Wednesday, October 28, 2009

೫೦೦ರ ಸಂಭ್ರಮ


ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.

ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.

ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?

ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.

Wednesday, October 14, 2009

ಮರಳಿ ಬಾ ಪುಣ್ಯಕೋಟಿ



ಬಹಳ ವರುಷಗಳಿಂದ ನನಗೊಂದು ಆಸೆ. ಮನೆಯಲ್ಲಿ ಒಂದು ಹಸು ಇರಬೇಕೆಂದು. ಆದರೆ ಈ ಬೆಂಗಳೂರಿನಲ್ಲಿ ಅದನ್ನು ಮೇಯಿಸಲು ಎಲ್ಲಿಗೆ ಕಳಿಸುವುದು? ಹಸು ಆರೋಗ್ಯದಿಂದ ಇರಬೇಕಾದರೆ ಅದು ದಿನಕ್ಕೆ ಐದಾರು ಗಂಟೆಗಳವರಿಗಾದರೂ ಓಡಾಡಿ ಮೇಯಬೇಕು. ಕೂತಲ್ಲೇ ಕೂತರೆ ಅದು ನಿಶ್ಪ್ರಯೋಜಕವಾಗುತ್ತದೆ. ನನ್ನ ಕನಸು ಕನಸಾಗಿಯೇ ಉಳಿಯಿತು.


ಹಸು ಮನೆಯಲ್ಲಿದ್ದರೆ ಮನೆಗೆ ಒಳ್ಳೆಯದು ಎಂಬ ಭಾವನೆ ಇದೆ. ಹಸುವಿನ ಪ್ರಯೋಜನ ಎಲ್ಲರಿಗೂ ತಿಳಿದ ವಿಷಯವೇ. ಪಾಕೆಟ್ ಹಾಲಿಗಿಂತ ಹಸುವಿನ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಪುಷ್ಟಿದಾಯಕ ಎಂದು ವಿಜ್ಙಾನವೇ ಹೇಳುತ್ತದೆ. ಅದರ ಮೂತ್ರ, ಸಗಣಿಯಿಂದ ನಿರೋಧಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಸುವೊಂದಿದ್ದರೆ ಎಚ್೧ಎನ್೧ ಗೆ ಹೆದರಬೇಕಾಗಿಲ್ಲ ಅಲ್ಲವೇ?
ಈಗ ಯಾಕಪ್ಪ ಇದರ ಬಗ್ಗೆ, ಅದೂ ಬೆಂಗಲೂರಿನಲ್ಲಿ ಅಂತ ಯೋಚನೆ ಮಾಡ್ತಿದಿರಾ? ಭಾರತೀಯ ಹಸುವಿನ ೧೦೦ಕ್ಕೂ ಹೆಚ್ಚು ತಳಿಗಳಲ್ಲಿ ಕೇವಲ ೩೩ ತಳಿಗಲು ಇನ್ನು ನಶಿಸದೇ ಉಳಿದುಕೊಂಡಿದೆ. ಇದರ ಬಗ್ಗೆ ನಾವು ಏನು ಮಾಡುತ್ತಿದ್ದೀವಿ?


ನಮ್ಮ ಇತಿಹಾಸದಲ್ಲಿ ನಾವು ನೋಡುತ್ತೇವೆ, ಹಸುಗಳು ಆಧಾರವಾಗಿದ್ದ ರಾಜ್ಯಗಳು ಬೆಳವಣಿಗೆಯ ಹಾದಿಯಲ್ಲಿ ಸಾಗಿತು. ಆದರೆ ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ. ನಮ್ಮ ಪ್ರಧಾನ ಉದ್ಯಮ ಕೃಶಿ ಎಂದು ಹೇಳಿಕೊಂಡರೂ, ನಾವು ಪಾಶ್ಚಾತ್ಯದ ಹಾದಿನನ್ನು ಅನುಸರಿಸುತ್ತಿದ್ದೇವೆ. ಹಳ್ಳಿಗಳಿಂದ ರೈತರು ತಮ್ಮ ಬೇಸಾಯವನ್ನು ಬಿಟ್ಟು ಪಟ್ಟಣದ ಕಡೆ ಮುಖ ಮಾಡಿದ್ದಾರೆ. ಅವರನ್ನು ದೂಶಿಸುವುದು ಉಚಿತವಲ್ಲ. ಪಟ್ಟಣಗಳಲ್ಲಿರುವವರು ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ರೈತರು ಮಾತ್ರ ಹಳ್ಳಿಗಳಲ್ಲೇ ಉಳಿಯಬೇಕು ಎಂದು ನಾವು ಯಾಕೆ ನಿರೀಕ್ಷಿಸಬೇಕು? ಆದರೆ ಹೀಗಯೇ ಮುಂದುವರೆದರೆ, ನಮ್ಮಲ್ಲಿ ಹಣವಿರಬಹುದೇನೋ ಆದರೆ ಉಣ್ಣಲು ಅನ್ನ ಇರುವುದಿಲ್ಲ. ಹೇಗೆ ಕಳೆದ ೨೦-೨೫ ವರುಷಗಳಿಂದ ಪಟ್ಟಣಗಳಲ್ಲಿ ಐಟಿ ಆಂದೋಲನವಾಯಿತೋ ಹಾಗೆ ಈಗ ಕೃಶಿ ಮತ್ತು ಗೋ ಆಂದೋಲನವಾಗಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಅದೋಗತಿ. ಗೋವನ್ನು ಕಾಪಾಡುವುದು ಎಲ್ಲರ ಕರ್ತವ್ಯವಲ್ಲವೇ? ಅದು ಬರಿ ರೈತರಿಗೆ ಸಂಬಂದಪಟ್ಟ ವಿಷಯವೇ?


ಸೆಪ್ಟಂಬರ್ ೩೦ನೇ ತಾರೀಕು ಕುರುಕ್ಷೇತ್ರದಲ್ಲಿ "ವಿಷ್ವ ಮಂಗಲ ಗೋ-ಗ್ರಾಮ ಯಾತ್ರೆ" ಪ್ರಾರಂಭವಾಯಿತು. ಯಾತ್ರೆ ೧೦೮ ದಿನ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದಲೂ ಸಾಗಿ ನಾಗಪುರದಲ್ಲಿ ಅಂತ್ಯಗೊಳ್ಳಲಿದೆ. ಬೆಂಗಲೂರಿಗೆ ಡಿಸೆಂಬರ್ ೧ನೇ ತಾರೀಕು ಬರುತ್ತದೆ. ಭಾರತದ ಪ್ರತಿಷ್ಠಿತ ಸ್ವಾಮಿ-ಸಂತರು ಸೇರಿ ಮಾಡುತ್ತಿರುವ ಈ ಕಾರ್ಯಕ್ರಮ, ಹೆಚ್ಚು ಜನರನ್ನು ಗೋ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ http://kan.gougram.org/ ಗೆ ಭೇಟಿನೀಡಿ.


ಇದರಲ್ಲಿ ನಮ್ಮ ಪಾತ್ರವೂ ಇದೆ. ಈ ಯಾತ್ರೆಯ ಫಲ ಹೆಚ್ಚು ಜನರಿಗೆ ಮುಟ್ಟಬೇಕಾಗಿದೆ. ಹೆಚ್ಚೆಚ್ಚು ಜನರು, ರೈತರು, ಕೈಗಾರಿಕೋದ್ಯಮರು, ರಾಜಕಾರಿಣಿಗಳು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಈಗಲೇ ಅಡಿಗಟ್ಟು ಹಾಕಬೇಕಿದೆ. ನೀವೂ ಇದಕ್ಕೆ ಕೈ ಜೋಡಿಸ್ತೀರ ಅಲ್ವಾ?

Wednesday, September 30, 2009

ಸಹಜವೇ ಅಸಹಜ


ಇವತ್ತು ದಿನಪತ್ರಿಕೆಯಲ್ಲಿ ಓದಿದ್ದು, "ಒಬ್ಬ ಅಟೊ ಡ್ರೈವರ್ ಒಬ್ಬ ಗಿರಾಕಿಗೆ ಅವರು ಬಿಟ್ಟು ಹೋಗಿದ್ದ ಲಾಪ್‍ಟಾಪ್‍ಅನ್ನು ಹಿಂತಿರುಗಿಸಿ ಕೊಟ್ಟ" ಎಂದು. ಆ ಡ್ರೈವರ್ ಮಾಡಿದ ಕೆಲಸ ಶ್ಲಾಘನೀಯ. ಆದರೂ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ದೊಡ್ಡ ವಿಷಯವೇ? ಹೌದು ಅದು ದೊಡ್ಡ ವಿಷಯ. ಯಾಕೆಂದರೆ ಈಗಿನ ಕಾಲದಲ್ಲಿ ಅಷ್ಟು ಕೂಡ ಯಾರು ಮಾಡುವುದಿಲ್ಲ. ಅಂದರೆ, ಯಾವುದು ಸಹಜವಾಗಿ ಆಗಬೇಕೋ ಅದು ಅಪರೂಪವಾಗಿದೆ ಎಂದೇ ಅರ್ಥವಲ್ಲವೇ? ಇಂತಹ ವಿಷಯಗಳನ್ನು ಪತ್ರಿಕೆಯಲ್ಲಿ ಓದಿ ಸಂತೋಷಪಡಬೇಕೋ ದುಃಖಪಡಬೇಕೋ ತಿಳಿಯುತ್ತಿಲ್ಲ.


ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಒಂದೇ ಸುದ್ದಿ. ಕಾಂಗ್ರೆಸ್ ಪಾರ್ಟಿಯ ರಾಜಕಾರಣಿಯರು ವಿಮಾನದಲ್ಲಿ ಎಕೊನೊಮಿ ಕ್ಲಾಸ್ನಲ್ಲೇ ಪ್ರಯಾಣ ಮಾಡುತ್ತಾರಂತೆ. ಅದರ ಉದ್ದೇಶ, ಪ್ರಜೆಗಳ ಹಣವನ್ನು ತಮ್ಮ ಸುಖಕ್ಕೋಸ್ಕರ ದುರುಪಯೋಗ ಆಗಬಾರದು ಎಂದು. ಅಂದರೆ ಇಷ್ಟು ವರ್ಷ ದುರುಪಯೋಗವಾಗುತ್ತಿತ್ತು ಅಂತೆಲ್ಲವೇ? ಹೋದ ವಾರ "ಬೆತ್ತಲೆ ಜಗತ್ತು" ಲೇಖನದಲ್ಲಿ ಪ್ರತಾಪ್ ಸಿಂಹ ಇದರ ಬಗ್ಗೆ ದೇರ್ಘವಾಗಿ ಬರೆದಿದ್ದಾರೆ.


ಅಭಿಶೇಕ್ ಭಚ್ಚನ್ ಮತ್ತು ಐಶ್ವರ್ಯ ಭಚ್ಚನ್ ಅಮಿತಾಬ್ ಮತ್ತು ಜಯ ಜೊತೇಗೇ ಇರ್ತಾರೆ. ಬೇರೆ ಮನೆ ಮಾಡುವುದಿಲ್ಲವಂತೆ. ಅದಕ್ಕೇನು? ಅವನಿಗೆ ನೊಬೆಲ್ ಪ್ರೈಜ಼್ ಕೊಡಬೇಕೇ? ತಂದೆ ತಾಯಿಯ ಜೊತೆ ಇರುವುದು ಅಷ್ಟು ಅಸಹಜವಾಗಿದೆಯೇ?


ಈ ರೀತಿಯ ಸುದ್ದಿಗಳು ಪತ್ರಿಕೆಯಲ್ಲಿ ಪದೇ ಪದೇ ನೋಡುತ್ತೇವೆ. ಅದು ಬಿಡಿ. ನಮ್ಮ ನಿತ್ಯ ಜೀವನದಲ್ಲಿ ಕೂಡ ಇದನ್ನು ನೋಡಬಹುದು. ಉದಾಹರಣೆಗೆ -


ಕೆಲವರಿಗೆ ಬೆಳಗ್ಗೆ ಬೇಗ ಏಳುವುದೇ ದೊಡ್ಡ ಸಾಹಸ ಮಾಡಿದಂತೆ. ದಿನಾ ಬೇಗ ಏಳುವವರು ಎಷ್ಟೋ ಜನ ಇದ್ದಾರೆ. ಆದರೆ ಅವರನ್ನು ಕಂಡರೆ, ಅದೇನು ಮಹಾ ಅವರು ಮೊದಲಿನಿಂದಲೂ ಬೇಗ ಎದ್ದು ಅಭ್ಯಾಸ. ಅದಕ್ಕೆ ಅವರಿಗೆ ಏನು ಕಷ್ಟ ಆಗಲ್ಲ. ನಿದಾನವಾಗಿ ೯ ಅಥವ ೧೦ ಗಂಟೆಗೆ ಏಳುವವನು ಅಪರೋಪವಾಗಿ ಒಂದು ದಿನ ಬೇಗ ಎದ್ದರೆ, ಅದೇ ದೊಡ್ಡ ಸುದ್ದಿ. ಅಕ್ಕಪಕ್ಕದಲ್ಲಿದ್ದವರಿಗೆ, ನೆಂಟರಿಗೆ ಸಂತೋಷದಿಂದ ಹೇಳ್ಕೋತಾರೆ "ರೀ ಇವತ್ತು ನನ್ನ ಮಗ ಬೆಳಗ್ಗೆ ೫ ಗಂಟೆಗೇ ಎದ್ದ ಗೊತ್ತಾ?".

ರೋಡಿನಲ್ಲಿ ಪ್ರಯಾಣಿಸುವಾಗ ಒಬ್ಬ ಆಕ್ಸಿಡೆಂಟ್ ಆಗಿ ಮೃತಪಡುತ್ತಾನೆ. ಅದನ್ನು ಕೇಳಿ, "ಅದೇನು ಮಹಾ. ದಿನಾ ಆಗ್ತಾನೆ ಇರತ್ತೆ ಮರಣಗಳು". ಪ್ರತೀ ದಿನ ಆಕ್ಸಿಡೆಂಟ್ ಆದರೂ, ಒಂದು ಮರಣವನ್ನು ಅಷ್ಟು ಸಾಧಾರಣಾವಾಗಿ ಕಾಣಬಹುದೇ?

ಹೀಗೇ, "ಆಯುಧಪೂಜೆಗೆ ಅವನ ಬೈಕನ್ನು ಅವನೇ ತೊಳೆದನಂತೆ", "ಆಫೀಸಿಗೆ ಊಟ ಮನೆಯಿಂದಲೇ ತೆಗೆದುಕೊಂಡು ಹೋಗ್ತಾನೆ. ಹೊರಗಡೆ ಹೋಟೆಲ್ನಲ್ಲಿ ತಿನ್ನಲ್ವಂತೆ", "ಅವನು ಕನ್ನಡದಲ್ಲೇ ಮಾತಾಡ್ತಾನೆ" .. ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. common sense is not common ಅನ್ನುವ ಹಾಗೆ, ಯಾವುದು ಸಹಜವಾಗಿ ನಡಿಯಬೇಕೋ, ಅದೇ ಅಪರೂಪದ ವಿಷಯಗಳು. ಇದೆಲ್ಲ ಮನುಷ್ಯ ಅಷ್ಟು ಸ್ವಾರ್ಥಿ ಆಗಿರುವುದಿಂದಲೋ, ಪಾಷ್ಚಾತ್ಯ ಸಂಸ್ಕೃತಿ ನಮ್ಮನ್ನು ಹೇಗೆ ಮಾಡಿದೆಯೋ ಅಥವಾ ನಮ್ಮ ನಿರ್ದಿಷ್ಟಮಾನವೇ ಇಳಿದಿದೆಯೋ ತಿಳಿಯುತ್ತಿಲ್ಲ.

Wednesday, September 16, 2009

ಮತ್ತೆ ಬಂದ ಗೋಪಿಯ ಕಂದ


ಮೊನ್ನೆ ಶನಿವಾರ ಕೃಷ್ಣ ಮತ್ತೆ ಮನೆಗೆ ಬಂದಿದ್ದ (ದಿನಾಗ್ಲು ಮನೇಲೇ ಇರ್ತಾನೆ. ಆದರೆ ಅವನು ಇದ್ದ ಗುರುತು ಮಾತ್ರ ವರುಷಕ್ಕೆ ಒಂದೇ ಸಲ). ಪುಟ್ಟ ಪುಟ್ಟ ಹೆಜ್ಜೆ ಹಾಕೊಂಡು, ಮಂಟಪದ ಮೇಲೆ ಏರಿ ಕೂತೇಬಿಟ್ಟ. ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ಏನೋ ಒಂತರಾ ಕುಶಿ. ಕೃಷ್ಣನಿಗೆ ಮಾಡುವ ತಿಂಡಿತಿನಿಸುಗಳು ಇನ್ಯಾರಿಗೂ ಮಾಡುವುದೇ ಇಲ್ಲ. ಅದೇನು ಮೋಡಿ ಮಾಡಿದಾನೋ ಅವನು. ಆದರೂ ಪರವಾಗಿಲ್ಲ. ಅವನ ಹೆಸರಿನಲ್ಲಿ ನಮಗೂ ತಿಂಡಿ ಸಿಗತ್ತೆ. ಅದೂ ಒಂದಾ ಎರಡಾ, ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟು, ಬರ್ಫಿಗಳು, ಉಂಡೆಗಳು ಅಂತ ಸುಮಾರು ೧೫-೨೦ ಬಗೆಬಗೆಯ ತಿಂಡಿಗಳು ಮಾಡ್ತೀವಿ ನಮ್ಮಲ್ಲಿ. ಹೊಟ್ಟೆ ಗತಿ ಏನು ಅಂತ ಮಾತ್ರ ಕೇಳಬೇಡಿ.

ಕುಶಿ ಪಡಲು ಮತ್ತೊಂದು ಕಾರಣ ಇದೆ. ಕೃಷ್ಣೆ ಬಂದಮೇಲೆ ಹರಿಶಿನ ಕುಂಕುಮ ನೆಪದಲ್ಲಿ ಗೋಪಿಕಾ ಸ್ತ್ರೀಯರೂ ಬರಬೇಕು ಅಲ್ವೇ? ಎಲ್ಲರೂ ಬಂದು ಕೃಷ್ಣನನ್ನು ನೋಡಿ ಹೋದರು. ಕೃಷ್ಣನ ಕೃಪೆಯಿಂದ ನಮಗೂ ಅವರ ದರ್ಶನದ ಭಾಗ್ಯ ಸಿಕ್ತು ;-)

ಕೃಷ್ಣನ ಕಾಲು ಗುರುತು ಹೀಗಿತ್ತು.


ಕೃಷ್ಣ ಮಂಟಪದಲ್ಲಿ ಹೀಗೆ ಕಾಣಿಸುತ್ತಿದ್ದ.


ಎಲ್ಲಾ ಸರಿ. ಆದ್ರೆ ಯಾಕೆ ಕೃಷ್ಣನಿಗೆ ಮಾತ್ರ ಈ ಸಡಗರ? ಪಾಪ ರಾಮ ಏನು ಪಾಪ ಮಾಡಿದ್ದ? ಕೃಶ್ಣಾನೋ ಒಬ್ಬ ಗೊಲ್ಲ. ಅವನಿಗೆ ಇಷ್ಟೊಂದು ತಿಂಡಿಗಳು, ಮಂಟಪ, ರಾತ್ರಿ ನಿದ್ದೆ ಕೆಟ್ಟು ಇವನಿಗೆ ಪೂಜೆ. ಆದ್ರೆ ರಾಮ ಒಬ್ಬ ರಾಜ. ಅವನಿಗೆ ಇನ್ನಷ್ಟು ಸಡಗರ ಆಗಿರಬೇಕಲ್ಲವೇ? ಊಹು, ಬರಿ ಒಂದಿಷ್ಟು ಕೋಸಂಬರಿ ಪಾನಕ.

ರಾಜನಾದರೂ ರಾಮ ಕಾಡಿಗೆ ಹೋಗಬೇಕಾಯಿತು. ಹೆಂಡತಿಯಿಂದ ದೂರ ಇರಬೇಕಾಯಿತು. ಕೃಷ್ಣ ರಾಜಾನೂ ಅಲ್ಲ, ಮಂತ್ರಿನೂ ಅಲ್ಲ. ಆದರೂ ಗೋಕುಲದಲ್ಲಿ ಅವನೇ ರಾಜನ ಹಾಗೆ ಇದ್ದ. ಮಥುರಾಗೆ ಬಂದಮೇಲೂ ಅಷ್ಟೇ. ಒಂದಲ್ಲ ಎರಡಲ್ಲ ೧೬೦೦೦ ಹೆಂಡತಿಯರು.

ಈಗ ನೀವೇ ಹೇಳಿ, ನೀವು ಸಿಂಹಾಸನದ ಮೇಲೆ ಕೂತು ರಾಮನ ಹಾಗೆ ಆಗಬೇಕೋ ಅಥವಾ ಒಬ್ಬ ಸಾಮಾನ್ಯ ಮನುಷ್ಯನಾಗಿ ಕೃಷ್ಣನ ಹಾಗೆ ಆಗಬೇಕೋ? ಈ ರಾಜಕಾರಿಣಿಗಳು ಯಾಕೆ ಪದವಿ ಪದವಿ ಅಂತ ಸಾಯ್ತಾರೋ. ರಾಮ ಕೃಷ್ಣರನ್ನ ನೋಡಿ ಕಲ್ತ್ಗೋಬಾರ್ದೇ.

Monday, August 31, 2009

ಚಾತುರ್ಮಾಸ

ಚಾತುರ್ಮಾಸ ಬಂದರೆ ಸಾಕು, ಹಬ್ಬ ಹರಿದಿನಗಳು ಶುರು, ಮುಹೂರ್ತಗಳು ಹೆಚ್ಚು, ಎಲ್ಲೆಲ್ಲೂ ಸಡಗರವೆ. ಅದಕ್ಕೆ ಜೋಡಿಸಿಕೊಂಡು, ನನಗೆ ಆಫೀಸಿನಲ್ಲಿ ಕೆಲಸವೂ ಹೆಚ್ಚು. ಇನ್ನು ಪಿತೃ ಪಕ್ಷ ಬಂದರೆ ಕೇಳುವುದೇ ಬೇಡ. ಇರುವವರನ್ನು ಬಿಟ್ಟು ಇಲ್ಲದಿರುವವರನ್ನು ನೆನೆಸುವುದೇ ಈ ಪಕ್ಷದ ಮಹಿಮೆ. ಅದು ಮಾಡಬಾರದು, ಇದು ಮಾಡಬಾರದು ಎಂಬ ನಿರ್ಬಂಧ ಬೇರೆ. ಪಕ್ಷದಲ್ಲಿ ಅಪ್ಪನಿಗೆ ದಿನವೂ ಫಲಹಾರ ಆಗಬೇಕು. ಒಂದೇ ವೇಳೆ ಊಟ. ಅದರಲ್ಲೂ ಕೆಲವೊಂದು ತರಕಾರಿಗಳು ಉಪಯೋಗಿಸುವಹಾಗಿಲ್ಲ. ಅಯ್ಯೋ ಯಾವಾಗಾದ್ರೂ ಮುಗಿಯತ್ತೋ ಈ ಪಕ್ಷ ಅಂತ ಅಮ್ಮ ಕಾಯ್ತಿರ್ತಾರೆ.


ಈ ಚಾತುರ್ಮಾಸದಲ್ಲಿ ನಮ್ಮ ಮಠದ ಸ್ವಾಮಿಗಳು ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಮಠಗಳಲ್ಲಿ ಒಂದು ನಿಯಮ ಇದೆ. ಸನ್ಯಾಸಿಗಳು ಚಾತುರ್ಮಾಸದಲ್ಲಿ ಪ್ರಯಾಣ ಮಾಡಬಾರದು. ಚಾತುರ್ಮಾಸದ ೨ ತಿಂಗಳ ಅವಧಿಯಲ್ಲಿ ಒಂದೇ ಕಡೆಯಲ್ಲಿ ಇರಬೇಕು (ಚಾತುರ್ಮಾಸ ಅಂದ್ರೆ ೪ ತಿಂಗಳಲ್ವಾ ಅಂತ ಕೇಳಬೇಡಿ. ೪ ತಿಂಗಳು ಒಂದೇ ಕಡೆ ಇರಲು ಆಗದೆ ಇದ್ದಲ್ಲಿ, ೪ ಪಕ್ಷಗಳ ಕಾಲ ಚಾತುರ್ಮಾಸ ವ್ರತವನ್ನು ಅನುಷ್ಠಾನಗೊಳಿಸುತ್ತಾರೆ). ಸ್ವಾಮಿಗಳು ಇದಾರಲ್ಲ ಅಂತ ಆಗಾಗ ಮಠಕ್ಕೆ ಹೋಗಿಬರುತ್ತೇನೆ. ರಿಸಿಶನ್ ಟೈಮ್ ನೋಡಿ, ಇದನೆಲ್ಲ ಸ್ವಲ್ಪ ಹೆಚ್ಚು ಪಾಲಿಸಬೇಕು. ಸಂಕಟ ಬಂದಾಗ ವೆಂಕಟರಮಣ ಅಂತ ಕೇಳಿಲ್ವೇ?


ಸಾಮಾನ್ಯವಾಗಿ ತಿನ್ನುವ ವಿಚಾರದಲ್ಲಿ ನಾನು ಸ್ವಲ್ಪ choosy. ಕೆಲವೊಂದು ತರಕಾರಿಗಳನ್ನು ಬಿಟ್ಟರೆ ಬೇರೆ ಯಾವುದನ್ನು ಮುಟ್ಟುವುದಿಲ್ಲ. ತುಪ್ಪದಿಂದ ಮಾಡಿದ ಸಿಹಿ ಅಂದ್ರೆ ದೂರ ಓದ್ತೀನಿ. ಚಿಕ್ಕ ವಯಸ್ಸಿನಿಂದ ಅಭ್ಯಾಸವಾಗಿರುವುದರಿಂದ ಅಮ್ಮ ಮಾಡಿದ ಸಿಹಿಗಳು ಮಾತ್ರ ತಿಂತೀನಿ. ಆದ್ರೆ ಮಠಕ್ಕೆ ಹೋದಾಗೆಲ್ಲಾ ಅಲ್ಲೇ ಊಟ. ತುಪ್ಪ ಸೋರುತ್ತಿರುತ್ತದೆ. ಆದರೂ ಬೇಸರವಿಲ್ಲದೆ ಅಲ್ಲಿ ಮಾಡಿದ ಊಟ ಮಾತ್ರ ಹೊಟ್ಟೆ ಸೇರುತ್ತದೆ. ಹೇಗೆ ಅಂತ ನನಗೂ ತಿಳಿಯದ ವಿಷಯ. ಮೊನ್ನೆ ಮಠದಲ್ಲಿ ಊಟ ಹೀಗಿತ್ತು - ಅನ್ನ, ಸೌತೆಕಾಯಿ ಕೂಟು, ಸೀ ಕುಂಬಳಕಾಯಿ ಹುಳಿ, ಸುವರ್ಣಗೆಡ್ಡೆ ಪಲ್ಯ, ಮೆಣಸಿನ ಸಾರು, ಸಜ್ಜಪ್ಪ, ಮೊಸರು. ಇದರಲ್ಲಿ ಸಾಮಾನ್ಯವಾಗಿ ಮೆಣಸಿನ ಸಾರು, ಮೊಸರು ಬಿಟ್ಟರೆ ಯಾವುದೂ ಹಿಡಿಸುವುದಿಲ್ಲ. ಆದರೆ ಮಠದಲ್ಲಿ ಎಲ್ಲವೂ ರುಚಿಯೇ. ಎಲೆಯಲ್ಲಿ ಸ್ವಲ್ಪವೂ ಮಿಗಿಸದೆ, ತಿಂದಿದ್ದೆ. ಮಠದಲ್ಲಿ ತಿಳಿದವರು ಒಬ್ಬರು, ಸ್ವಲ್ಪ ಸಜ್ಜಪ್ಪವನ್ನು ಮನೆಗೂ ಪಾರ್ಸೆಲ್ ಮಾಡಿಕೊಟ್ಟರು. ಆದರೆ, ಮನೆಯಲ್ಲಿ ಅದು ಬೇಡವಾಗಿಹೋಯಿತು. ಏನು ವಿಚಿತ್ರ ಅಲ್ವ?


ಇನ್ನು ಈ ಸಲದ ಚಾತುರ್ಮಾಸ ನನಗೆ ಇನ್ನೂ ಸ್ಪೆಷಲ್. ಅಪ್ಪನಿಗೆ ೬೦ ವರುಷ ತುಂಬಿತು. ೨ ದಿನ ಆಫೀಸಿಗೆ ಚಕ್ಕರ್ ಹೊಡ್ದು, ಅಪ್ಪ ಅಮ್ಮನಿಗೆ ಮತ್ತೊಮ್ಮೆ ಮದುವೆ ಮಾಡಿಸಿಯಾಯಿತು. ಅವರ ಮೊದಲನೇ ಮದುವೆ ನಾನು ನೋಡಿರ್ಲಿಲ್ವಲ್ಲ ಅದಕ್ಕೆ ;-)


೪ ದಿನ ಆದ್ಮೇಲೆ ಆಫೀಸಿಗೆ ಬಂದಿದೀನಿ ಇವತ್ತು. ಪ್ರತೀ ಸೋಮವಾರ ಇರುವ ಮಂಡೆ ಬ್ಲೂಸ್ ಜೊತೆಗೆ, ೪ ದಿನಗಳಿಂದ ಬರದ ಕಾರಣದಿಂದ ಕೆಲಸದ ದಿನಚರಿಗೆ ಮನಸ್ಸು ಇನ್ನೂ ಒಗ್ಗಿಲ್ಲ. ಅದಕ್ಕೇ ಇದನ್ನ ಬರಿತಾ ಇದ್ದೀನಿ.

Thursday, August 13, 2009

ಬಾಳಿಗೊಂದು ನಂಬಿಕೆ



ಮೊನ್ನೆ ಭಾನುವಾರ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಅದರ ಹಿಂದಿನ ದಿನ ನಾನು ತರಕಾರಿ ಮಾತು ಇನ್ನಿತರ ಸಾಮಾನು ತರಲು ಮಾರುಕಟ್ಟೆಗೆ ಹೋದೆ. ನಾಲ್ಕೈದು ಅಂಗಡಿಗಳಿಗೆ ಬೇಟಿ ಕೊಟ್ಟು ಚೌಕಾಸಿ ಮಾಡಿ ತರಕಾರಿ ಕೊಂಡಾಯಿತು. ಚೀಲವನ್ನು ಅಲ್ಲೇ ಒಂದು ಅಂಗಡಿಯಲ್ಲಿ ಇಟ್ಟು, ಅಡಿಕೆ ಪಟ್ಟೆಗಳನ್ನು (ಅಡಿಕೆ ಎಲೆಗಳಿಂದ ಮಾಡಿದ ತಟ್ಟೆ) ಕೊಂಡುಕೊಳ್ಳಲು ಹೋದೆ.

ಆ ಅಂಗಡಿಯಲ್ಲಿ ಇದ್ದಿದ್ದು ಒಬ್ಬಳು ಮಹಿಳೆ, ಸುಮಾರು ೨೫-೨೬ ವರ್ಷ ಇರಬಹುದೇನೋ. ಕೈಯಲ್ಲಿ ಸುಮಾರು ಒಂದು ವರುಷದ ಮಗು, ಕಾಲ ಬುಡದ ಹತ್ತಿರ ಮತ್ತೊಂದು ಮಗು, ಸುಮಾರು ೩ ವರುಷ ವಯಸ್ಸಿನ ಹುಡುಗಿ. ಅಂಗಡಿಯಲ್ಲಿ ಬೇರೆ ಯಾರು ಇರಲಿಲ್ಲ. ಅಂಗಡಿಯ ಜವಾಬ್ದಾರಿಯೆಲ್ಲವೂ ಆಕೆಗೇ. ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾಳೆ ಭೇಷ್ ಅನಿಸಿತು.
ಅಡಿಕೆ ಪಟ್ಟೆಗಳನ್ನು ನೋಡಿ, ಬೆಲೆ ವಿಚಾರಿಸಿ, ದೊಡ್ಡ ಗಾತ್ರದ ಪಟ್ಟೆಗಳನ್ನು ಕೊಂಡುಕೊಳ್ಳುವೆ, ೨೦೦ ಪಟ್ಟೆಗಳು ಬೇಕು ಎಂದೆ.
"ಬ್ಯಾಗ್ ಇದೆಯಾ ಅಣ್ಣ?" ಎಂದಳು.
"ಇಲ್ಲ ೨೦೦ ಪಟ್ತೆಗಳಿಗೆ ಬಾಗ್ ಸಾಕಾಗುವುದಿಲ್ಲ. ಒಂದು ಗೋಣಿಚೀಲದಲ್ಲಿ ಹಾಕಿ ಕೊಡು."
"ಸೆರಿ ಅಣ್ಣ."

ಪಟ್ಟೆಗಳು ಇಟ್ಟಿದ್ದ ಸ್ಥಳ ನನಗೆ ಕಾಣಿಸುತ್ತಿರಲಿಲ್ಲ. ಒಂದು ಪರದೆ ಅಡ್ಡ ಇತ್ತು. ಒಂದು ಪಟ್ಟೆಯ ಗಂಟನ್ನು ತೋರಿಸಿ, ಆ ತರಹದ ಪಟ್ಟೆಗಳನ್ನು ಹಾಕು ಎಂದು ಹೇಳಿದೆ. ಒಂದು ಗೋಣಿಚೀಲದಲ್ಲಿ ಹಾಕಿ ಚೀಲದ ಬಾಯನ್ನು ಕಟ್ಟುತ್ತಿದ್ದಾಗ -

"ಏನಮ್ಮ ಇದರಲ್ಲಿ ೨೦೦ ಪಟ್ಟೆಗಳು ಇದೆಯಾ?" ಎಂದು ಕೇಳಿದೆ.
"ಹು ಅಣ್ಣ. ನೀವೇ ಒಂದು ಸಲ ನೋಡ್ಬಿಡಿ ಬೇಕಿದ್ದರೆ."
"ಪರವಾಗಿಲ್ಲ ಬಿಡು. ನಿನ್ನನ್ನ ನಂಬ್ತೀನಿ."

ಎಲ್ಲವನ್ನೂ ಕೊಂಡು, ಚೀಲವನ್ನು ನನ್ನ ಬೈಕಿನ ಹಿಂಬಾಗಕ್ಕೆ ಕಟ್ಟಿ, ಮನೆಗೆ ಬಂದದ್ದೇ ಒಂದು ಸಾಹಸ. ಸ್ವಲ್ಪ ಹೊತ್ತು ನಂತರ, ಚೀಲವನ್ನು ಬಿಚ್ಚಿ ಅಡಿಕೆ ಪಟ್ಟೆಗಳನ್ನು ತೆಗೆದಾಗ, ನನಗೆ ಎಲ್ಲಿಲ್ಲದ ಕೋಪ. ದೊಡ್ಡ ಗಾತ್ರದ ೨೦೦ ಪಟ್ಟೆಗಳನ್ನು ಕೇಳಿದರೆ, ಅಲ್ಲಿ ಇದ್ದದ್ದು ೯೦ ದೊಡ್ಡ ಗಾತ್ರದ ಮತ್ತು ೭೫ ಸ್ವಲ್ಪ ಚಿಕ್ಕದಾದ ಪಟ್ಟೆಗಳು. ಈ ಲೋಕದಲ್ಲಿ ನಂಬಿಕೆಗೆ ಬೆಲೆಯೇ ಇಲ್ಲವೇ? ಸೆರಿ, ಇನ್ನೇನು ಮಾಡುವುದು, ನನ್ನ ಹಣೆಯಲ್ಲಿ ಇವತ್ತು ಮೋಸಹೊಗಬೇಕು ಎಂದು ಬರೆದಿದೆ ಅಷ್ಟೆ. ನಾನೇ ಎಣಿಸಿ ತರಬೇಕಿತ್ತು. ಸುಮ್ಮನಾಗಿಬಿಡೋಣ ಎಂದು ನಿಶ್ಚಯ ಮಾಡಿದ್ದೆ. ನಾಳೆ ಯಾವತ್ತಾದ್ರು, ನೀನು ಮೋಸ ಹೋಗಿ ಅದನ್ನು ಪ್ರಶ್ನಿಸಲಿಲ್ಲ ಎಂದು ವಿಷಾದ ಉಂಟಾದರೆ? ಅಂಗಡಿಗೆ ಹೋಗಿ ಒಂದು ಸಲ ಕೇಳಿಯೇ ಬಿಡೋಣ. ಅವಳು ಒಪ್ಪಿದರೆ ಸೆರಿ, ಇಲ್ಲದಿದ್ದರೆ ಅವಳಿಗೆ ಒಳ್ಳೆಯದನ್ನೇ ಹರಸಿ ಮರಲಿಬಿಡೋಣ ಎಂದು ಚಿಕ್ಕ ಗಾತ್ರದ ಪಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ ಹೊರಟೇಬಿಟ್ಟೆ.

"ಏನಮ್ಮ, ನಾನು ಬೆಳಗ್ಗೆ ಬಂದು ೨೦೦ ಪಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಜ್ಞಾಪಕ ಇದಿಯಾ?"
"ಹು ಅಣ್ಣ."
"ನೀನು ಎಷ್ಟು ಕೊಟ್ಟೆ?""ಯಾಕಣ್ಣ, ಕಮ್ಮಿ ಇತ್ತಾ?"
ತಂದಿದ್ದ ಸಣ್ಣ ಗಾತ್ರದ ಪಟ್ಟೆಗಳನ್ನು ತೋರಿಸಿ, "ಈ ಸಿಜಿನದು ೭೫ ಕೊಟ್ಟಿದ್ದೀಯ. ನಾನು ಕೇಳಿದ ಗಾತ್ರದಲ್ಲಿ ೯೦ ಮನೇಲಿ ಇದೆ. ಹೀಗಾ ಮೋಸ ಮಾಡೋದು ನೀನು?"
"ಇಲ್ಲ ಅಣ್ಣ. ಗೊತ್ತಾಗ್ಲಿಲ್ಲ. ಮೋಸ ಮಾಡಿಲ್ಲಣ್ಣ. ಇನ್ನು ಎಷ್ಟು ಕೊಡಬೇಕು ಅಂತ ಹೇಳಿ, ಕೊಡ್ತೀನಿ."

"ಈ ಪಟ್ಟೆಗಳನ್ನು. ನೀನೆ ಇಟ್ಕೋ. ನನಗೆ ದೊಡ್ಡ ಪಟ್ಟೆಗಳೇ ಬೇಕು. ಇದು ನನಗೆ ಉಪಯೋಗ ಆಗೋಲ್ಲ. ಮನೇಲಿ ೯೦ ಇದೆ. ಇನ್ನು ೧೧೦ ಕೊಡಬೇಕು."

"ಆಯ್ತು ಅಣ್ಣ. ಪಕ್ಕದ ಅಂಗಡಿಯಿಂದ ತೊಗೊಂದ್ಬರ್ತೀನಿ. ನನ್ನ ಹತ್ರ ದೊಡ್ದಿಲ್ಲ."
"ಅದನ್ನ ಬೆಳಗ್ಗೆಯೇ ಹೇಳಬಹುದಿತ್ತಲ್ವಾ. ನಾನೇ ಪಕ್ಕದ ಅಂಗಡಿಯಿಂದ ತೊಗೊತಿದ್ದೆ."
"ಇದು ಚಿಕ್ಕದು ಅಂತ ಗೊತ್ತಾಗ್ಲಿಲ್ಲ ಅಣ್ಣ."
"ಸೆರಿ. ತೊಗೊಂಡ್ಬಾ. ಇನ್ನು ನೂರು ಕೊಡು ಸಾಕು. ೧೦ ಕಡಿಮೆ ಆದರೂ ಪರವಾಗಿಲ್ಲ."

ಪಕ್ಕದ ಅಂಗಡಿಯಿಂದ ತೊಗೊದ್ಬಂದು, "ನೀವೇ ಎಣ್ಸಿ ಅಣ್ಣ. ನನಗೆ ಅಷ್ಟೊಂದು ಎಣ್ಸಕ್ಕೆ ಬರೋಲ್ಲ."ನಾನೇ ಎಣ್ಸಿ ೧೦೦ ಪಟ್ಟೆಗಳನ್ನ ಮನೆಗೆ ತೊಗೊಂದ್ಬಂದೆ.

ಆಗ ನನಗೆ ಅನಿಸಿತು, ಈ ಲೋಕದಲ್ಲಿ ನಂಬಿಕೆಗೆ ಇನ್ನು ಬೆಲೆ ಇದೆ ಎಂದು. ಎಷ್ಟು ಸಣ್ಣ ವಿಷಯ ಅಲ್ವ ಇದು. ಪಾಪ ಅವಳಿಗೆ ಎಣಿಸುವುದು ಬರೋಲ್ಲ. ನಿಜವಾಗಲೂ ಮೋಸ ಮಾಡ್ಬೇಕು ಅಂತ ಇದ್ದಿದ್ದರೆ, ನನ್ನನ್ನ ನಂಬುವ ಅವಶ್ಯಕತೆಯೇ ಇರಲಿಲ್ಲ. ಅನಾವಶ್ಯಕವಾಗಿ, ಅವಳ ಬಗ್ಗೆ ತಪ್ಪು ತಿಳಿದಿದ್ದೆ. ಹೋಗಿ ವಿಚಾರಿಸಿದ್ದು ಒಳ್ಳೆಯದೇ ಆಯಿತು. ಹೀಗೇ ಜೀವನದಲ್ಲಿ ಪರಸ್ಪರ ನಂಬಿಕೆಯಿಲ್ಲದೆ, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿಸಿ, ದ್ವೇಷ, ಅಸೂಯೆಗಳಿಗೆ ಎಲೆ ಹಾಕುವೆವು, ಆಲ್ವಾ?

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ
ನರಳುವುದು ಬದುಕೇನೋ? ಮಂಕುತಿಮ್ಮಾ

ಶ್ರೀ ರಾಮ ಪಟ್ಟಾಭಿಷೇಕ ಸುಸೂತ್ರದಿಂದ ಮುಗಿಯುತ್ತಲೇ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹರಡಿದೆ.
ಸರ್ವಂ ಶ್ರೀ ಕ್ರಿಶ್ಣಾರ್ಪಣಮಸ್ತು.

Monday, August 3, 2009

ಸಂಡಾಸಿನಲ್ಲೂ ಗೊಣಗಾಟ


ಇತ್ತೀಚಿಗೆ ನಮ್ಮ ವಿಜಯ ಕರ್ನಾಟಕದಲ್ಲಿ ಬರುವ "ಕಾಲ್ ವೈಟಿಂಗ್" ಲೇಖನ ಓದುತ್ತಿದ್ದರೆ, ಹಲವಾರು ವರುಷದ ಹಿಂದೆ ನನಗೆ ಅನಿಸಿದ ಭಾವನೆಗಳನ್ನು ಹೇಳಿದಂತಿದೆ. ಈ ಮೊಬೈಲ್ ಫೋನ್ ಎಂಬ ವಸ್ತು ಯಾಕಪ್ಪಾ ಕಂಡುಹಿಡಿದರು ಅಂತ ಕೇಳ್ತಿದ್ದೆ.

ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಲ್ಲಿ ಮೊಬೈಲ್ ಫೋನ್ ಇರುತ್ತದೆ. ಅದು ಸೇರಿಯೂ ತಪ್ಪೋ ಎಂಬುದೇ ದೊಡ್ಡ ಚರ್ಚೆ. ಶಾಲೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದು ನಿರಾಕರಿಸಿದರೂ, ಹೊರಗೆ ಮಕ್ಕಳಲ್ಲಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಪಾಪ ಮಕ್ಕಳು ಅಷ್ಟು ಹಠ ಹಿಡಿದರೆ ತಂದೆ ತಾಯಂದಿರು ಏನು ತಾನೇ ಮಾಡಬಲ್ಲರು.

ನಾನು ಓದಬೇಕಾದರೆ, ನನಗೆ ಈ ಮೊಬೈಲ್ ಫೋನ್ ಎಂಬ ಮಾಯಾ ಯಂತ್ರ ಇದೆ ಎಂದೇ ತಿಳಿದಿರಲಿಲ್ಲ. ಗೊತ್ತಿದ್ದರೆ ನಾನು ಹಠ ಹಿಡಿದು ದಕ್ಕಿಸಿಕೊಳ್ಳುತ್ತಿದ್ದೇನೋ ಏನೋ. ಬರಿ ಬಿಸಿನೆಸ್ ಮಾನ್ಗಳು ಉಪಯೋಗಿಸುವ ವಸ್ತು ಎಂದೇ ನಂಬಿದ್ದೆ. ಶಾಲೆ ಮುಗಿದು ಕಾಲೇಜ್ ಮೆಟ್ಟಲು ಹತ್ತಿದಾಗಲೂ ಇದು ನನಗೆ ತಿಳಿಯಲಿಲ್ಲ. ಅಷ್ಟು ಪೆದ್ದನಾಗಿದ್ದೆ ನಾನು. ಇಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದಾಗಲೂ ಈ ವಿಷಯ ನನಗೆ ಅರಿವಾಗಲಿಲ್ಲ. ಕೆಲ್ಸಕ್ಕೆ ಸೇರಿ ೬ ವರುಷ ತುಂಬಿದರೂ ನನ್ನ ಹತ್ತಿರ ಈ ಮಾಯಾ ಯಂತ್ರ ಇಲ್ಲದಿದ್ದು ನೋಡಿ ಹಾಸ್ಯ ಮಾಡಿದ್ದು ಅದೆಷ್ಟು ಜನ? ಆದರೂ ನಾನು ಬಗ್ಗಲಿಲ್ಲ. ಜನರು ಇದರ ಜೊತೆ ಸರಸವಾಡುತ್ತಿದ್ದ ರೀತಿ ನೋಡಿ ನನಗೆ ಇದನ್ನು ಕೊಳ್ಳಲೇಬಾರದೆಂದು ತೀರ್ಮಾನಿಸಿದ್ದೆ. ಎಲ್ಲಿ ಹೋದರೂ ಬಿಡದ ಈ ವಸ್ತು, ಟಾಯಿಲೆಟ್ಗೆ ಹೋದರೂ ಬಿಡುವುದಿಲ್ಲ. ಕಮೋಡ್ ಮೇಲೇ ಕೂತು ಘಂಟಘಟ್ಟಲೆ ಹರಟೆ ಹೊಡೆಯುತ್ತಾರೆ. ಯಾಕಪ್ಪಾ ಬೇಕು ಈ ಪಝೀತಿ ಅಂತಿದ್ದೆ.

ಕೊನೆಗೆ ಒಂದು ವರುಷದ ಕೆಳಗೆ ಯಾವುದೂ ಕೆಲಸದ ವಿಚಾರವಾಗಿ ಒಂದು ಮೊಬೈಲ್ ಫೋನು ಕೊಳ್ಳಬೇಕಾಯಿತು. ಈಗ ಆ ಕೆಲಸ ಮುಗಿದಿದೆ ಆದರೆ ಮೊಬೈಲ್ ಫೋನು ಇನ್ನು ತೊಲಗಿಲ್ಲ. ಸಮಯಕ್ಕೆ ಉಪಯೋಗ ಬಂದರೂ, ಇದೊಂತರಾ ಬಿಸಿ ತುಪ್ಪ ಇದ್ದಹಾಗೆ.

ಬಹಳ ಹಿಂದೆ ನನ್ನ ಆತ್ಮೀಯರಾದ ನರಸಿಂಹ ಮೂರ್ತಿಯವರು, ಮೊಬೈಲ್ ಫೋನ್ ಕುರಿತು ಬರೆದ ಒಂದು ಪದ್ಯ ಹೀಗಿದೆ.

ಒಳಕರೆಯ ಕೆರೆತ, ಕೆರೆದರೆ ನೆವೆ ಹೆಚ್ಚು
ಮಾತಿನ ಅಕ್ಕಿಯ ಮೇಲಿನ ಆಸೆ
ಮುದ್ದುಮಣಿಯ ಮುದ್ದಾಡಲು ಕಳ್ಳರ ಕಾಟ
ನಲ್ಲೆಯ ಇಂಚರ ಎದೆಯ ಡಮರು ನಾದ
ಅಧಿಕಾರಿಯ ಕರೆ ಅಡಕತ್ತರಿಯ ಅಡಿಕೆ
ಸಂಡಾಸಿನಲ್ಲೂ ಗೊಣಗಾಟ.

ನೀವೇ ಹೇಳಿ. ಇದು ಬೇಕೆ?