ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -
ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ಈ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ಈ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂ ’ನಾರಾಯಣ ಸೂಕ್ತ’ದ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -