Monday, March 1, 2010

ಉಜ್ವಲ ಪ್ರಾರಂಭ


ಸಂಜೆಗೆ ಕಾತರದಿಂದ ಎದುರು ನೋಡುತ್ತಿದ್ದೆ. ವಾತಾವರಣ ಉದ್ರೇಕದಿಂದ ಕೂಡಿತ್ತು. ಕುತೂಹಲಕ್ಕೆ ಮಿತಿಯೇ ಇರಲಿಲ್ಲ. ಹಸಿವು, ನಿದ್ದೆ ಯಾವುದೂ ಹತ್ತಿರ ಸುಳಿಯುತ್ತಿರಲಿಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲೇ ಪರಿಣಾಮ ತಿಳಿಯುವುದು. ಮಾಡುವುದಕ್ಕೆ ಕೆಲಸಗಳು ಬಹಳಷ್ಟಿದೆ. ಆದರೆ ಮನಸ್ಸು ಇದರಲ್ಲೇ ಮುಳುಗಿಬಿಟ್ಟಿದೆ. ಸಮಯ ರಾತ್ರಿ ೮:೩೦. ಆತಂಕದಿಂದ ಹೃದಯ ಸ್ವಲ್ಪ ವೇಗವಾಗೇ ಬಡಿದುಕೊಳ್ಳುತ್ತಿತ್ತು. ಇನ್ನೇನು ಯುದ್ಧ ಪ್ರಾರಂಭ. ಭಾರತ ಮತ್ತು ಪಾಕಿಸ್ತಾನದ ಸೈನಿಕರು ಯುದ್ಧದ ಮೈದಾನಕ್ಕೆ ಇಳಿದಾಯಿತು. ಇಷ್ಟೊತ್ತಿಗೆ ನೀವು ಊಹಿಸುರುತ್ತೀರ. ಭಾರತ ಮತ್ತು ಪಾಕಿಸ್ತಾನದ ನಡುವೆ ಆಟ. ಆದರೆ ಇದು ಕ್ರಿಕೆಟ್ ಅಲ್ಲ, ಹಾಕಿ ಪಂದ್ಯ. ವಿಷ್ವ ಹಾಕಿ ಪಂದ್ಯದ ಮೊದಲನೇ ಶ್ರೇಣಿಯ ಆಟ. ಭಾರತ ಪಾಕಿಸ್ತಾನವನ್ನು ೪-೧ ಗೋಲುಗಳ ಅಂತರದಲ್ಲಿ ಸೋಲಿಸಿತು.

ಕ್ರೀಡಾರಂಗ ತುಂಬಿ ತುಳುಕುತ್ತಿತ್ತು. ಒಂದು ಹಾಕಿ ಪಂದ್ಯವನ್ನು ನಮ್ಮ ಜನರು ಇಷ್ಟರ ಮಟ್ಟಿಗೆ ಅನುಸರಿಸುತ್ತಿದ್ದುದನ್ನು ನೋಡಿ ಸಂತಸವಾಯಿತು. ಭಾರತದಲ್ಲೇ ಹುಟ್ಟಿ ಬೆಳೆದುಬಂದ ಪಂದ್ಯವಲ್ಲದಿದ್ದರೂ, ಹಾಕಿ ನಮ್ಮ ರಾಷ್ಟ್ರೀಯ ಸ್ಪರ್ಧೆ ಎಂದು ಗುರುತಿಸಲ್ಪಟ್ಟಿದೆ. ಅದಕ್ಕೆ ಸಲ್ಲಬೇಕಾದ ಸ್ತಾನವನ್ನು ಮತ್ತೆ ಪಡೆದುಕೊಳ್ಳುತಿದೆ ಎಂಬ ಆಶಯ ಮೂಡುತ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ನನ್ನೆ ಭಾರತದ ತಂಡ ತನ್ನ ಅತ್ಯುತ್ತಮ ಪ್ರದರ್ಶನದಿಂದ ನಮ್ಮನ್ನೆಲ್ಲಾ ಮೈಮರೆಸಿತು ಎಂದು ಹೇಳಿದರೆ, ಅದು ಉತ್ಪ್ರೇಕ್ಷೆಯಾಗುವುದಿಲ್ಲವೇನೋ. ಈ ಪಂದ್ಯದಲ್ಲಿ ನಮ್ಮ ಆಟಗಾರರು ತೋರಿಸಿದ ಉತ್ಸಾಹ, ದಿಟ್ಟತನ, ಪಂದ್ಯಾಟದ ಕೊನೆಯವರೆಗೂ, ಅದರ ನಂತರವೂ ಹೀಗೇ ಇರಲಿ.

ಪಾಕಿಸ್ತಾನ ನಮ್ಮ ಒಳ್ಳೆಯ ಸಹೃದಯದ ನರೆಯವ ಎಂದು ಶಾರುಕ್ ಖಾನ್ ಸಾಹೇಬರು ಬೊಬ್ಬೆ ಹೊಡದರೂ, ಜನರ ಮನಸ್ಸಿನಲ್ಲಿ ಪಾಕಿಸ್ತಾನಕ್ಕೆ ಯಾವ ಸ್ಥಾನ ಇದೆ ಎಂಬುದು ಎಲ್ಲರಿಗೂ ತಿಳಿದಂತಹ ಮಾತು. ಕ್ರೀಡೆಯನ್ನು ಸೇರಿಸಿ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿ, ನಾವು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ. ಅದಕ್ಕೆ ಈ ಪಂದ್ಯವೂ ಒಂದು ಭಾಗಿ. ಹೀಗೆ ಮುಂದೆ ಬರುವೆ ಪಂದ್ಯಗಳಲ್ಲೂ ಗೆಲುವನ್ನು ಸಾಧಿಸಿ, ವಿಷ್ವ ಪಂದ್ಯಾಟವನ್ನು ಮತ್ತೊಮ್ಮೆ ಗೆಲ್ಲುವಂತವರಾಗಲಿ. ಚಕ್ ದೆ ಇಂಡಿಯ.

ಚಿತ್ರ: ಅಂತರ್ಜಾಲ

Monday, February 1, 2010

ಯಾಮಿನಿ - ೨೦೧೦ (ಭಾಗ -೨)

ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ. ಮುಂದಿನ ಕಾರ್ಯಕ್ರಮ ಶ್ರೀಮತಿ ಶಾಂಭವಿ ವಾಝೆ ಅವರ ಕಥಕ್ ನೃತ್ಯವಾದ್ದರಿಂದ ವೇದಿಕೆ ಸಿದ್ದಪಡಿಸಲು ಸ್ವಲ್ಪ ಸಮಯ ಬೇಕಾಗಿತ್ತು. ಚಂದ್ರನೂ ನೆತ್ತಿಯ ಎತ್ತರಕ್ಕೆ ಬಂದಿದ್ದ. ನವೀನ ಆಗಲೇ ಸ್ವಪ್ನ ಲೋಕದಲ್ಲಿ ತೇಲಾಡುತ್ತಿದ್ದ. ಬೆಂಕಿಯ ಹೊಗೆ ಸ್ವಲ್ಪ ಹೆಚ್ಚೇ ಹರಡುತ್ತಿತ್ತು. ಆಗ ನನ್ನ ಕಾಮೆರಾ ಕಣ್ಣುಗಳು ಕಂಡದ್ದು ಎವು -


ನಾನೂ ಸ್ವಲ್ಪ ಹೊತ್ತು ಮಲಗಬೇಕೋ ಬೇಡವೋ ಎಂದು ಯೋಚಿಸುತ್ತಿರಬೇಕಾದರೆ ಮುರಳಿಯ ಗುರುಗಳು ಆಗಮಿಸಿದರು. ಅವರ ಜೊತೆ ಹರಟುತ್ತಿದ್ದಾಗ ನಿದ್ದೆಯು ಬಂದ ಹಾದಿಯನ್ನೇ ಹಿಡಿದು ಮರಳಿತು. ಒಂದು ಕಪ್ ಕಾಫೀ ಹೀರಿ, ಮತ್ತೆ ಸ್ವಸ್ಥಾನಕ್ಕೆ ಬಂದು ಕೂತೆ. ಅರ್ಧಕ್ಕರ್ಧ ಜನ ಎದ್ದು ಹೋಗಿದ್ದರು.

ನಾನು ಆಗಿನವರೆಗೂ ಯಾವುದೇ ಕಥಕ್ ನೃತ್ಯ ನೇರವಾಗಿ ನೋಡಿರಲಿಲ್ಲ. ಯಾಕೋ ಭರತನಾಟ್ಯಮ್‍ಗೆ ಇದ್ದ ಆಸಕ್ತಿ ಕಥಕ್ ನೃತ್ಯಕ್ಕೆ ಇರಲಿಲ್ಲ. ಆದರೂ ಬಂದ ಉದ್ದೇಶ ವ್ಯರ್ಥವಾಗಬಾರದೆಂದು ಕೂತು ನೋಡುತ್ತಿದ್ದೆ. ನೃತ್ಯ ಕಾರ್ಯಕ್ರಮ ಪ್ರಾರಂಭದಲ್ಲಿ ಕಲಾವಿದರ ಪರಿಚಯವಾಯಿತು. ಶಾಂಭವಿ ವಾಝೆಯವರು ಮೂಲತಃ ಪುಣೆಯವರಾಗಿದ್ದು, ಕಥಕ್‍ನಲ್ಲಿ ಪರಿಣಿತರಾಗಿ, ದೇಶ-ವಿದೇಶಗಳಲ್ಲಿ ಹಲವಾರು ನೃತ್ಯಕಾರ್ಯಕ್ರಮವನ್ನು ನೀಡಿದ್ದರು. ಅಷ್ಟಲ್ಲದೆ ಫ್ರೆಂಚ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ನಿಪುಣತೆ ಪಡೆದಿದ್ದರು. ಅವರ ಪರಿಚಯ ಕೇಳಿ ಕಿವಿ ಚುರುಕಾಯಿತು. ಅವರ ನೃತ್ಯ ಕಾರ್ಯಕ್ರಮ ನೋಡಲು ಆಸಕ್ತಿ ಹೆಚ್ಚಾಯಿತು.

ನೃತ್ಯವು ಗಣೇಶನ ಆರಾಧನೆಯಿಂದ ಪ್ರಾರಂಭವಾಯಿತು. ನಂತರ ಹಲವಾರು ತಾಳ ವಿನ್ಯಾಸಗಳು (ಇದಕ್ಕೆ ಕಥಕ್‍ನಲ್ಲಿ ಏನೆಂದು ಹೇಳುತ್ತರೆ ಎಂಬುದು ಗೊತ್ತಿಲ್ಲ) ಮತ್ತು ಅದರ ಅನುಗುಣವಾಗಿ ಪಾದಮೆಟ್ಟಲುಗಳೊಳಗೊಂಡ ನೃತ್ಯ. ಇದರ ವೈಶಿಷ್ಟ್ಯ ಅಂದರೆ, ಶಾಮ್ಭವಿ ವಾಝೆ ಅವರೇ ತಾಳ ಮಾದರಿಯನ್ನು ನಿರೂಪಿಸಿ, ನಂತರ ಅವರೇ ನೃತ್ಯವನ್ನು ಮಾಡುತ್ತಿದ್ದರು (ನೃತ್ಯಮಾಡುವಾಗ ನಿರೂಪಣೆಯ ಕೆಲಸ ಸಿ.ಡಿ. ಪ್ಲೇಯರ್ ಮಾಡುತ್ತಿತ್ತು). ನಂತರದ ನಾಟ್ಯ ವಸ್ತು/ವಿಷಯಕ್ಕೆ ಅನುಗುಣವಾದುದರಿಂದ ನನ್ನಂತಹ ಪಾಮರರಿಗೂ ಅರ್ಥವಾಯಿತು. ಯಶೋದೆ ಕೃಷ್ಣನನ್ನು ಮಲಗಿಸುವ ಪರಿ, ಕೃಷ್ಣ ಗೋವರ್ಧನ ಗಿರಿಯನ್ನು ಎತ್ತುವ ಪ್ರಸಂಗ, ಕೃಷ್ಣ ಗೋಪಿಯರ ಜೊತೆ ಹೋಲಿ ಆಡುತ್ತಿರುವ ಕ್ರಮ, ಎಲ್ಲದರ ಒಂದೊಂದು ಚಿತ್ರವೂ ಕಣ್ಣಮುಂದೆ ಹರಿದು ಹೋಯಿತು. ಕಥಕ್ ಇಷ್ಟು ಆಕರ್ಷಕವಾಗಬಹುದು ಎಂದು ತಿಳಿದದ್ದೇ ಆಗ. ವೃಂದನಾಟ್ಯದಲ್ಲಿ ಏಕಕಾಲಿಕ ಚಲನೆಗಳನ್ನು ನೋಡಿದಾಗ, ಹೇಗೆ ಅಭ್ಯಸ ಮಾಡುತ್ತಿದ್ದರೆಂದೇ ತಿಳಿಯಲಿಲ್ಲ. ನೃತ್ಯದ ಕೆಲವೊಂದು ಚಿತ್ರಗಳು -



ನೃತ್ಯ ಮುಗಿಯುವಾಗ ಸುಮಾರು ೩:೦೦ ಗಂತೆ ಆಗಿತ್ತೇನೋ. ನಂತರ ಹಿಂದೂಸ್ತಾನಿ ಗಾಯನ ತಕ್ಷಣವೇ ಪ್ರಾರಂಭವಾಯಿತು, ಆನಂದ್ ಭಾಟೆಯವರ ನೇತೃತ್ವದಲ್ಲಿ. ಅವರ ಪರಿಚಯವಾದಾಗ, ಅವರು ಒಬ್ಬ ಸಾಫ್ಟ್ವೇರ್ ಇಂಜಿನೀರ್ ಎಂದು ತಿಳಿದು ಸಂತೋಷವೂ ಆಶ್ಚರ್ಯವೂ ಆಯಿತು. ಮೊದಲ ಗಾನದ ಆಲಾಪನೆ ಮುಗಿಯುವಷ್ಟರಲ್ಲೇ ನನಗೇ ತಿಳಿಯದೇ ಮಲಗಿಬಿಟ್ಟಿದ್ದೆ ;-) ಯಾಕೋ ಹಿಂದುಸ್ತಾನಿ ಸಂಗೀತಕ್ಕೂ ನನಗೂ ನಂಟು ಅಷ್ಟೇ ಅನ್ಸತ್ತೆ. ಸುಮಾರು ೫:೦೦ ಗಂಟೆಗೆ ಮುರಳಿ ಎಬ್ಬಿಸಿದ. ಆಗ ನನಗೆ ಕೇಳಿಸುತ್ತುದ್ದುದು ’ಭಾಗ್ಯಾದ ಲಕ್ಷ್ಮಿ ಬಾರಮ್ಮಾ’ ಹಾಡು, ’ನೋಡಿ ಸ್ವಾಮಿ ನಾವಿರೋದು ಹೀಗೆ’ ಚಿತ್ರದಲ್ಲಿ ಭೇಮ್ಸೇನ್ ಜೋಶಿ ಹಾಡಿದ್ರಲ್ಲಾ, ಆ ಶೈಲಿಯಲ್ಲಿ.



ಮುಂಜಾವಿನ ಮಂಜಿನ ಪರಿಸರದಲ್ಲಿ ಕೂತು ಸಂಗೀತ ಕೇಳುವುದೂ ಒಂತರಾ ಮಧುರ ಯಾತನೆ. ಸಂಗೀತ ಮುಗಿದಮೇಲೆ ದ್ವಿಚಕ್ರವಾಹನದಲ್ಲಿ ೨೦ ಕಿಮಿ ಸಂಚರಿಸುವುದು ಬರೀ ಮರೆಯುವಂತಹ ಯಾತನೆ.
ಚಿತ್ರಗಳನ್ನು ತೆಗೆದಿದ್ದು ಸೋನಿ ಎಚ್-೫೦ ಕಾಮೆರಾದಿಂದ.
ತೆಗೆದವರು ನವೀನ, ಮುರಳಿ ಮತ್ತು ನಾನು. ಯಾವುದು ಯಾರು ತೆಗೆದದ್ದು ಎಂಬುದು ಜ್ಞಾಪಕವಿಲ್ಲ.

(ಮುಗಿಯಿತು)

Thursday, January 28, 2010

ಯಾಮಿನಿ - ೨೦೧೦ (ಭಾಗ -೧)


ಈ ಸಲ ಚೆಳಿ ಸ್ವಲ್ಪ ಹೆಚ್ಚು ಅನ್ಸತ್ತೆ. ಆಫೀಸಿಂದ ಬೈಕ್ನಲ್ಲಿ ಬರೋವಾಗ ಮನೆ ತಲುಪಿದರೆ ಸಾಕು ಅನ್ನುವಷ್ಟು ಮೈ ಕೊರಿತಿರತ್ತೆ. ಸಂಜೆ ೭:೦೦ ಗಂಟೆಗೇ ಈ ಪರಿಸ್ಥಿತಿ ಆದ್ರೆ, ಇನ್ನು ರಾತ್ರಿ ಹೊತ್ತಿನಲ್ಲಿ ಇನ್ಹೇಗಿರತ್ತೋ ನಾ ಕಾಣೆ. ರಾತ್ರಿ ಹೊತ್ತು ಹೊರಗೆ ಇದ್ದು, ಈ ಮಂಜಿನ ಜೊತೆ ಸರಸ ಆಡ್ತಾ ಇರೋ ಮಜ ಅನುಭವಿಸಿದವರಿಗೇ ಗೊತ್ತು. ಈ ಅನುಭವವನ್ನು ಮೊನ್ನೆ ಪುನಃ ಪಡೆಯಲು ಅವಕಾಶ ಮಾಡಿಕೊಟ್ಟದ್ದು ಯಾಮಿನಿ - ೨೦೧೦. ಐಐಎಮ್-ಬಿ ವತಿಯಿಂದ ಪ್ರತಿ ವರುಷ ಯಾಮಿನಿ ಎಂಬ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ http://www.iimb-yamini.com/ ನೋಡಿ. ಯಾಮಿನಿಯ ವಿಷೇಶ ಅಂದ್ರೆ ಸಂಜೆ ೬:೩೦ಗೆ ಪ್ರಾರಂಭವಾಗುವ ಸಂಗೀತ ಕಾರ್ಯಕ್ರಮ, ಇಡೀ ರಾತ್ರಿ ಜಾರಿಯಲ್ಲಿದ್ದು, ಮರುದಿನ ಬೆಳಗ್ಗೆ ೬:೦೦ಗೆ ಮುಕ್ತಾಯವಾಗುತ್ತದೆ. ಈ ಸಲ ನನಗೆ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿತು.

೨೫ನೇ ತಾರೀಕು ಸಂಜೆ ಹೊರಡಬೇಕು. ಮರುದಿನ ಗಣರಾಜ್ಯೋತ್ಸವವಿದ್ದರಿಂದ ಕಚೇರಿಗೆ ರಜ. ಕಚೇರಿಯಿಂದ ಬೇಗ ಮನೆಗೆ ಬಂದು ಹೊರಡಲು ಸಿದ್ದವಾದೆ. ಮುರಳಿ, ನವೀನ ನನ್ನ ಜೊತೆ ಕೈ ಜೋಡಿಸಿದರು. ಮೂರೂ ಜನ ಎರಡು ವಾಹನಗಳಲ್ಲಿ ಐಐಎಮ್-ಬಿ ಸೇರುವ ಹೊತ್ತಿಗೆ ಸುಮಾರು ೭:೦೦ ಗಂಟೆ ಆಗಿತ್ತು. ನಮ್ಮ ಪುಣ್ಯ, ಕಾರ್ಯಕ್ರಮ ಇನ್ನೂ ಪ್ರಾರಂಬವಾಗಿರಲಿಲ್ಲ. ವೇದಿಕೆಯ ಸಮೀಪದಲ್ಲಿ, ಮೆತ್ತಗಿನ ಹಾಸಿಗೆಗಳನ್ನು ಹಾಸಿದ್ದರು. ಸುಮಾರು ೫೦೦ ಜನ ಸುಲಲಿತವಾಗಿ ಕೂರಬಲ್ಲಷ್ಟು ಜಾಗದಲ್ಲಿ ಹಾಸಿಗೆಗಳನ್ನು ಹಾಸಿದ್ದರು. ಅದರ ಸುತ್ತಲೂ ಇನ್ನೂ ಸುಮಾರು ೫೦೦ ಜನ ಕೂರಬಹುದಾದಷ್ಟು ಕುರ್ಚಿಗಳನ್ನು ಹಾಕಿದ್ದರು. ಚೆಳಿಗೆ ಮೈ ಬಿಸಿಮಾಡಿಕೊಳ್ಳಲು, ಅಲ್ಲಲ್ಲಿ ಬೆಂಕಿಯನ್ನು (ಕಾಂಪ್ ಫೈರ್) ಹಾಕಿದ್ದರು. ಒಟ್ಟಿನಲ್ಲಿ "Holiday mood at its best" ಎಂದು ಅನಿಸಿತು.

ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -












ನಿತ್ಯಶ್ರೀ ಅವರ ಗಾಯನ ಮುಗಿಯುವಷ್ಟರಲ್ಲಿ ಸುಮಾರು ೯:೩೦ ಆಗಿತ್ತು. ಅಷ್ಟು ಹೊತ್ತು ತಾಲ್ಮೆಯಿಂದ ಕೂತಿದ್ದ ಜನ, ತಕ್ಷಣ ಎದ್ದು ತಿಂಡಿಗಳ ಮಳಿಗೆಯ ದಿಕ್ಕಿನಲ್ಲಿ ಓಡಿದರು. ನಾವು ಸಮಾಧಾನವಾಗಿ ಎದ್ದು ಹೋಗುವಷ್ಟರಲ್ಲಿ, ಶ್ರೀ ಕೃಷ್ಣ ಭವನದ ಮಳಿಗೆಯಲ್ಲಿ ಜನಸಾಗರವೇ ಇತ್ತು. ಇನ್ನು ಆ ಸಾಲಲ್ಲೇ ಇದ್ದರೆ ಇವತ್ತು ಉಪವಾಸವೇ ಎಂದು, ಸಾಂಡ್ವಿಚ್ ಇಂದಲೇ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಹೊಟ್ಟೆ ಪೂರ್ತಿ ತುಂಬದಿದ್ದರೂ ಜೇಬಿಗೆ ಮಜಬೂತಾದ ಕತ್ತರಿಯೇ ಬಿದ್ದಿತು :-(

ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂನಾರಾಯಣ ಸೂಕ್ತ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -













ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ.

... (ಸಶೇಷ)

Monday, January 4, 2010

ಹತ್ತರ ಹೊತ್ತು



ಮತ್ತೊಂದು ಕಾಲ ಘಟ್ಟ ಸಾಗಿ ಹೋಯಿತು. ಇದು ನಮಗೆ ಹೊಸ ವರುಷವೇ? ಹಾಗಾದರೆ ಯುಗಾದಿ ಏನು? ಈ ಪ್ರಷ್ನೆಗಳು ಸಹಜವಾಗಿ ಉದ್ಭವಿಸುತ್ತದೆ. ಆದರೆ ನಾವು ಯಾವುದನ್ನೂ ತಿರಸ್ಕಾರ ಮನೋಭಾವದಿಂದ ನೋಡುವುದನ್ನು ಕಡಿಮೆಮಾಡಿದರೆ ಮನುಜನಕ್ಕೆ ಒಳ್ಳೆಯದು. ಗ್ರೆಗೋರಿಯನ್ ಕಾಲೆಂಡರ್ ಪ್ರಕಾರ ಇದು ಹೊಸ ವರುಷವೇ. ನಾವು ಈ ಹೊಸ ವರುಷದಂದು ಶುಭ ಹಾರೈಸಿದರೆ ನಮ್ಮತನವನ್ನು ಬಿಟ್ಟುಕೊಡುವುದೆಂದಲ್ಲ.


೨೦೦೯ ಕಳೆದು ೨೦೧೦ ಪ್ರಾರಂಭದ ಅವಧಿಯಲ್ಲಿ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಕಣ್ಣು ಹಾಯಿಸಿದರೆ, ಅದರಿಂದ ಕಲಿಯುವುದು ಬಹಳಷ್ಟಿರಬಹುದು. ಕಳೆದ ಕಾಲೆಂಡರ್ ವರುಷ, ನಮಗೆ ಅಷ್ಟಾಗಿ ಸುಗಮವಾಗಿ ಸಾಗಲಿಲ್ಲ ಎಂದು ಬಹುಮತರ ಅಭಿಪ್ರಾಯ. ವಿರೋಧಿ ಸಂವತ್ಸರದ ಹೆಚ್ಚಿನ ಅವಧಿ ೨೦೦೯ ನಲ್ಲಿ ಕಳೆದು, ಪರಸ್ಪರ ವೈಮನಸ್ಯವೇ ಹೆಚ್ಚಾಗಿ ಬೆಳೆಯುತ್ತಿರುವ ಸೂಚನೆ ಕಾಣುತ್ತಿದೆ. ೨೦೧೨ ರ ಪ್ರಳಯಕ್ಕೆ ಇದೇ ತಳಪಾಯ ಹಾಕಿದಂತಿದೆ ;-)


ನನಗಂತೂ ೨೦೦೯ ಮರೆಯುವಂತಹ ವರುಷವೇ. ವೈಯುಕ್ತಿಕವಾಗಿ, ಸಾಮಾಜಿಕವಾಗಿ ಇಷ್ಟೋಂದು ಸಾವು ಕಂಡಿರಲಿಲ್ಲ. ಕೊನೆಗೆ ಎಲ್ಲವೂ ಇಷ್ಟೆ ಎಂಬ ನಿರ್ಲಿಪ್ತತೆಯ ಮನೋಭಾವ ಹರಿದುಬಂತು. ಅಶ್ವಥ್ ಮತ್ತು ವಿಷ್ನು ಅವರನ್ನು ಕಳೆದುಕೊಂಡ ನಾವೇ ದುರ್ಭಾಗ್ಯವಂತರು. ಮುಂಬರುವ ವರುಷ ನಮ್ಮ ಸ್ವಾರ್ಥ, ವೈಮನಸ್ಯವನ್ನು ಹೋಗಲಾಡಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಹೊಸ ವರುಷದ ಶುಭಾಷಯಗಳು.


೨೦೧೦ಯನ್ನು ಈ ಮನುಸ್ಮೃತಿಯ ಶ್ಲೋಕದಿಂದ ಪ್ರಾರಂಭಿಸುತ್ತಿದ್ದೇನೆ.


ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವಿರ್ಜತೌ
ಧರ್ಮಚಾಪ್ಯಸುಖೋದರ್ಕ ಲೋಕನಿಕೃಷ್ಟಮೇವ ಚ


ಅರ್ಥ: ಧರ್ಮದಿಂದ ತಿರಸ್ಕೃತವಾದ ಧನವನ್ನು ಸ್ವೀಕಾರವಾಗದಿರಲಿ. ಧರ್ಮದಿಂದ ಭವಿಷ್ಯದಲ್ಲಿ ಮನುಜ ಜನಾಂಗಕ್ಕೆ/ಪ್ರಕೃತಿಗೆ ನೋವು ಉಂಟಾದರೆ, ಈ ಧರ್ಮವೇ ಸ್ವೀಕಾರವಾಗದಿರಲಿ.


ಇದು ಮನುಸ್ಮೃತಿಯಲ್ಲೇ ಹೇಳಿದೆ. ಹಾಗಾದರೆ, ಧರ್ಮ ಬದಲಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ’ಧರ್ಮ’ ಎಂದರೆ ಯುಗಧರ್ಮ ಎಂಬ ಅರ್ಥ. ಸನಾತನ ಧರ್ಮವಲ್ಲ. ಸನಾತನ ಧರ್ಮ ಬದಲಾಗುವುದಿಲ್ಲ. ಆದರೆ ಸಮಯಕ್ಕೆ ತಕ್ಕಹಾಗೆ ನಮ್ಮ ನಡವಳಿಕೆಗಳನ್ನು ಮಾರ್ಪಾಡಿಸಬೇಕೆಂಬುದಾಗಿ ಮನುವೇ ಹೇಳಿರುವಂತಿದೆ (ಮಾರ್ಪಾಡು ಸನಾತನಧರ್ಮದ ಚೌಕಟ್ಟಿನಲ್ಲಿ). ಇದರ ವಿಸ್ತಾರವಾದ ಅರ್ಥ ತಿಳಿದವರು ಹಂಚಿಕೊಳ್ಳಬಹುದು.

ಚಿತ್ರ: ಅಂತರ್ಜಾಲ