮಾಸ ನನಗೆ ಇನ್ನೂ ಸ್ಪೆಷಲ್. ಅಪ್ಪನಿಗೆ ೬೦ ವರುಷ ತುಂಬಿತು. ೨ ದಿನ ಆಫೀಸಿಗೆ ಚಕ್ಕರ್ ಹೊಡ್ದು, ಅಪ್ಪ ಅಮ್ಮನಿಗೆ ಮತ್ತೊಮ್ಮೆ ಮದುವೆ ಮಾಡಿಸಿಯಾಯಿತು. ಅವರ ಮೊದಲನೇ ಮದುವೆ ನಾನು ನೋಡಿರ್ಲಿಲ್ವಲ್ಲ ಅದಕ್ಕೆ ;-)


೪ ದಿನ ಆದ್ಮೇಲೆ ಆಫೀಸಿಗೆ ಬಂದಿದೀನಿ ಇವತ್ತು. ಪ್ರತೀ ಸೋಮವಾರ ಇರುವ ಮಂಡೆ ಬ್ಲೂಸ್ ಜೊತೆಗೆ, ೪ ದಿನಗಳಿಂದ ಬರದ ಕಾರಣದಿಂದ ಕೆಲಸದ ದಿನಚರಿಗೆ ಮನಸ್ಸು ಇನ್ನೂ ಒಗ್ಗಿಲ್ಲ. ಅದಕ್ಕೇ ಇದನ್ನ ಬರಿತಾ ಇದ್ದೀನಿ.

Thursday, August 13, 2009

ಬಾಳಿಗೊಂದು ನಂಬಿಕೆ



ಮೊನ್ನೆ ಭಾನುವಾರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅದರ ಹಿಂದಿನ ದಿನ ನಾನು ತರಕಾರಿ ಮಾತು ಇನ್ನಿತರ ಸಾಮಾನು ತರಲು ಮಾರುಕಟ್ಟೆಗೆ ಹೋದೆ. ನಾಲ್ಕೈದು ಅಂಗಡಿಗಳಿಗೆ ಬೇಟಿ ಕೊಟ್ಟು ಚೌಕಾಸಿ ಮಾಡಿ ತರಕಾರಿ ಕೊಂಡಾಯಿತು. ಚೀಲವನ್ನು ಅಲ್ಲೇ ಒಂದು ಅಂಗಡಿಯಲ್ಲಿ ಇಟ್ಟು, ಅಡಿಕೆ ಪಟ್ಟೆಗಳನ್ನು (ಅಡಿಕೆ ಎಲೆಗಳಿಂದ ಮಾಡಿದ ತಟ್ಟೆ) ಕೊಂಡುಕೊಳ್ಳಲು ಹೋದೆ.

ಆ ಅಂಗಡಿಯಲ್ಲಿ ಇದ್ದಿದ್ದು ಒಬ್ಬಳು ಮಹಿಳೆ, ಸುಮಾರು ೨೫-೨೬ ವರ್ಷ ಇರಬಹುದೇನೋ. ಕೈಯಲ್ಲಿ ಸುಮಾರು ಒಂದು ವರುಷದ ಮಗು, ಕಾಲ ಬುಡದ ಹತ್ತಿರ ಮತ್ತೊಂದು ಮಗು, ಸುಮಾರು ೩ ವರುಷ ವಯಸ್ಸಿನ ಹುಡುಗಿ. ಅಂಗಡಿಯಲ್ಲಿ ಬೇರೆ ಯಾರು ಇರಲಿಲ್ಲ. ಅಂಗಡಿಯ ಜವಾಬ್ದಾರಿಯೆಲ್ಲವೂ ಆಕೆಗೇ. ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾಳೆ ಭೇಷ್ ಅನಿಸಿತು.
ಅಡಿಕೆ ಪಟ್ಟೆಗಳನ್ನು ನೋಡಿ, ಬೆಲೆ ವಿಚಾರಿಸಿ, ದೊಡ್ಡ ಗಾತ್ರದ ಪಟ್ಟೆಗಳನ್ನು ಕೊಂಡುಕೊಳ್ಳುವೆ, ೨೦೦ ಪಟ್ಟೆಗಳು ಬೇಕು ಎಂದೆ.
"ಬ್ಯಾಗ್ ಇದೆಯಾ ಅಣ್ಣ?" ಎಂದಳು.
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."

ಪಟ್ಟೆಗಳು ಇಟ್ಟಿದ್ದ ಸ್ಥಳ ನನಗೆ ಕಾಣಿಸುತ್ತಿರಲಿಲ್ಲ. ಒಂದು ಪರದೆ ಅಡ್ಡ ಇತ್ತು. ಒಂದು ಪಟ್ಟೆಯ ಗಂಟನ್ನು ತೋರಿಸಿ, ಆ ತರಹದ ಪಟ್ಟೆಗಳನ್ನು ಹಾಕು ಎಂದು ಹೇಳಿದೆ. ಒಂದು ಗೋಣಿಚೀಲದಲ್ಲಿ ಹಾಕಿ ಚೀಲದ ಬಾಯನ್ನು ಕಟ್ಟುತ್ತಿದ್ದಾಗ -

"ಏನಮ್ಮ ಇದರಲ್ಲಿ ೨೦೦ ಪಟ್ಟೆಗಳು ಇದೆಯಾ?" ಎಂದು ಕೇಳಿದೆ.
"ಹು ಅಣ್ಣ. ನೀವೇ ಒಂದು ಸಲ ನೋಡ್ಬಿಡಿ ಬೇಕಿದ್ದರೆ."
"ಪರವಾಗಿಲ್ಲ ಬಿಡು. ನಿನ್ನನ್ನ ನಂಬ್ತೀನಿ."

ಎಲ್ಲವನ್ನೂ ಕೊಂಡು, ಚೀಲವನ್ನು ನನ್ನ ಬೈಕಿನ ಹಿಂಬಾಗಕ್ಕೆ ಕಟ್ಟಿ, ಮನೆಗೆ ಬಂದದ್ದೇ ಒಂದು ಸಾಹಸ. ಸ್ವಲ್ಪ ಹೊತ್ತು ನಂತರ, ಚೀಲವನ್ನು ಬಿಚ್ಚಿ ಅಡಿಕೆ ಪಟ್ಟೆಗಳನ್ನು ತೆಗೆದಾಗ, ನನಗೆ ಎಲ್ಲಿಲ್ಲದ ಕೋಪ. ದೊಡ್ಡ ಗಾತ್ರದ ೨೦೦ ಪಟ್ಟೆಗಳನ್ನು ಕೇಳಿದರೆ, ಅಲ್ಲಿ ಇದ್ದದ್ದು ೯೦ ದೊಡ್ಡ ಗಾತ್ರದ ಮತ್ತು ೭೫ ಸ್ವಲ್ಪ ಚಿಕ್ಕದಾದ ಪಟ್ಟೆಗಳು. ಈ ಲೋಕದಲ್ಲಿ ನಂಬಿಕೆಗೆ ಬೆಲೆಯೇ ಇಲ್ಲವೇ? ಸೆರಿ, ಇನ್ನೇನು ಮಾಡುವುದು, ನನ್ನ ಹಣೆಯಲ್ಲಿ ಇವತ್ತು ಮೋಸಹೊಗಬೇಕು ಎಂದು ಬರೆದಿದೆ ಅಷ್ಟೆ. ನಾನೇ ಎಣಿಸಿ ತರಬೇಕಿತ್ತು. ಸುಮ್ಮನಾಗಿಬಿಡೋಣ ಎಂದು ನಿಶ್ಚಯ ಮಾಡಿದ್ದೆ. ನಾಳೆ ಯಾವತ್ತಾದ್ರು, ನೀನು ಮೋಸ ಹೋಗಿ ಅದನ್ನು ಪ್ರಶ್ನಿಸಲಿಲ್ಲ ಎಂದು ವಿಷಾದ ಉಂಟಾದರೆ? ಅಂಗಡಿಗೆ ಹೋಗಿ ಒಂದು ಸಲ ಕೇಳಿಯೇ ಬಿಡೋಣ. ಅವಳು ಒಪ್ಪಿದರೆ ಸೆರಿ, ಇಲ್ಲದಿದ್ದರೆ ಅವಳಿಗೆ ಒಳ್ಳೆಯದನ್ನೇ ಹರಸಿ ಮರಲಿಬಿಡೋಣ ಎಂದು ಚಿಕ್ಕ ಗಾತ್ರದ ಪಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಹೊರಟೇಬಿಟ್ಟೆ.

"ಏನಮ್ಮ, ನಾನು ಬೆಳಗ್ಗೆ ಬಂದು ೨೦೦ ಪಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಜ್ಞಾಪಕ ಇದಿಯಾ?"
"ಹು ಅಣ್ಣ."
"ನೀನು ಎಷ್ಟು ಕೊಟ್ಟೆ?""ಯಾಕಣ್ಣ, ಕಮ್ಮಿ ಇತ್ತಾ?"
ತಂದಿದ್ದ ಸಣ್ಣ ಗಾತ್ರದ ಪಟ್ಟೆಗಳನ್ನು ತೋರಿಸಿ, "ಈ ಸಿಜಿನದು ೭೫ ಕೊಟ್ಟಿದ್ದೀಯ. ನಾನು ಕೇಳಿದ ಗಾತ್ರದಲ್ಲಿ ೯೦ ಮನೇಲಿ ಇದೆ. ಹೀಗಾ ಮೋಸ ಮಾಡೋದು ನೀನು?"
"ಇಲ್ಲ ಅಣ್ಣ. ಗೊತ್ತಾಗ್ಲಿಲ್ಲ. ಮೋಸ ಮಾಡಿಲ್ಲಣ್ಣ. ಇನ್ನು ಎಷ್ಟು ಕೊಡಬೇಕು ಅಂತ ಹೇಳಿ, ಕೊಡ್ತೀನಿ."

"ಈ ಪಟ್ಟೆಗಳನ್ನು. ನೀನೆ ಇಟ್ಕೋ. ನನಗೆ ದೊಡ್ಡ ಪಟ್ಟೆಗಳೇ ಬೇಕು. ಇದು ನನಗೆ ಉಪಯೋಗ ಆಗೋಲ್ಲ. ಮನೇಲಿ ೯೦ ಇದೆ. ಇನ್ನು ೧೧೦ ಕೊಡಬೇಕು."

"ಆಯ್ತು ಅಣ್ಣ. ಪಕ್ಕದ ಅಂಗಡಿಯಿಂದ ತೊಗೊಂದ್ಬರ್ತೀನಿ. ನನ್ನ ಹತ್ರ ದೊಡ್ದಿಲ್ಲ."
"ಅದನ್ನ ಬೆಳಗ್ಗೆಯೇ ಹೇಳಬಹುದಿತ್ತಲ್ವಾ. ನಾನೇ ಪಕ್ಕದ ಅಂಗಡಿಯಿಂದ ತೊಗೊತಿದ್ದೆ."
"ಇದು ಚಿಕ್ಕದು ಅಂತ ಗೊತ್ತಾಗ್ಲಿಲ್ಲ ಅಣ್ಣ."
"ಸೆರಿ. ತೊಗೊಂಡ್ಬಾ. ಇನ್ನು ನೂರು ಕೊಡು ಸಾಕು. ೧೦ ಕಡಿಮೆ ಆದರೂ ಪರವಾಗಿಲ್ಲ."

ಪಕ್ಕದ ಅಂಗಡಿಯಿಂದ ತೊಗೊದ್ಬಂದು, "ನೀವೇ ಎಣ್ಸಿ ಅಣ್ಣ. ನನಗೆ ಅಷ್ಟೊಂದು ಎಣ್ಸಕ್ಕೆ ಬರೋಲ್ಲ."ನಾನೇ ಎಣ್ಸಿ ೧೦೦ ಪಟ್ಟೆಗಳನ್ನ ಮನೆಗೆ ತೊಗೊಂದ್ಬಂದೆ.

ಆಗ ನನಗೆ ಅನಿಸಿತು, ಈ ಲೋಕದಲ್ಲಿ ನಂಬಿಕೆಗೆ ಇನ್ನು ಬೆಲೆ ಇದೆ ಎಂದು. ಎಷ್ಟು ಸಣ್ಣ ವಿಷಯ ಅಲ್ವ ಇದು. ಪಾಪ ಅವಳಿಗೆ ಎಣಿಸುವುದು ಬರೋಲ್ಲ. ನಿಜವಾಗಲೂ ಮೋಸ ಮಾಡ್ಬೇಕು ಅಂತ ಇದ್ದಿದ್ದರೆ, ನನ್ನನ್ನ ನಂಬುವ ಅವಶ್ಯಕತೆಯೇ ಇರಲಿಲ್ಲ. ಅನಾವಶ್ಯಕವಾಗಿ, ಅವಳ ಬಗ್ಗೆ ತಪ್ಪು ತಿಳಿದಿದ್ದೆ. ಹೋಗಿ ವಿಚಾರಿಸಿದ್ದು ಒಳ್ಳೆಯದೇ ಆಯಿತು. ಹೀಗೇ ಜೀವನದಲ್ಲಿ ಪರಸ್ಪರ ನಂಬಿಕೆಯಿಲ್ಲದೆ, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ, ದ್ವೇಷ, ಅಸೂಯೆಗಳಿಗೆ ಎಲೆ ಹಾಕುವೆವು, ಆಲ್ವಾ?

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮಾ

ಶ್ರೀ ರಾಮ ಪಟ್ಟಾಭಿಷೇಕ ಸುಸೂತ್ರದಿಂದ ಮುಗಿಯುತ್ತಲೇ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹರಡಿದೆ.
ಸರ್ವಂ ಶ್ರೀ ಕ್ರಿಶ್ಣಾರ್ಪಣಮಸ್ತು.

Monday, August 3, 2009

ಸಂಡಾಸಿನಲ್ಲೂ ಗೊಣಗಾಟ


ಇತ್ತೀಚಿಗೆ ನಮ್ಮ ವಿಜಯ ಕರ್ನಾಟಕದಲ್ಲಿ ಬರುವ "ಕಾಲ್ ವೈಟಿಂಗ್" ಲೇಖನ ಓದುತ್ತಿದ್ದರೆ, ಹಲವಾರು ವರುಷದ ಹಿಂದೆ ನನಗೆ ಅನಿಸಿದ ಭಾವನೆಗಳನ್ನು ಹೇಳಿದಂತಿದೆ. ಈ ಮೊಬೈಲ್ ಫೋನ್ ಎಂಬ ವಸ್ತು ಯಾಕಪ್ಪಾ ಕಂಡುಹಿಡಿದರು ಅಂತ ಕೇಳ್ತಿದ್ದೆ.

ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಫೋನ್ ಇರುತ್ತದೆ. ಅದು ಸೇರಿಯೂ ತಪ್ಪೋ ಎಂಬುದೇ ದೊಡ್ಡ ಚರ್ಚೆ. ಶಾಲೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ನಿರಾಕರಿಸಿದರೂ, ಹೊರಗೆ ಮಕ್ಕಳಲ್ಲಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಪಾಪ ಮಕ್ಕಳು ಅಷ್ಟು ಹಠ ಹಿಡಿದರೆ ತಂದೆ ತಾಯಂದಿರು ಏನು ತಾನೇ ಮಾಡಬಲ್ಲರು.

ನಾನು ಓದಬೇಕಾದರೆ, ನನಗೆ ಈ ಮೊಬೈಲ್ ಫೋನ್ ಎಂಬ ಮಾಯಾ ಯಂತ್ರ ಇದೆ ಎಂದೇ ತಿಳಿದಿರಲಿಲ್ಲ. ಗೊತ್ತಿದ್ದರೆ ನಾನು ಹಠ ಹಿಡಿದು ದಕ್ಕಿಸಿಕೊಳ್ಳುತ್ತಿದ್ದೇನೋ ಏನೋ. ಬರಿ ಬಿಸಿನೆಸ್ ಮಾನ್ಗಳು ಉಪಯೋಗಿಸುವ ವಸ್ತು ಎಂದೇ ನಂಬಿದ್ದೆ. ಶಾಲೆ ಮುಗಿದು ಕಾಲೇಜ್ ಮೆಟ್ಟಲು ಹತ್ತಿದಾಗಲೂ ಇದು ನನಗೆ ತಿಳಿಯಲಿಲ್ಲ. ಅಷ್ಟು ಪೆದ್ದನಾಗಿದ್ದೆ ನಾನು. ಇಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದಾಗಲೂ ಈ ವಿಷಯ ನನಗೆ ಅರಿವಾಗಲಿಲ್ಲ. ಕೆಲ್ಸಕ್ಕೆ ಸೇರಿ ೬ ವರುಷ ತುಂಬಿದರೂ ನನ್ನ ಹತ್ತಿರ ಈ ಮಾಯಾ ಯಂತ್ರ ಇಲ್ಲದಿದ್ದು ನೋಡಿ ಹಾಸ್ಯ ಮಾಡಿದ್ದು ಅದೆಷ್ಟು ಜನ? ಆದರೂ ನಾನು ಬಗ್ಗಲಿಲ್ಲ. ಜನರು ಇದರ ಜೊತೆ ಸರಸವಾಡುತ್ತಿದ್ದ ರೀತಿ ನೋಡಿ ನನಗೆ ಇದನ್ನು ಕೊಳ್ಳಲೇಬಾರದೆಂದು ತೀರ್ಮಾನಿಸಿದ್ದೆ. ಎಲ್ಲಿ ಹೋದರೂ ಬಿಡದ ಈ ವಸ್ತು, ಟಾಯಿಲೆಟ್ಗೆ ಹೋದರೂ ಬಿಡುವುದಿಲ್ಲ. ಕಮೋಡ್ ಮೇಲೇ ಕೂತು ಘಂಟಘಟ್ಟಲೆ ಹರಟೆ ಹೊಡೆಯುತ್ತಾರೆ. ಯಾಕಪ್ಪಾ ಬೇಕು ಈ ಪಝೀತಿ ಅಂತಿದ್ದೆ.

ಕೊನೆಗೆ ಒಂದು ವರುಷದ ಕೆಳಗೆ ಯಾವುದೂ ಕೆಲಸದ ವಿಚಾರವಾಗಿ ಒಂದು ಮೊಬೈಲ್ ಫೋನು ಕೊಳ್ಳಬೇಕಾಯಿತು. ಈಗ ಆ ಕೆಲಸ ಮುಗಿದಿದೆ ಆದರೆ ಮೊಬೈಲ್ ಫೋನು ಇನ್ನು ತೊಲಗಿಲ್ಲ. ಸಮಯಕ್ಕೆ ಉಪಯೋಗ ಬಂದರೂ, ಇದೊಂತರಾ ಬಿಸಿ ತುಪ್ಪ ಇದ್ದಹಾಗೆ.

ಬಹಳ ಹಿಂದೆ ನನ್ನ ಆತ್ಮೀಯರಾದ ನರಸಿಂಹ ಮೂರ್ತಿಯವರು, ಮೊಬೈಲ್ ಫೋನ್ ಕುರಿತು ಬರೆದ ಒಂದು ಪದ್ಯ ಹೀಗಿದೆ.

ಒಳಕರೆಯ ಕೆರೆತ, ಕೆರೆದರೆ ನೆವೆ ಹೆಚ್ಚು
ಮಾತಿನ ಅಕ್ಕಿಯ ಮೇಲಿನ ಆಸೆ
ಮುದ್ದುಮಣಿಯ ಮುದ್ದಾಡಲು ಕಳ್ಳರ ಕಾಟ
ನಲ್ಲೆಯ ಇಂಚರ ಎದೆಯ ಡಮರು ನಾದ
ಅಧಿಕಾರಿಯ ಕರೆ ಅಡಕತ್ತರಿಯ ಅಡಿಕೆ
ಸಂಡಾಸಿನಲ್ಲೂ ಗೊಣಗಾಟ.

ನೀವೇ ಹೇಳಿ. ಇದು ಬೇಕೆ?

Wednesday, July 22, 2009

ವ್ಯಕ್ತಿಯೋ ಕಲೆಯೋ

ಸಾದಾರಣವಾಗಿ ಒಂದು ಕಾರ್ಯಕ್ರಮಕ್ಕೆ (ಯಾವುದೇ ಕಾರ್ಯಕ್ರಮ ಆಗಿರಲಿ) ಹೋಗುವ ಮುಂಚೆ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ವಿವರಗಳನ್ನು ತಿಳಿದು, ಅನಂತರ ಅದಕ್ಕೆ ಹೋಗಬೇಕ ಬೇಡವಾ ಅಂತ ಯೋಚನೆ ಮಾಡ್ತಿವಿ ಅಲ್ವೇ? ಉದಾಹರಣೆಗೆ ಒಂದು ಸಿನೆಮಾಗೆ ಹೋಗೋಣ ಎಂದು ಯಾರಾದ್ರು ಕರೆದರೆ, ನಾವು ಕೇಳುವುದು ಯಾರು ಹೀರೋ? ಯಾರು ಹೀರೋಇನ್ನು? ಯಾರದು ನಿರ್ದೇಶನ? ಅಂತ. ಅವರ್ಯಾರಾದ್ರು ನಮಗೆ ಪರಿಚಯವಿದ್ದು, ನಮಗೆ ಇಷ್ಟವಾಗಿದ್ದರೆ ಮಾತ್ರ ಹೋಗುತ್ತೇವೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಸ್ವಲ್ಪ ಹಾಗೇ.

ಇಲ್ಲಿ ಪ್ರಶ್ನೆ ಯೇನಪ್ಪಾ ಅಂದ್ರೆ, ನಮ್ಮ ಹಲವಾರು ನಿರ್ಧಾರ ಒಬ್ಬ ವ್ಯಕ್ತಿಯ ಆದಾರದ ಮೇಲೆ. ಆ ವಿಷಯ ಅಥವಾ ಕಲೆಯ ಆದಾರದ ಮೇಲಲ್ಲ. ಇದು ಸಿನೆಮಾ ಲೋಕಕ್ಕೆ ಸೀಮಿತವಾದುದಲ್ಲ. ಸಂಗೀತ, ನೃತ್ಯ, ಭಾಷಣ ಎಲ್ಲಾ ಕ್ಷೇತ್ರದಲ್ಲೂ ಹೀಗೇ. ಇದರಲ್ಲಿ ಸರಿ ಅಥವಾ ತಪ್ಪು ಪ್ರಶ್ನೆ ಬರೋಲ್ಲ. ಆದ್ರೆ ಈ ತರಹದ ನಿರ್ಧಾರದಿಂದ ನಾವು ಅರಿವಿಲ್ಲದೆ ಕೆಲವೊಂದನ್ನು ಕಳೆದುಕೊಳ್ಳುತ್ತೇವೆ.
ಮೊನ್ನೆ ಒಂದು ಭರತನಾಟ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ನಡೆಸಿಕೊಟ್ಟವರು ನನ್ನ ಸ್ನೇಹಿತನಾದ ಶ್ರೀ ವೆಂಕಟೇಶ್ ಅಯ್ಯಂಗಾರ್ ಮತ್ತು ಅವನ ಶಿಷ್ಯರು. ಅವನು ನನ್ನ ಸ್ನೇಹಿತನು ಎಂದೇ ನಾನು ಹೋಗಿದ್ದು. ಇಲ್ಲವಾದಲ್ಲಿ ನಾನು ಹೋಗುತ್ತಿರಲಿಲ್ಲವೇನೋ. ೩೦ ವರುಷದ ವೆಂಕಟೇಶ್, ನೃತ್ಯದಲ್ಲೇ ನನ್ನ ಜೀವನ ಅಂತ ತೀರ್ಮಾನಿಸಿ, ಅದರಲ್ಲೇ ಸದಾಕಾಲ ಮುಳುಗಿದ್ದು, ಬೆಂಗಳೂರಿನ ಮತ್ತಿಕೆರೆಯಲ್ಲಿ "ಕಿಂಕಿಣಿ" ನೃತ್ಯಶಾಲೆಯನ್ನು ಪ್ರಾರಂಬಿಸಿದ.

ನಾನು ಬಹಳಷ್ಟು ನೃತ್ಯ ಕಾರ್ಯಕ್ರಮಗಳಿಗೆ ಹೋಗಿಲ್ಲವಾದರೂ, ಇಂತಹ ನೃತ್ಯವನ್ನು ನಾನು ಎಂದೂ ಕಂಡಿರಲಿಲ್ಲ. ಒಂದೊಂದು ಹಾಡಿನ ಪ್ರಾರಂಭದಲ್ಲಿ ಅದರ ಪೀಠಿಕೆಯ ಮೂಲಕ ಅದರ ಸನ್ನಿವೇಶವನ್ನು ವಿವರಿಸಿ ನಂತರ ನಾಟ್ಯವನ್ನು ಮಾಡುತ್ತಿದ್ದರು. ಗಜೇಂದ್ರ ಮೋಕ್ಷ, ಶ್ರೀ ರಾಮ ಪಟ್ಟಾಭಿಷೇಕ ಮುಂತಾದ ಸನ್ನಿವೇಶಗಳಲ್ಲಿ, ಇದು ಭಾರತನಾಟ್ಯವೋ, ನಾಟಕವೋ ಎಂದೇ ತಿಳಿಯುತ್ತಿರಲಿಲ್ಲ. ತಾಳಕ್ಕೆ ತಕ್ಕಂತೆ ಮೆಟ್ಟುಗಳನ್ನು ಹಾಕುತ್ತಾ, ಪಾತ್ರಕ್ಕೆ ತಕ್ಕಂತೆ ಮುಖದಲ್ಲಿ ಭಾವನೆಯನ್ನು ತೋರುತ್ತಾ, ಪ್ರಸಂಗಕ್ಕೆ ಹೊಂದುವ ನೃತ್ಯವನ್ನು ಮಾಡುತ್ತಿದ್ದರು. ನೋಡುವುದಕ್ಕೆ ಎರಡು ಕಣ್ಣುಗಳು ಸಾಲದೇ ಹೋಯಿತು.

ಅಲ್ಲಿ ನಾನು ತೆಗೆದ ಕೆಲವೊಂದು ಚಿತ್ರಗಳು.







ಆದರೆ ಸಭಾಂಗಣ ಅರ್ಧವೂ ತುಂಬಿರಲಿಲ್ಲ. ಇದೇ ಪದ್ಮ ಸುಬ್ರಮಣ್ಯಮ್ ಅಥವಾ ಇನ್ಯಾರೋ ಖ್ಯಾತ ವ್ಯಕ್ತಿ ಆಗಿದ್ದರೆ, ಸಭಾಂಗಣ ತುಂಬಿರುತ್ತಿತ್ತು.

Monday, July 13, 2009

ಕವಿಪರಿಚಯ - ಟಿ. ಎಸ್. ಇಲಿಯಟ್

ಟಿ. ಎಸ್. ಇಲಿಯಟ್ ಅವರ ಬಗ್ಗೆ ನಮ್ಮೆಲ್ಲರಿಗೂ ಪರಿಚಯ ಎಂದು ಭಾವಿಸಿರುವೆ. ಆಂಗ್ಲದ ಪ್ರಸಿದ್ಧ ಕವಿ. ಶಾಲೆಯಲ್ಲಿ ಇವರ ಪದ್ಯಗಳು ಇತ್ತೋ ಇಲ್ಲವೊ ನೆನಪಿಲ್ಲ. ಆದರೂ ಇವತ್ತು ಇವರ ಬಗ್ಗೆ ಬರೆಯುವ ಕಾರಣ, ಅವರ ಒಂದು ಪದ್ಯದ ಕೊನೆಯ ಸಾಲುಗಳು ನನಗೆ ತಂದ ಕುತೂಅಲ. ಪದ್ಯ "The waste Land" ಆ ಸಾಲುಗಳು -

Datta Dayadhvam Damyata
Shantih Shantih Shantih

ಈ ಸಾಲುಗಳು ಭ್ರೃಹದಾರಣ್ಯಕ ಉಪನಿಷತ್ತಿನ ಸಾಲುಗಳು.

ಇವರ ಪೂರ್ಣ ಹೆಸರು Thomas Stearns Eliot. ಹುಟ್ಟಿದ್ದು ೧೮೮೮ ಸೆಪ್ಟೆಂಬರ್ ೨೬ನೆ ತಾರೀಕು ಅಮೇರಿಕಾದ ಮಿಸ್ಸೌರಿ ರಾಜ್ಯದಲ್ಲಿ. ಹಾರ್ವರ್ಡ್ ವಿಶ್ವವಿಧ್ಯಾಲಯದಲ್ಲಿ ಪದವಿಪೂರ್ಣರಾಗಿ, ಅಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದರು. ನಂತರ ೧೯೧೦-೧೯೧೧ ಕಾಲದಲ್ಲಿ ಪಾರಿಸ್ ನಲ್ಲಿ ಇದ್ದು, ೧೯೧೧ನಲ್ಲಿ ಮತ್ತೆ ಹಾರ್ವರ್ಡ್ಗೆ ಮರಳಿದರು, ತತ್ವಶಾಸ್ತ್ರದ ಉಪನ್ಯಾಸಕರಾಗಿ. ಆಗಲೇ ಅವರಿಗೆ ಭಾರತೀಯ ತತ್ವಶಾಸ್ತ್ರದ ಪರಿಚಯವಾದದ್ದು. ಪ್ರಾಕೃತ, ಸಂಸ್ಕೃತ ಭಾಷೆಗಳನ್ನು, ಉಪನಿಷತ್ಗಳನ್ನೂ ಪಠಿಸಿದರು.

ಇವರ ವಯ್ಯುಕ್ತಿಕ ಜೀವನ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಜೀವನ ಪರ್ಯಂತ ಬರಿ ಕಷ್ಟವನ್ನೇ ಅನುಭವಿಸಿದವರು. ಗೂಗಲಿಸಿದರೆ ಇದರ ಬಗ್ಗೆ ಹೆಚ್ಚು ಮಾಹಿತಿ ದೊರಕುತ್ತದೆ.

"The waste Land"ಇನ ಕೊನೆಯ ಭಾಗವಾದ "What the thunder said" ಹೀಗಿದೆ.

The Waste Land (part V)

V. What the Thunder Said

Ganga was sunken, and the limp leaves
Waited for rain, while the black clouds
Gathered far distant, over Himavant.
The jungle crouched, humped, in silence.
Then spoke the thunder
D A
Datta: what have we given?
My friend, blood shaking my heart
The awful daring of a moment's surrender
Which an age of prudence can never retract
By this, and this only, we have existed
Which is not to be found in our obituaries
Or in memories draped by the beneficient spider
Or under seals broken by the lean solicitor
In our empty rooms
D A
Dayadhvam: I have heard the key
Turn in the door once and turn once only
We think of the key, each in his prison
Only at nightfall, aethereal rumors
Revive for a moment a broken Coriolanus
D A
Damyata: the boat responded
Gaily, to the hand expert with the sail and oar
The sea was calm, your heart would have responded
Gaily, when invited, beating obedient
To controlling hands

I sat upon a shore
Fishing, with the arid plain behind me
Shall I at least set my lands in order?
London Bridge is falling down, falling down falling down
Poi s'ascose nel foco che li affina
Quando fiam ut chelidon - O swallow swallow
Le Prince d'aquitaine à la tour abolie
These statements I have shored against my ruins
Why then Ile fit you. Hieronymo's mad againe.
Datta. Dayadhvam. Damyata.
Shantih shantih shantih

"The waster Land" ಪದ್ಯವನ್ನು ತಿಳಿದುಕೊಳ್ಳುವುದು ಸುಲಭವಲ್ಲ ಎಂದು ಈ ಕ್ಷೇತ್ರದ ನಿಪುನರೆ ಭಾವಿಸುತ್ತಾರೆ. ಇವತ್ತಿಗೂ ಕೂಡ ಶಾಲಾ ಕಾಲೇಜುಗಳಲ್ಲಿ ಇದನ್ನು ವಿವರಿಸಲು ಕೆಲವರಿಗೆ ಅಸಾಧ್ಯವಾಗಿರುವ ವಿಷಯ. ಪ್ರಾಯಶಃ, ಇದನ್ನು ತಿಳಿದುಕೊಳ್ಳಲು ಆಧ್ಯಾತ್ಮದ ಹಿನ್ನಲೆ ಅಗತ್ಯ. ನನಗೆ ಅಷ್ಟಾಗಿ ತಿಳಿವಳಿಕೆ ಇಲ್ಲ. ಆದರೂ ಕುತೂಹಲ ಬಿಡಬೇಕಲ್ಲ!!

"The Waste Land" ಜೀವನದ ಉದ್ದೇಶವನ್ನು ಹುಡುಕುವ ಪ್ರಯಾಣದ ಅಂತಿಮ ಘಟ್ಟ ಎಂದು ಹೇಳಬಹುದೇನೊ. ಕೊನೆಯ ಭಾಗದಲ್ಲಿ ಜೀವನದ ಸಾರ್ಥಕತೆಯನ್ನು ಅವರು ಅರ್ಥಮಾಡಿಕೊಂಡ ಮಾದರಿ. ಇದರ ಸಾರಾಂಶ ಹೀಗಿದೆ.

ನಮ್ಮ ಜೀವನ ನೋವು, ದುಃಖ್ಖಗಳಿಂದ ಧ್ವಂಸವಾಗುತ್ತಿದೆ. ಜೀವನದಿಯಾದ ಗಂಗೆಯಲ್ಲಿ ನೀರಿಲ್ಲದ ಹಾಗೆ. ದೇವರು (Thunder) ಇದಕ್ಕೆ ಪರಿಹಾರವಾಗಿ ಮೂರು ಗುಣಗಳನ್ನು ಭೋದಿಸುತ್ತಾನೆ. ಎಲ್ಲರಲ್ಲೂ ಮನುಷ್ಯತ್ವ, ರಾಕ್ಷಸತ್ವ ಮತ್ತು ದೈವತ್ವ ಇರುತ್ತದೆ. ಈ ಅಂಶಗಳಿಗೆ ದಾನ ಮಾಡುವ ಗುಣ (Datta), ಕರುಣೆ, ಅನುಕಂಪ (Dayadhvam) ಮತ್ತು ನಿಯಂತ್ರತೆ, ಹಿಡಿತ (Damyata) ಅಗತ್ಯ.

Fisher ಪದ ಫ್ರೆಂಚ್ ಪದದಿಂದ ಆರಿಸಲಾಗಿದೆ. ಇದರ ಮೂಲ ಅರ್ಥ sinner ಎಂದು ಹೇಳುತ್ತಾರೆ. ಅಂದರೆ, ಒಬ್ಬ ಮೀನುಗಾರರ ರಾಜ ದುಃಖ್ಖದಿಂದ, ತಾಪದಿಂದ ನರಳುತ್ತಿದ್ದಾನೆ. ಅವನ ಸುತ್ತ ಬರಿ ನೀರಸ ನಾಡು (arid plain). (ಇಲಿಯಟ್ ಆ ಸಮಯದಲ್ಲಿ ಕ್ರೈಸ್ತ ಧರ್ಮವನ್ನು ಒಪ್ಪಿಕೊಂಡಿಲ್ಲವಾದ್ದರಿಂದ ಈ fisher "ಏಸು ಕ್ರಿಸ್ತ" ಎಂದು ಕೆಲವರು ಹೇಳುತ್ತಾರೆ). ಈ ಭೂಮಿ ಪತನವಾಗುತ್ತಿದೆ. (ಅಥವಾ ಲಂಡನ್ ಪತನವಾಗುತ್ತಿದೆ?). "Le Prince d'aquitaine" ಒಂದು ಶಿಥಿಲ ಸ್ತೂಪವನ್ನು ಸೂಚಿಸುತ್ತದೆ. (ಲಂಡನ್ನಿನ ಕಟ್ಟಡಗಳು?). "la tour abolie" ನರಕದ ಪ್ರತಿಬಿಂಬ. "Poi s'ascose nel foco che li affina" ಸಾಲು ಇಟಲಿಯ "divine Comedy" ಇಂದ ಆರಿಸಲಾಗಿದೆ. Thomas Kyd ನ "The spanish tragedie" ನಲ್ಲಿ "Hieronymo" ಅನ್ನುವವನು ತನ್ನ ಮಗನನ್ನು ಕಳೆದುಕೊಂಡು ಹುಚ್ಚನಗುತ್ತಾನೆ.

ಇಷ್ಟೆಲ್ಲಾ ಅಳಿವಿನ ನಡುವೆ ಕಥನಕಾರ ನಾನಾದರೂ ಸೆರಿಯಾದ ರೀತಿಯಲ್ಲಿ ನಡೆಯಬಹುದೇ (Shall I at least set my lands in order?) ಎಂದು ಕೇಳುತ್ತಾ, ಈ ಕಾಲದಲ್ಲೂ, Datta Dayadhvam Damyata ಗಳಿಗೆ ಅರ್ಥವಿದ್ದು, ಮೋಕ್ಷಕ್ಕೆ (ಮುಕ್ತಿ) ಶಾಂತಿಗೆ ಇದೊಂದೇ ಪರಿಹಾರ ಎಂದು ಹೇಳುತ್ತಾನೆ.

ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿಲ್ಲ. ಕುತೂಹಲ ಕೆರಳಿಸಿದ ಈ ಪದ್ಯವನ್ನು ನಿಮಗೆ ಪರಿಚಯ ಮಾಡುವುದೇ ಈ ಲೇಖನದ ಉದ್ದೇಶ.

Friday, July 3, 2009

ಆಚಾರದಲ್ಲಿ (ಅಪ)ನಂಬಿಕೆ


ಹೀಗೇ ಒಂದು ಸಂವಾದ ...

"ಲೋ ಯೇನೋ ಮಾಡ್ತಿದಿಯಾ?"


"ಹೇಗೆ ಪಂಚಾಗ ನೋಡ್ತಿದ್ದೆ."

"ನೀನೂ ಎಲ್ಲದಕ್ಕೂ ಮುಹೂರ್ತ ನೂಡೂದಕ್ಕೆ ಶುರು ಮಾಡಿದಿಯಾ?"

"ಹಾಗಲ್ವೋ ಈ ಮಾಸದಲ್ಲಿ ಒಂದು ಸೂರ್ಯಗ್ರಹಣ ಬರತ್ತಂತೆ. ಯಾವತ್ತು ಅಂತ ನೋಡ್ತಿದ್ದೆ."

"ಯಾವತ್ತು ಬಂದ್ರೆ ಯೇನು? ನಿನಗೆ ಯಾವಾಗಿಂದ ಖಗೋಳಶಾಸ್ತ್ರದ ಹುಚ್ಚು?"

"ಇಲ್ಲ ಕಣಯ್ಯ. ಅವತ್ತು ಆಫ್ಫೀಸ್ ಇದ್ದರೆ ಹೇಗೆ ಯೇನು ಅಂತ ನೋಡ್ತಿದ್ದೆ."

"ಆಫ್ಫೀಸ್ ಇದ್ದರೆ ಯೇನು?"

"ಆಫ್ಫೀಸ್ನಲ್ಲಿ ಗ್ರಹಣ ಮೋಕ್ಷ ಸ್ನಾನ ಮಾಡಕ್ಕಾಗತ್ತಾ? ಎಷ್ಟು ಗಂಟೆಗೆ ಊಟ ಮಾಡ್ಬೇಕು ಅವತ್ತು, ಯೇನು, ಎತ್ತ ಅಂತ ನೋಡ್ತಿದ್ದೆ."

"ನೀನು ಇದೆನ್ನೆಲ್ಲ ನಂಬ್ತಿಯಾ? ಭೂಮಿ, ಚಂದ್ರ, ಸೂರ್ಯ ಇದೆಲ್ಲ ಸೂರ್ಯವ್ಯೂಹದಲ್ಲಿ ಸಂಚರಿಸುವ ವಸ್ತುಗಳು ಅಷ್ಟೇ. ಅದು ಒಂದು ರೀತಿಯ ಸಮರೇಖೆಯಲ್ಲಿದ್ದಾಗ ಗ್ರಹಣ ಸಂಭವಿಸತ್ತೆ. ಇದಕ್ಕೂ ಊಟಕ್ಕೂ ಸ್ನಾನಕ್ಕೂ ಏನಯ್ಯಾ ಸಂಭಂದ?"
......
......


ಹೀಗೇ ಮತ್ತೊಂದು ಸಂವಾದ.

"ಎಷ್ಟು ಹೊತ್ತೂ ನಿಂದು. ಬೇಗ ಬಾರೋ."

"ಒಂದು ೧೦ ನಿಮಿಷ ಇರು. ಸಂಧ್ಯಾವಂದನೆ ಮುಗಿಸಿ ಬರ್ತೀನಿ."

"ಯಾಕ ಮಾಡ್ಬೇಕೋ ಇದನ್ನೆಲ್ಲಾ. ಸುಮ್ನೆ ಟೈಮ್ ವೇಸ್ಟು."

"ನಮ್ಮಪ್ಪ ನನಗೆ ಉಪನಯನ ಮಾಡಿದ ತಪ್ಪಿಗಾದ್ರೂ ಮಾಡ್ಬೇಕು. ಸ್ವಲ್ಪ ಹೊತ್ತು ಸುಮ್ನಿರು."

"ಒಂದು ದಿನ ಸಂಧ್ಯಾವಂದನೆ ಮಾಡದೆ ಇದ್ರೆ ಯೇನಾಗತ್ತೆ?"
......
......

ಈ ರೀತಿಯ ಸಂವಾದಗಳಲ್ಲಿ ನೀವೂ ಸಹ ಪಾತ್ರದಾರಿಗಳಾಗಿದ್ದಿರಬಹುದು ಅಲ್ಲವೇ? ನಮ್ಮ ಧರ್ಮದಲ್ಲಿ ಸಹಸ್ರಾರು ಆಚರಣೆಗಳು, ಪದ್ಧತಿಗಳು ನಾವು ಕಾಣುತ್ತೇವೆ. ಆಚರಣೆಗಳಲ್ಲೂ ಕೂಡ ಸುರಾಚಾರ ಅಥವಾ ದುರಾಚಾರ ಎಂಬ ಭಗೆಗಳುಂಟು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ (ಹೆಚ್ಚು ಜನರಿಗೆ) ಯಾವ ಆಚರಣೆಗಳಲ್ಲೂ ನಂಬಿಕೆಯಿಲ್ಲ. ಹಾಗೆಂದರೆ ಇದರ ಬಗ್ಗೆ ತಿರಸ್ಕಾರ ಭಾವನೆ ಇದೆ ಅಂತಲ್ಲ. ಆ ಆಚರಣೆಯ ಫಲ ಯೇನು? ಯಾಕೆ ಮಾಡಬೇಕು? ಯೇನು ಪ್ರಯೋಜನ? ಎಂದು ತಿಳಿಯದೆ ಅದರ ಬಗ್ಗೆ ನಂಬಿಕೆ ಇಡುವುದಿಲ್ಲ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಒಂದು ವಿದದಲ್ಲಿ ಇದು ಸರಿಯೇ. ಹೀಗಿದ್ದರೆ ಮಾತ್ರ ಅಲ್ಲವೇ ಆಚರಣೆಗಳ ಬಗ್ಗೆ ಸಂಷೋದನೆ ನಡೆಸಿ ಅದರ ಫಲ-ವಿಫಲ, ಅನುಕೂಲ-ಅನಾನುಕೂಲಗಳನ್ನು ಕಂಡು ಹಿಡಿಯಲು ಸಾದ್ಯ?


ಆದರೆ ಎಲ್ಲವನ್ನೂ ತಿಳಿದೇ ಮಾಡುವುದು ಎಂದು ಹೇಳಿದರೆ, ಹಲವಾರು ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ ಸಿಗುವುದೇ ಇಲ್ಲ. ಇದರ ಬಗ್ಗೆ ಹೆಚ್ಚು ಚರ್ಸಿಸುವ ಮುಂಚೆ, ದಿನನಿತ್ಯದಲ್ಲಿ ಕಂಡು ಬರುವ ಕೆಲವೊಂದು ಆಚರಣೆಗಳನ್ನು ಮತ್ತು ಅದರ ವೈಜ್ನಾನಿಕ ಸಮಜಾಯಿಷಿಗಳನ್ನು ನೋಡೋಣ.


ಬೆಳಗ್ಗೆ ಎದ್ದ ತಕ್ಷಣ ಎದ್ದು ಕೂತು "ಕರಾಗ್ರೆ ವಸತಿ ಲಕ್ಷ್ಮಿ ...." ಎಂಬ ಶ್ಲೋಕವನ್ನು ಹೇಳಬೇಕು. ನಂತರ ಬೇರೆಯ ಕೆಲಸ. "ಯಾಕೆ?" ಯಾರಾದರೂ ಹೆಚ್ಹು ಹೊತ್ತು ಮಲಗಿ, ಆ ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ, ಅವನ ಹೃದಯದ ಒತ್ತಡ ಹೆಚ್ಚಾಗುತ್ತದೆ. ೨ ನಿಮಿಷ ಕೂತಿದ್ದರೆ, ಹೃದಯದ ಒತ್ತಡ ಕ್ರಮೇಣವಾಗಿ ಹೆಚ್ಚಾಗುತ್ತದೆ, ಇದ್ದಕ್ಕಿದ್ದಹಾಗೆ ಅಲ್ಲ. ಹೃದಯ ಆಘಾತದಿಂದ ಸತ್ತವರಲ್ಲಿ, ಶೇಕಡಾ ೨೩ರಶ್ಟು ಜನ ಸತ್ತದ್ದು, ಮಲಗಿರುವ ಸ್ಥಿತಿಯಿಂದ ತಕ್ಷಣ ನಿಂತು ನಡೆದಾಗ. ಇದು ಮೂಢನಂಬಿಕೆಯೂ ಅಥವಾ ಮನುಷ್ಯ ವಿಜ್ಞಾನಶಾಸ್ತ್ರವೋ? "ಸರಿ ಹಾಗಾದ್ರೆ, ದಿನಾ ಬೆಳಗ್ಗೆ ೨ ನಿಮಿಷ ಹಾಸಿಗೆಯಲ್ಲೇ ಕೂತು ಯೇಳುತ್ತೇನೆ. ಆದ್ರೆ ಶ್ಲೋಕ ಗ್ಲೀಕ ಎಲ್ಲ ಹೇಳಲ್ಲ." ಸರಿ ಅಷ್ಟಾದ್ರೂ ಮಾಡು, ನಿನ್ನ ಕರ್ಮ.


ಬೆಳಗ್ಗೆ ಯೇಳಬೇಕಾದರೆ ಕೈಯನ್ನು ನೆಲಕ್ಕೆ ಮುಟ್ಟಿಸಿ, "ಸಮುದ್ರವಸನೆ ದೇವಿ ...." ಎಂದು ಹೇಳಿ, ನಂತರ ಕಾಲನ್ನು ನೆಲಕ್ಕೆ ಇಡಬೇಕು. "ಯಾಕೆ?" ಬಹಳ ಹೊತ್ತು ಹಾಸಿಗೆಯಲ್ಲಿ ಮಲಗಿದರೆ, ಅವನಲ್ಲಿ ಸ್ತಿತಿ ವಿದ್ಯುದಂಶಗಳು (static charges) ಇರುತ್ತದೆ. ನೆಲವನ್ನು ಮುಟ್ಟಿದಾಗ ಈ ವಿದ್ಯುದಂಶಗಳು ಕೈಯಿಂದ ನಿರ್ಗಮನವಾಗುತ್ತದೆ (discharge). ಕಾಲಿನಿಂದ ಆದ ಪಕ್ಷದಲ್ಲಿ ವಾತರೋಗ (arthritis) ಅಥವಾ ನರರೋಗಗಳು (neuro disorders) ಸಂಭವಿಸಬಹುದು. ಇದು ಮೂಢನಂಬಿಕೆಯೂ ಅಥವಾ ವಿದ್ಯುತ್ಶಾಸ್ತ್ರವೂ?


ಊಟ ಮಾಡುವ ಮುಂಚೆ ಭೋಜನ ಮಂತ್ರವನ್ನು ಹೇಳಬೇಕು. "ಯಾಕೆ?" ಭೋಜನ ಮಂತ್ರ ಹೇಳಿದಾಗ, ಹೆಚ್ಚು ಜೊಲ್ಲು (saliva) ಉತ್ಪನ್ನವಾಗಿ ಅದರಲ್ಲಿರುವ ಕಿಣ್ವಗಳು (enzymes) ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಹೀಗೇ ಬಹಳ ಆಚರಣೆಗಳಿಗೆ ವೈಜ್ನಾನಿಕ ರೀತಿಯಲ್ಲಿ ಪ್ರಮಾಣಿಸಲಾಗುತ್ತಿದೆ. ಆದರೆ ಆಧುನಿಕ ವಿಜ್ಞಾನದ ಮಿತಿಯಲ್ಲಿ ನಾವು ಎಷ್ಟು ತಿಳಿದುಕೊಳ್ಳುವ ಸಾದ್ಯತೆಗಳಿದೆ? ಈಗಲೂ ಕೂಡ, ಮೇಲೆ ಹೇಳಿರುವ ಆಚರಣೆಗಳ ಶಾರೀರಿಕ ಉಪಯೋಗಗಳನ್ನು ಹೇಳಿದೆಯೇ ಹೊರೆತು, ಆ ಶ್ಲೋಕ/ಮಂತ್ರಗಳ ಉಪಯೋಗಗಳ ಬಗ್ಗೆ ಅಲ್ಲ. ಅಮೇರಿಕದಲ್ಲಿ ಕೆಲವೊಂದು ಆಪರೇಷನ್ ಥಿಯೇಟರ್ಗಳಲ್ಲಿ ವೇದ ಮಂತ್ರಗಳನ್ನು ಉಪಯೋಗಿಸುತ್ತಾರೆ. ಇದರಿಂದ ಚಿಕಿತ್ಸೆ ಮಾಡಬೇಕಾದರೆ ಹೆಚ್ಚು ಗಮನ ಇರುವುದೆಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಅದರ ಹಿಂದೆ ಇರುವ ಕಾರಣ ತಿಳಿದಿಲ್ಲ. ನಮ್ಮ ಅಜ್ಜಂದಿರು ಈ ರೀತಿ "ಪ್ರಮಾಣ ಇದ್ದರೆ ಮಾತ್ರ ನಂಬುತ್ತೇನೆ" ಎಂದಿದ್ದರೆ ಯಾರಿಗೆ ನಷ್ಟವಾಗುತ್ತಿತ್ತು? ಇಂತಹ ಆಚರಣೆಗಳನ್ನು ಉಳಿಸುವ ಸಲುವಾಗಿ ಆದರೂ, ಪ್ರಮಾಣವಿಲ್ಲದಿದ್ದರೂ ಪಾಲಿಸುವುದು ಒಳ್ಳೆಯದು ಅಲ್ಲವೇ?


"ಹಾಗಾದರೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಪಾಲಿಸಬೇಕಾ?" ಕಂಡಿತಾ ಬೇಡ. ನಮ್ಮಲ್ಲಿ ಕೆಲವು ಮೂಢನಂಬಿಕೆಗಳು ನಿಜವಾಗಲೂ "ಮೂಢ"ನಂಬಿಕೆಗಳೇ. ನಮ್ಮ ಧರ್ಮದಲ್ಲಿ ಪ್ರಶ್ನೆ ಕೇಳುವ ಅರ್ಹತೆ ಇದೆ, ಅಂತಹ ಪ್ರಶ್ನ-ಪ್ರವೃತ್ತಿಗೆ ಬೆಲೆಯೂ ಇದೆ. ಸುಮ್ನೆ ಕಣ್ಣು ಮುಚ್ಚಿಕೊಂಡು ಯಾವುದನ್ನೂ ಪಾಲಿಸಬೇಕಾಗಿಲ್ಲ. ಆದರೆ ನಾವು ವೀಕ್ಷಿಸುವ ರೀತಿಯನ್ನು ನಾವು ಸ್ವಲ್ಪ ಬದಲಾಯಿಸಬೇಕು. ಮೊದಲು ಆಚರಣೆಯನ್ನು ನಂಬಬೇಕು. ಆಚರಿಸುವ ಮುಂಚೆ "ಯಾಕೆ ಆಚರಿಸಬೇಕು?" ಎಂಬುದರ ಬದಲು "ಯಾಕೆ ಆಚರಿಸಬಾರದು?" ಎಂದು ಕೇಳಿಕೊಳ್ಳುವುದು ಉಚಿತ ಎಂದು ನನ್ನ ಅಭಿಪ್ರಾಯ. "ಯಾಕೆ ಆಚರಿಸಬಾರದು?" ಎಂಬುದಕ್ಕೆ ಉತ್ತರ ಸಿಗದಿದ್ದಲ್ಲಿ ಅದನ್ನು ಪಾಲಿಸಿದರೆ ಒಳ್ಳೆಯದು. ಇದರಿಂದ ನಮಗೆ ತಿಳಿಯದೇ ಪ್ರಯೂಜನವದರೆ ಆಗಲಿ. ನಂತರ ಅದರ ಬಗ್ಗೆ ವಿಚಾರಿಸಿ, ಸಂಷೋದಿಸಿ ಅದರ ಫಲ-ವಿಫಲಗಳನ್ನು ಚರ್ಚಿಸಿದರೆ ಇನ್ನು ಒಳ್ಳೆಯದು.


ಇದು ಕೇವಲ ನನ್ನ ಅಭಿಪ್ರಾಯ. ಎಲ್ಲರೂ ಇದನ್ನು ಒಪ್ಪಬೇಕಾಗಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ.


Monday, June 22, 2009

ಪ್ರಶ್ನೆ, ಜಿಜ್ಞಾಸೆ - ಪುನರಾವರ್ತನೆ

ಓದುವ ವಯಸ್ಸಿನಲ್ಲಿ, ಪಠ್ಯ ಪುಸ್ತಕದಲ್ಲಿ ಇದ್ದಿದ್ದನ್ನ ಓದಿ, ಸ್ವಲ್ಪ ಮಟ್ಟಿಗೆ ತಿಳಿದು, ಮುಂದೆ ನಾನೇ ಆರಿಸಿಕೊಂಡ ಕ್ಷೇತ್ರದಲ್ಲಿ ಕಾಲಿಟ್ಟು, BE ಮುಗಿಸಿ ಇಷ್ಟಾ ಪಟ್ಟು ಸೇರಿದ ವೃತ್ತಿಯಲ್ಲಿ ನನ್ನ ಮೆದುಳನ್ನು ಪೂರ್ಣವಾಗಿ ಉಪಯೋಗಿಸಿದೆ. ಈಗ ಸ್ವಲ್ಪ ಸೆಟ್ಟೆಲ ಆದ ನಂತರ, ವೃತ್ತಿಯಲ್ಲದೆ ಬೇರೆಯ ವಿಷಯಗಳಲ್ಲೂ ಆಸಕ್ತಿ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಆಹಾ ... ಇದರ ಬಗ್ಗೆ ನಾನು ಮುಂಚೆಯೇ ಯಾಕೆ ತಿಳಿದುಕೊಳ್ಳಲು ಪ್ರಯತ್ನ ಮಾಡಲಿಲ್ಲ ಎಂದು ಯೋಚಿಸಿದಾಗ, ನನಗೆ ಅನಿಸಿದ್ದು ಹೀಗೆ.

ನಮಗೆ ಹೊಟ್ಟೆ ಕಾಲಿಯಾಗಿರಬೀಕಾದರೆ ಮಾತ್ರವೇ ಯೇನಾದರೂ ತಿನ್ನಬೇಕೆನಿಸುತ್ತದೆ. ಹೊಟ್ಟೆ ತುಂಬಿದ ನಂತರ ಬೇರೆ ವಿಷಯಗಳ ಯೋಚನೆ. ಹಾಗೆಯೇ, ಹಲವು ವರುಷಗಳಿಂದ ನನ್ನ ಮೆದುಳು technical ವಿಷಯಗಳ ಕೊರತೆಯಿಂದಾಗಿ ಅದರ ಬಗ್ಗೆಯೇ ಚಿಂತನೆ, ಇದನ್ನು ಪರಿಹರಿಸಿಕೊಳ್ಳುವ ಉತ್ಸಾಹ. ಈಗ ಇಂತಹ ವಿಷಯಗಳಿಂದ ನನ್ನ ಮೆದುಳು ತುಂಬಿ, ಬೇರೆ ಬೇರೆ ವಿಷಗಳ ಬಗ್ಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತಿದೆ. ಇಂತಹ ಜಿಜ್ಞಾಸೆಯಿಂದ ಹುಟ್ಟುವ ಪ್ರಶ್ನೆಗಳೇ ಜ್ಞಾನಮಾರ್ಗದ ಮೊದಲನೆಯ ಮೈಲುಗಲ್ಲು ಎಂದು ನನ್ನ ಅಭಿಪ್ರಾಯ. ಈ ಪ್ರಶ್ನಾ ಪ್ರವೃತ್ತಿಯ ಬಗ್ಗೆಯೇ ಜಿಜ್ಞಾಸೆ ಉಂಟಾಗಿ ಅದರ ಬಗ್ಗೆ ತಿಳಿದದ್ದು ಹೀಗಿದೆ.

ಪ್ರಶ್ನೆ ಕೇಳುವುದು ಮನುಷ್ಯನ ಮನಸ್ಸಿನ ಮೂಲ ಪ್ರವೃತ್ತಿ. ಇದನ್ನು ಹತ್ತಿಕ್ಕುವುದು ಒಂದು ವಿಧವಾದ ಆತ್ಮಹತ್ಯೆಯೇ. ಮಾನವನು ಕೀಳುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿಲ್ಲ. ಹಾಗೆಂದು ಅದನ್ನು ಬಿಡುವಂತೆಯೂ ಇಲ್ಲ. ಅಲ್ಲದೆ ಎಲ್ಲರಿಗೂ ಹೀಗೆ ಪ್ರಶ್ನೆ ಕೇಳುವುದರಲ್ಲಿ ರುಚಿ ಉಂಟಾಗಲಾರದು. ಎಲ್ಲಿಯೋ ಸಾವಿರದಲ್ಲಿ ಒಬ್ಬನು ಸಿದ್ದಿಗಾಗಿ ಹಂಬಲಿಸುತ್ತಾನೆಂದೂ, ಅಂತಹ ಸಾವಿರದಲ್ಲಿ ಎಲ್ಲೋ ಒಬ್ಬನಿಗೆ ಸಿದ್ಧಿಯಾಗಬಹುದೆಂದೂ ಬಗವಂತನೇ ಗೀತೆಯಲ್ಲಿ ಹೇಳಿದ್ದಾನೆ (VII-3). ಆದುದರಿಂದ ಸಮಂಜಸವಾದ ಪ್ರಶ್ನೆಗಳನ್ನು ಕೇಳುವುದು ಮಹಾತ್ಕಾರ್ಯವೇ ಸರಿ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಈ ಪ್ರವೃತ್ತಿಗೆ ಬಹಳ ಗೌರವವಾದ ಸ್ಥಾನವಿದೆ. ಪ್ರಶ್ನೆ ಮಾಡದವನಿಗೆ ತತ್ತ್ವೋಪದೇಶ ಮಾಡಕೂಡದೆಂದೂ, ಪ್ರಶ್ನೆ ಸರಿಯಾದ ಕ್ರಮದಲ್ಲಿ ಮಾಡದವನಿಗೆ ಹೀಳಕೂಡದೆಂದೂ ಮನುಸ್ಮೃತಿಯಲ್ಲಿ ಹೇಳಿದೆ. ಒಂದು ಇಡೀ ಉಪನಿಷತ್ತಿಗೆ ಹೆಸರು "ಪ್ರಶ್ನೋಪನಿಶತ" ಎಂದಿದೆ.

ಆದರೆ ಕೆಲವರು ಪ್ರಶ್ನೆ ಕೇಳುವ ಪ್ರವೃತ್ತಿಯೇ ತಪ್ಪೆಂದು ಹೇಳುತ್ತಾರೆ. ಜ್ಞಾನವನ್ನು ಮೌನ ಮಾರ್ಗದಿಂದಲೂ ಸಾಧಿಸಬಹುದೆಂದೂ ತಿಳಿದಿರುವುದು ದುರ್ದೈವದ ಸಂಗತಿ. ಪ್ರಶ್ನೆ ಕೇಳುವುದು ಒಂದು ವಿಧವಾದ ಅಗ್ನಿಯನ್ನು ಹೊತ್ತಿಸಿದಂತೆ. ಇಂದು ಕೇಳುವ ಪ್ರಶ್ನೆಗೆ ಇಂದೇ ಉತ್ತರ ಸಿಗಲಿಲ್ಲವೆಂದು ಈ ಅಗ್ನಿಯನ್ನೇ ಆರಿಸತಕ್ಕದ್ದಲ್ಲ. ಅಗ್ನಿಯು ದೀಪ್ತವಾಗಿದ್ದರೆ ತನಗೆ ತಾನೇ ಬೆಳಕಾಗಿ ಉತ್ತರವೂ ಕಾಲಾಂತರದಲ್ಲಿ ದೊರೆಯುವುದು. ಆದ್ದರಿಂದ ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬಿಡಬೇಡಿ.

Tuesday, June 16, 2009

ಪ್ರತಿಪದೆಯ ಚಂದ್ರ ರೇಖೆ

ಇದೇ ತಿಂಗಳ ೫ದನೆ ತಾರೀಕು ಜ್ಯೇಷ್ಥ ಶುದ್ದ ತ್ರಯೋದಶಿ. ನಾವೆಲ್ಲರೂ ಸ್ಮರಿಸಬೇಕಾದ ದಿನ. ಇದೇ ಜ್ಯೇಷ್ಠ ಶುದ್ದ ತ್ರಯೋದಶಿಯಂದು ಜೂನ್ ೬ನೇ ತಾರೀಕು ೧೬೭೪ ಇಸವಿಯಲ್ಲಿ ಛತ್ರಪತಿ ಶಿವಾಜಿಯು ಹಿಂದೂ ಸ್ವರಾಜ್ಯವನ್ನು ಸ್ಥಾಪಿಸಿದನು. ವಿಜಯನಗರದ ಸಾಮ್ರಾಜ್ಯದ ನಂತರ ಮೊಟ್ಟ ಮೊದಲನೆಯದಾಗಿ ಹಿಂದವಿ ಸ್ವರಾಜ್ಯ ಉದಯವಾಯಿತು. ಇದು ಬರಿ ಮಹಾರಾಷ್ಟ್ರಕ್ಕೆ ಸೀಮಿತವಾದುದಲ್ಲ, ಇಡೀ ಭಾರತಕ್ಕೆ ಅನ್ವಯಿಸುವುದು. ಬನ್ನಿ ಇವತ್ತು ಶಿವಾಜಿ ಮಹಾರಾಜರ ಆಳ್ವಿಕೆಯ ರಾಜಮುದ್ರೆಯನ್ನು ಸ್ಮರಿಸೋಣ.


ಪ್ರತಿಪಚ್ಚಂದ್ರ ರೇಖೇವ ವರ್ಧಿಷ್ನುರ್ವಿಶ್ವ ವಂದಿತಾ
ಶಾಹು ಸೂನೋ ಶಿವಸೈ ಷಾ ಮುದ್ರಾ ಭದ್ರಾಯ ರಾಜತೆ


ಶಿವಾಜಿಗೆ ಸಂಸ್ಕೃತದ ಮೇಲೆ ಇದ್ದ ಗೌರವ ಅಪಾರ. ಇದರ ಅರ್ಥ ಹೀಗಿದೆ. ಶುಕ್ಲ ಪಕ್ಷದ ಪ್ರತಿಪದೆಯ ಚಂದಿರನ ರೇಖೆಯಂತೆ, ತಂದೆ ಶಾಹಾಜಿ ಮಹಾರಾಜರ ಪುತ್ರ ಶಿವಾಜಿ ದಿನಂಪ್ರತಿ ಬೆಳೆಯುತ್ತಾ ಹೋಗುತ್ತಾನೆ. ಸ್ವರಾಜ್ಯವು ಸಮೃದ್ಧಿಯಾಗಿ ಚಂದ್ರನಂತೆ ಹೊಳೆಯುತ್ತದೆ. ವಿಶ್ವವಂದಿತವಾಗುತ್ತದೆ. ಇದೇ ಸಿದ್ಧಾಂತದ ಮೇಲೆ ಸ್ವರಾಜ್ಯದ ಜನತೆಯ ಮನೆ ಮಂದಿರಗಳಲ್ಲಿ ಭದ್ರವಾಗಿ ಮೂಡಿದ ಮುದ್ರೆ ಇದು.


ಇಂತಹ ಚಂದ್ರ ರೇಖೆ ಮತ್ತೆ ಕಾಣಿಸಬಾರದೇ?

ಆಧಾರ: ಡಾ. ರಂಗನಾಥ ಶಿಂಡೆ, ವಿಕ್ರಮ ವಾರಪತ್ರಿಕೆ, ಜೂನ್ ೭ ೨೦೦೯

Thursday, June 11, 2009

ಪ್ರಚಂಡ ಪಾಣಿನಿ

ಭಾರತದ ಅತೀ ಪುರಾತನವಾದ ಭಾಷೆ ಸಂಸ್ಕೃತ. ಆದರೆ ಇಂದಿನ ದಿನಗಳಲ್ಲಿ, ("ಸಂಸ್ಕೃತ ಭಾರತಿ" ಸಂಸ್ಥೆಗೆ ಜೂಡಿಸಿಕೊಂಡಿರುವವರನ್ನು ಬಿಟ್ಟರೆ) ಅದನ್ನು ಕೇಳುವವರಿಲ್ಲ. ಸಂಸ್ಕೃತ ಕಲಿಯಲು ಆಸಕ್ತಿ ಇರುವುದಿಲ್ಲ, ಆಸಕ್ತಿ ಇದ್ದರೂ ಸಮಯ ಇರುವುದಿಲ್ಲ, ಸಮಯ ಇದ್ದರೂ ಅದನ್ನು ಹೇಳಿಕೊಡುವವರು ಸಿಗೋದಿಲ್ಲ, ಎಲ್ಲಾ ಸೌಕರ್ಯಗಳೂ ಒದಗಿ ಬಂದರೂ, ಸಂಸ್ಕೃತದಿಂದ ಏನು ಪ್ರಯೋಜನ, ಎಂದು ಕೇಳುವವರೇ ಹೆಚ್ಚು. ಸಂಸ್ಕೃತ ಇಲ್ಲದೆಯೇ ಸಂಸ್ಕೃತಿ ಪೂರ್ಣವಾದೀತೇ?


ಅದು ಬಿಡಿ. ಈ "ಐಟೀ" ಯುಗದಲ್ಲಿ "ಕಂಪ್ಯೂಟರ್" ಇಲ್ಲದೆಯೇ ಕೆಲಸ ನಡೆಯದು. ಸಂಸ್ಕೃತ ಭಾಷೆ "ಕಂಪ್ಯೂಟರ್"ಗೆ ಬಹಳ ಸೂಕ್ತ ಎಂದು ಹೇಳುವುದುಂಟು. ಈ ಬ್ಲಾಗು, ಅದು ಯಾಕೆ? ಎಂದು ತಿಳಿಸುವ ಪ್ರಯತ್ನ.


"ಕಂಪ್ಯೂಟರ್"ಗೆ ಸ್ವಜ್ಞಾನ ಇರುವುದಿಲ್ಲ. ಅದನ್ನು ನಾವು "ಪ್ರೋಗ್ರಾಂ" ಮಾಡಬೇಕು. "ಪ್ರೋಗ್ರಾಂ" ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಬರಿಯಬೀಕು. ಕಂಪ್ಯೂಟರ್ನಲ್ಲಿ ಅದನ್ನು ಓಡಿಸುವ ಮುಂಚೆ ಆ "ಪ್ರೋಗ್ರಾಂ"ಅನ್ನು compile ಮಾಡಬೇಕು. ಈ compilerಗೆ ಆ ಭಾಷೆಯ ವ್ಯಾಕರಣ ಅಸಂಧಿಗ್ದ (non-ambiguous) ರೀತಿಯಲ್ಲಿ ತಿಳಿದಿರಬೇಕು. ಅದಕ್ಕೆ ಆಂಗ್ಲ ಭಾಷೆಯಲ್ಲಿ "context free grammer" ಎಂದು ಹೇಳುವರು. ಒಂದು ಉದಾಹರಣೆ ಕೆಳಗೆ ನೋಡಿ.


ಆಂಗ್ಲ ಭಾಷೆಯಲ್ಲಿ ಈ ೨ ವಾಕ್ಯಗಳನ್ನೂ ನೋಡಿ.


Fruit flies like apple (ಒಂದು ಮಾದರಿಯ ಹಾರುವ ಹುಳಕ್ಕೆ ಸೇಬಿನ ಹಣ್ಣು ಇಷ್ಟ)

Time flies like arrows (ಸಮಯವು ಬಾಣದಂತೆ ಹಾರಿಹೋಗುತ್ತದೆ)


ಆಂಗ್ಲ ಭಾಷೆಯ ವ್ಯಾಕರಣದ ಜೊತೆ, ಈ ವಾಕ್ಯಗಳನ್ನು "ಕಂಪ್ಯೂಟರ್"ಗೆ feed ಮಾಡಿದಾಗ, "Fruit flies" ಇರುವ ಹಾಗೆ "time flies" ಕೂಡ ಒಂದು ಬಗೆಯ ಹಾರುವ ಹುಳ ಎಂದು "ಕಂಪ್ಯೂಟರ್" ಭಾವಿಸುವಿದು. ಯಾಕೆಂದರೆ, flies ಎಂಬ ಶಬ್ದದ ಅರ್ಥವು ಆ ಸಂದರ್ಬಕ್ಕೆ (context) ಸೀಮಿತವಾಗಿ ಬದಲಾಗುತ್ತದೆ. ಇದನ್ನು ನಮ್ಮ ಕಂಪ್ಯೂಟರ್ ಅರಿಯುವುದಿಲ್ಲ. ಆದ್ಧರಿಂದ ಆಂಗ್ಲ ಭಾಷೆ "ಕಂಪ್ಯೂಟರ್"ಗಳಿಗೆ ಸೂಕ್ತವಲ್ಲ. Simple.


ಸಂಸ್ಕೃತದಲ್ಲಿ ಈ ರೀತಿಯ ವಾಕ್ಯಗಳು ಇರುವುದಿಲ್ಲ. ಇಂತಹ ಸಂಧಿಗ್ದಾರ್ಥ (ambiguity) ರೂಪದಲ್ಲಿ ವಾಕ್ಯಗಳನ್ನು ಬಳಸಲು ಪಾಣಿನಿಯ "ಅಷ್ಟಾಧ್ಯಾಯಿ"ಯ ಸೂತ್ರಗಳು ಬಿಡುವುದಿಲ್ಲ. ಮೇಲೆ ತೋರಿಸಿದ ಆಂಗ್ಲ ವಾಕ್ಯಗಳಲ್ಲಿ flies ಎಂಬ ಪದವು ನಾಮಪದವೂ ಆಗಿರಬಹುದು ಅಥವಾ ಕ್ರಿಯಾಪದವೂ ಆಗಿರಬಹುದು (ಸಂದರ್ಬಕ್ಕೆ ತಕ್ಕಂತೆ). ಆದರೆ ಸಂಸ್ಕೃತದಲ್ಲಿ ಇದು ಸಾದ್ಯವಿಲ್ಲ. ನಾಮಪದ ಶಬ್ದಗಳು "ಸುಪ್" ಪ್ರತ್ಯಯಗಳ ಜೊತೆ ಸೇರಿ ಒಂದು ರೂಪ ತಾಳುತ್ತದೆ. ಕ್ರಿಯಾಪದದ ಧಾತುಗಳು "ತಿನ್ಗ್" ಪ್ರತ್ಯಯಗಳ ಜೊತೆ ಸೇರಿ ಬೇರೆಯೇ ರೂಪ ತಾಳುತ್ತದೆ. ಆದ್ದರಿಂದ ಪಾಣಿನಿಯ ಅಷ್ಟಾಧ್ಯಾಯಿಯ ಮೂಲಕ ವರ್ಣಿಸಲ್ಪಟ್ಟ ಸಂಸ್ಕೃತ ವ್ಯಾಕರಣವು ಪ್ರಪಂಚದ ಮೊದಲನೆಯ "context free grammer" ಎಂಬ ಸಂಶಯವೇ ಬೇಡ.


ಅಷ್ತಾಧ್ಯಾಯಿಯು ಸುಮಾರು ೪೦೦೦ ಸೂತ್ರಗಳನ್ನು ಹೊಂದಿದೆ. ಸಂಸ್ಕೃತದಲ್ಲಿ ಬಳಕೆಯಾಗುವಂತಹ ಎಲ್ಲಾ ಅಂಶಗಳೂ ಇದರ ಆದಾರದ ಮೇಲೆಯೇ ನಡೆಯಬೇಕು. ಇಲ್ಲದಿದ್ದರೆ ಅದು "gramatically incorrect". ಪ್ರಪಂಚದ ಯಾವುದೇ ನಾಮಪದವಾದರೂ ಅದು ವಿಭಕ್ತಿ ಪ್ರತ್ಯಯಗಳ (ಉ, ಅನ್ನು, ಇಂದ ...) ಜೊತೆ ಸೇರಿ ಯಾವ ಯಾವ ರೂಪ ತಾಳುವುದು, ಕ್ರಿಯಾಪದಗಳ ರೂಪಗಳು ಯಾವ ಯಾವ ಕಾಲದಲ್ಲಿ ಹೇಗಿರಬೇಕು, ಸಂಧಿ-ಸಮಾಸ ಗಳ ವಿವರ, ವಾಕ್ಯಗಳಲ್ಲಿನ ಛಂದಸ್ಸು, ಅಲಂಕಾರ ಎಲ್ಲವೂ ಕೇವಲ ೨೦೦೦ ಸೂತ್ರಗಳಲ್ಲಿ ತಿಳಿಸಿದೆ. ಎಂಥಹ ತಲೆ ಸ್ವಾಮೀ ಈ ಪಾಣಿನಿಯದು.


ನಿಮಗೆ ಗೊತ್ತೇ? ಅಷ್ತಾಧ್ಯಾಯಿಯಲ್ಲಿ ಯಾವ ಯಾವ ಅಕ್ಷರಗಳು ಶರೀರದ ಯಾವ ಯಾವ ಬಾಗದಿಂದ ಉತ್ಪತ್ತಿ ಆಗುವುದೆಂದು ತಿಳಿಸಿದೆ. ಉದಾಹರಣೆಗೆ "ಅಕುಹವಿಸರ್ಜನೀಯಾನಾಂ ಕಂಠಃ" ಎಂದರೆ ಅ, ಕ-ವರ್ಗ, ಹ ಅಕ್ಷರಗಳು ಕಂಠದಿಂದ ಉತ್ಪತ್ತಿಯಾಗುತ್ತದೆ. ಎಷ್ಟು ಸುಲಭ ಅಲ್ವೇ ಇದು? ನೀವೂ ಯಾಕೆ ಸಂಸ್ಕೃತವನ್ನು ಕಲಿಯಬಾರದು?