Thursday, January 28, 2010

ಯಾಮಿನಿ - ೨೦೧೦ (ಭಾಗ -೧)


ಈ ಸಲ ಚೆಳಿ ಸ್ವಲ್ಪ ಹೆಚ್ಚು ಅನ್ಸತ್ತೆ. ಆಫೀಸಿಂದ ಬೈಕ್ನಲ್ಲಿ ಬರೋವಾಗ ಮನೆ ತಲುಪಿದರೆ ಸಾಕು ಅನ್ನುವಷ್ಟು ಮೈ ಕೊರಿತಿರತ್ತೆ. ಸಂಜೆ ೭:೦೦ ಗಂಟೆಗೇ ಈ ಪರಿಸ್ಥಿತಿ ಆದ್ರೆ, ಇನ್ನು ರಾತ್ರಿ ಹೊತ್ತಿನಲ್ಲಿ ಇನ್ಹೇಗಿರತ್ತೋ ನಾ ಕಾಣೆ. ರಾತ್ರಿ ಹೊತ್ತು ಹೊರಗೆ ಇದ್ದು, ಈ ಮಂಜಿನ ಜೊತೆ ಸರಸ ಆಡ್ತಾ ಇರೋ ಮಜ ಅನುಭವಿಸಿದವರಿಗೇ ಗೊತ್ತು. ಈ ಅನುಭವವನ್ನು ಮೊನ್ನೆ ಪುನಃ ಪಡೆಯಲು ಅವಕಾಶ ಮಾಡಿಕೊಟ್ಟದ್ದು ಯಾಮಿನಿ - ೨೦೧೦. ಐಐಎಮ್-ಬಿ ವತಿಯಿಂದ ಪ್ರತಿ ವರುಷ ಯಾಮಿನಿ ಎಂಬ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ http://www.iimb-yamini.com/ ನೋಡಿ. ಯಾಮಿನಿಯ ವಿಷೇಶ ಅಂದ್ರೆ ಸಂಜೆ ೬:೩೦ಗೆ ಪ್ರಾರಂಭವಾಗುವ ಸಂಗೀತ ಕಾರ್ಯಕ್ರಮ, ಇಡೀ ರಾತ್ರಿ ಜಾರಿಯಲ್ಲಿದ್ದು, ಮರುದಿನ ಬೆಳಗ್ಗೆ ೬:೦೦ಗೆ ಮುಕ್ತಾಯವಾಗುತ್ತದೆ. ಈ ಸಲ ನನಗೆ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಒದಗಿ ಬಂದಿತು.

೨೫ನೇ ತಾರೀಕು ಸಂಜೆ ಹೊರಡಬೇಕು. ಮರುದಿನ ಗಣರಾಜ್ಯೋತ್ಸವವಿದ್ದರಿಂದ ಕಚೇರಿಗೆ ರಜ. ಕಚೇರಿಯಿಂದ ಬೇಗ ಮನೆಗೆ ಬಂದು ಹೊರಡಲು ಸಿದ್ದವಾದೆ. ಮುರಳಿ, ನವೀನ ನನ್ನ ಜೊತೆ ಕೈ ಜೋಡಿಸಿದರು. ಮೂರೂ ಜನ ಎರಡು ವಾಹನಗಳಲ್ಲಿ ಐಐಎಮ್-ಬಿ ಸೇರುವ ಹೊತ್ತಿಗೆ ಸುಮಾರು ೭:೦೦ ಗಂಟೆ ಆಗಿತ್ತು. ನಮ್ಮ ಪುಣ್ಯ, ಕಾರ್ಯಕ್ರಮ ಇನ್ನೂ ಪ್ರಾರಂಬವಾಗಿರಲಿಲ್ಲ. ವೇದಿಕೆಯ ಸಮೀಪದಲ್ಲಿ, ಮೆತ್ತಗಿನ ಹಾಸಿಗೆಗಳನ್ನು ಹಾಸಿದ್ದರು. ಸುಮಾರು ೫೦೦ ಜನ ಸುಲಲಿತವಾಗಿ ಕೂರಬಲ್ಲಷ್ಟು ಜಾಗದಲ್ಲಿ ಹಾಸಿಗೆಗಳನ್ನು ಹಾಸಿದ್ದರು. ಅದರ ಸುತ್ತಲೂ ಇನ್ನೂ ಸುಮಾರು ೫೦೦ ಜನ ಕೂರಬಹುದಾದಷ್ಟು ಕುರ್ಚಿಗಳನ್ನು ಹಾಕಿದ್ದರು. ಚೆಳಿಗೆ ಮೈ ಬಿಸಿಮಾಡಿಕೊಳ್ಳಲು, ಅಲ್ಲಲ್ಲಿ ಬೆಂಕಿಯನ್ನು (ಕಾಂಪ್ ಫೈರ್) ಹಾಕಿದ್ದರು. ಒಟ್ಟಿನಲ್ಲಿ "Holiday mood at its best" ಎಂದು ಅನಿಸಿತು.

ಕಾರ್ಯಕ್ರಮ ನಿತ್ಯಶ್ರೀ ಮಹದೇವನ್ರವರ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಿಂದ ಪ್ರಾರಂಭವಾಯಿತು. ಇವರ ಇತರ ಕಚೇರಿಗಳನ್ನು ಮುಂಚೆಯೇ ಕೇಳಿದ್ದರಿಂದ ಇವರ ಪ್ರತಿಭೆಯ ಅರಿವು ನನಗಿತ್ತು. ಅವರ ಆಲಾಪನ ಶೈಲಿ, ಸ್ವರಕಲ್ಪನೆಗಳ ವೈವಿಧ್ಯತೆಗಳಿಂದ ಜನರನ್ನು ಮೈಮರೆಸಿದರು. ಎರಡೂವರೆ ಗಂಟೆಗಳ ನಂತರ ತಿಲ್ಲಾನದಿಂದ ಅವರು ಮುಗಿಸಿದಾಗ, ಇನ್ನೂ ಸ್ವಲ್ಪ ಹೊತ್ತು ಹಾಡಬಾರದೆ ಎಂದನಿಸಿತು. ಚೆಳಿ, ಹಸಿವು ಯಾವುದೂ ಹತ್ತಿರ ಸುಳಿಯಲಿಲ್ಲ. ಅವರ ಕೆಲವು ಚಿತ್ರಗಳು (ದೂರದಿಂದ ತೆಗದಿದ್ದು) -












ನಿತ್ಯಶ್ರೀ ಅವರ ಗಾಯನ ಮುಗಿಯುವಷ್ಟರಲ್ಲಿ ಸುಮಾರು ೯:೩೦ ಆಗಿತ್ತು. ಅಷ್ಟು ಹೊತ್ತು ತಾಲ್ಮೆಯಿಂದ ಕೂತಿದ್ದ ಜನ, ತಕ್ಷಣ ಎದ್ದು ತಿಂಡಿಗಳ ಮಳಿಗೆಯ ದಿಕ್ಕಿನಲ್ಲಿ ಓಡಿದರು. ನಾವು ಸಮಾಧಾನವಾಗಿ ಎದ್ದು ಹೋಗುವಷ್ಟರಲ್ಲಿ, ಶ್ರೀ ಕೃಷ್ಣ ಭವನದ ಮಳಿಗೆಯಲ್ಲಿ ಜನಸಾಗರವೇ ಇತ್ತು. ಇನ್ನು ಆ ಸಾಲಲ್ಲೇ ಇದ್ದರೆ ಇವತ್ತು ಉಪವಾಸವೇ ಎಂದು, ಸಾಂಡ್ವಿಚ್ ಇಂದಲೇ ನಮ್ಮ ಹೊಟ್ಟೆ ತುಂಬಿಸಿಕೊಂಡೆವು. ಹೊಟ್ಟೆ ಪೂರ್ತಿ ತುಂಬದಿದ್ದರೂ ಜೇಬಿಗೆ ಮಜಬೂತಾದ ಕತ್ತರಿಯೇ ಬಿದ್ದಿತು :-(

ನಂತರದ ಸರದಿ ಪ್ರಸಿದ್ದ ವೀಣಾವಾದಕಿ ಗಾಯತ್ರಿಯವರದ್ದು. ಚಿಕ್ಕ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರೂ ನನಗೆ ರಾಗಗಳ ಜ್ಞಾನ ಕಡಿಮೆ. ರಾಗ, ತಾಳಗಳಿಗಿಂತ ಸಾಹಿತ್ಯದ ಭಾವ ಇಷ್ಟವಾಗುತ್ತದೆ. ಆದ್ದರಿಂದ ವಾದ್ಯಕ್ಕಿಂತ ಗಾಯನದಲ್ಲಿ ಹೆಚ್ಚು ಒಲವು. ಅಷ್ಟಾದರೂ ವೀಣಾವಾದ್ಯದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟು ಆಕರ್ಶಕ ವೀಣೆ ನುಡಿತವನ್ನು ನಾನು ಎಂದೂ ಕಂಡಿರಲಿಲ್ಲ. ಅದರಲ್ಲೂನಾರಾಯಣ ಸೂಕ್ತ ಸಾಲುಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳ ಒಳಗೊಂಡು ವೀಣೆಯಮೂಲಕ ಪಾರಾಯಣ ಮಾಡಿದ್ದು ವಿಶೇಷ. ಬಂದಿದ್ದಕ್ಕೂ, ನಿದ್ದೆಗೆಟ್ಟು ಕೂತಿದ್ದಕ್ಕೂ ಸಾರ್ಥಕ. ವೀಣೇ ಗಾಯತ್ರಿಯವರ ಚಿತ್ರಗಳು -













ಗಾಯತ್ರಿಯವರ ವೀಣಾವಾದನ ಮುಗಿದಾಗ ಮಧ್ಯರಾತ್ರಿ ೧೨:೦೦ ದಾಟಿತ್ತು. ಮುಂದಿನ ಕಾರ್ಯಕ್ರಮಕ್ಕೆ ಸಿದ್ದತೆಮಾಡಿಕೊಳ್ಳಲು ಸ್ವಲ್ಪ ಸಮಯ ವಿರಾಮ.

... (ಸಶೇಷ)

Monday, January 4, 2010

ಹತ್ತರ ಹೊತ್ತು



ಮತ್ತೊಂದು ಕಾಲ ಘಟ್ಟ ಸಾಗಿ ಹೋಯಿತು. ಇದು ನಮಗೆ ಹೊಸ ವರುಷವೇ? ಹಾಗಾದರೆ ಯುಗಾದಿ ಏನು? ಈ ಪ್ರಷ್ನೆಗಳು ಸಹಜವಾಗಿ ಉದ್ಭವಿಸುತ್ತದೆ. ಆದರೆ ನಾವು ಯಾವುದನ್ನೂ ತಿರಸ್ಕಾರ ಮನೋಭಾವದಿಂದ ನೋಡುವುದನ್ನು ಕಡಿಮೆಮಾಡಿದರೆ ಮನುಜನಕ್ಕೆ ಒಳ್ಳೆಯದು. ಗ್ರೆಗೋರಿಯನ್ ಕಾಲೆಂಡರ್ ಪ್ರಕಾರ ಇದು ಹೊಸ ವರುಷವೇ. ನಾವು ಈ ಹೊಸ ವರುಷದಂದು ಶುಭ ಹಾರೈಸಿದರೆ ನಮ್ಮತನವನ್ನು ಬಿಟ್ಟುಕೊಡುವುದೆಂದಲ್ಲ.


೨೦೦೯ ಕಳೆದು ೨೦೧೦ ಪ್ರಾರಂಭದ ಅವಧಿಯಲ್ಲಿ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಕಣ್ಣು ಹಾಯಿಸಿದರೆ, ಅದರಿಂದ ಕಲಿಯುವುದು ಬಹಳಷ್ಟಿರಬಹುದು. ಕಳೆದ ಕಾಲೆಂಡರ್ ವರುಷ, ನಮಗೆ ಅಷ್ಟಾಗಿ ಸುಗಮವಾಗಿ ಸಾಗಲಿಲ್ಲ ಎಂದು ಬಹುಮತರ ಅಭಿಪ್ರಾಯ. ವಿರೋಧಿ ಸಂವತ್ಸರದ ಹೆಚ್ಚಿನ ಅವಧಿ ೨೦೦೯ ನಲ್ಲಿ ಕಳೆದು, ಪರಸ್ಪರ ವೈಮನಸ್ಯವೇ ಹೆಚ್ಚಾಗಿ ಬೆಳೆಯುತ್ತಿರುವ ಸೂಚನೆ ಕಾಣುತ್ತಿದೆ. ೨೦೧೨ ರ ಪ್ರಳಯಕ್ಕೆ ಇದೇ ತಳಪಾಯ ಹಾಕಿದಂತಿದೆ ;-)


ನನಗಂತೂ ೨೦೦೯ ಮರೆಯುವಂತಹ ವರುಷವೇ. ವೈಯುಕ್ತಿಕವಾಗಿ, ಸಾಮಾಜಿಕವಾಗಿ ಇಷ್ಟೋಂದು ಸಾವು ಕಂಡಿರಲಿಲ್ಲ. ಕೊನೆಗೆ ಎಲ್ಲವೂ ಇಷ್ಟೆ ಎಂಬ ನಿರ್ಲಿಪ್ತತೆಯ ಮನೋಭಾವ ಹರಿದುಬಂತು. ಅಶ್ವಥ್ ಮತ್ತು ವಿಷ್ನು ಅವರನ್ನು ಕಳೆದುಕೊಂಡ ನಾವೇ ದುರ್ಭಾಗ್ಯವಂತರು. ಮುಂಬರುವ ವರುಷ ನಮ್ಮ ಸ್ವಾರ್ಥ, ವೈಮನಸ್ಯವನ್ನು ಹೋಗಲಾಡಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಹೊಸ ವರುಷದ ಶುಭಾಷಯಗಳು.


೨೦೧೦ಯನ್ನು ಈ ಮನುಸ್ಮೃತಿಯ ಶ್ಲೋಕದಿಂದ ಪ್ರಾರಂಭಿಸುತ್ತಿದ್ದೇನೆ.


ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವಿರ್ಜತೌ
ಧರ್ಮಚಾಪ್ಯಸುಖೋದರ್ಕ ಲೋಕನಿಕೃಷ್ಟಮೇವ ಚ


ಅರ್ಥ: ಧರ್ಮದಿಂದ ತಿರಸ್ಕೃತವಾದ ಧನವನ್ನು ಸ್ವೀಕಾರವಾಗದಿರಲಿ. ಧರ್ಮದಿಂದ ಭವಿಷ್ಯದಲ್ಲಿ ಮನುಜ ಜನಾಂಗಕ್ಕೆ/ಪ್ರಕೃತಿಗೆ ನೋವು ಉಂಟಾದರೆ, ಈ ಧರ್ಮವೇ ಸ್ವೀಕಾರವಾಗದಿರಲಿ.


ಇದು ಮನುಸ್ಮೃತಿಯಲ್ಲೇ ಹೇಳಿದೆ. ಹಾಗಾದರೆ, ಧರ್ಮ ಬದಲಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ’ಧರ್ಮ’ ಎಂದರೆ ಯುಗಧರ್ಮ ಎಂಬ ಅರ್ಥ. ಸನಾತನ ಧರ್ಮವಲ್ಲ. ಸನಾತನ ಧರ್ಮ ಬದಲಾಗುವುದಿಲ್ಲ. ಆದರೆ ಸಮಯಕ್ಕೆ ತಕ್ಕಹಾಗೆ ನಮ್ಮ ನಡವಳಿಕೆಗಳನ್ನು ಮಾರ್ಪಾಡಿಸಬೇಕೆಂಬುದಾಗಿ ಮನುವೇ ಹೇಳಿರುವಂತಿದೆ (ಮಾರ್ಪಾಡು ಸನಾತನಧರ್ಮದ ಚೌಕಟ್ಟಿನಲ್ಲಿ). ಇದರ ವಿಸ್ತಾರವಾದ ಅರ್ಥ ತಿಳಿದವರು ಹಂಚಿಕೊಳ್ಳಬಹುದು.

ಚಿತ್ರ: ಅಂತರ್ಜಾಲ

Tuesday, December 1, 2009

ವೃತ್ತಿಧರ್ಮದ ದ್ವಂದ್ವ

ನಾನು ಒಬ್ಬ "ಐಟಿ"ಗ. "ಐಟಿ" ಎಂದ ತಕ್ಷಣ ನಮ್ಮ ಮನಸ್ಸಿಗೆ ಹಲವಾರು ಗುಣಗಳು ಮೋಡುವುದು ಸಹಜ. ಬೆಂಗಳೂರಿನಲ್ಲಿ ಇರುವವರಿಗೆ ಇದರ ಬಗ್ಗೆ ಗೊತ್ತಿರುವುದು ಸರ್ವೇ ಸಾಮಾನ್ಯ.


ಪ್ರಶ್ನೆ: ಮತ್ತೆ ಇವಾಗ ಯಾಕಪ್ಪಾ ಇದರ ಬಗ್ಗೆ ಚರ್ಚೆ?
ಉತ್ತರ: ಇತ್ತೀಚಿನ ದಿನಗಳಲ್ಲಿ ನನ್ನ ತಲೆಯಲ್ಲಿ ಕೊರೆಯುತ್ತಿರುವ ವಿಷಯದ ಹುಳ ನಿಮಗೂ ಹಾಕೋಣಾ ಅಂತ.


ಭಾರತೀಯರು ತಮ್ಮ ಪುರಾತನ ಐತಿಹಾಸಿಕ ಸಂಸ್ಕೃತಿಯನ್ನು ಪಾಲಿಸುತ್ತಿಲ್ಲ ಅಂತ ದೂರುವವರು ಇದ್ದಾರೆ. ಒಂದು ರೀತಿಯಲ್ಲಿ ಅದು ಸತ್ಯವೇ (ಇದರ ಬಗ್ಗೆ ಚರ್ಚೆ ಬೇಡ). ಆದರೆ ಇದಕ್ಕೆ ’ಐಟಿ’ಯೇ ಕಾರಣ ಅಂತ ಹೇಳುವವರಿದ್ದಾರೆ. ಐಟಿನವರಿಂದಲೇ ಗಾರ್ಡನ್ ಸಿಟಿ ಪಬ್ ಸಿಟಿಯಾಯಿತು, ಅಂತ ನಮ್ಮನ್ನೇ ದೂಷಿಸ್ತಾರೆ.


ಪ್ರಶ್ನೆ: ಇದನ್ನೆಲ್ಲಾ ನೀನು ನಂಬ್ತೀಯಾ?
ಉತ್ತರ: ಗೊತ್ತಿಲ್ಲ. ಆದರೆ ನನಗೆ ತಿಳಿದವರ ವೃತ್ತಿಯಲ್ಲಿ ತಮ್ಮ ಮನೆತನದ ಆಚರಣೆಗಳನ್ನು ಕಳಚಿ, ತಮ್ಮ ಐಟಿ ಕೆಲಸವೇ ಮಹಾನ್ ಕಾರ್ಯ, ಸಮಯವೆಲ್ಲಾ ಈ ಕೆಲಸಕ್ಕೇ ಹಾಕಬೇಕು ಎಂದು ಹೇಳುವವರೇ ಹೆಚ್ಚು ಇದ್ದಾರೆ.


ಐಟಿ ಕೆಲಸ, ಸಮಾನ್ಯ ಬೇರೆ ಎಲ್ಲ ಕೆಅಸಗಳಂತೆ ಒಂದು ಅಷ್ಟೆ. ಆದರೆ ನಮಗೆ ಅದು ಹೆಚ್ಚು ದಿಮಾಂಡಿಂಗ್ ಅಂತ ಅನಿಸುವುದು ಅದರ ಕಾಂಪಿಟಿಟಿವ್ನೆಸ್ಸ್ ಇಂದ. ಅಂದರೆ, ನಾನು ನನ್ನ ಕೆಲಸಗಳನ್ನು ಮುಗಿಸುವುದಕ್ಕೆ ಇಷ್ಟು ಸಮಯ ಬೇಕು ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಅದು ಬೇರೆಯವರು ಎಷ್ಟು ಕೆಲಸ ಮಾಡುತ್ತಾರೆ ಅನ್ನುವುದರ ಆದಾರದ ಮೇಲೆ ನಿಂತಿದೆ.


ಪ್ರಶ್ನೆ: ಇಂತಹ ಕಾಂಪಿಟಿಟಿವ್ನೆಸ್ಸ್ ಬೇರೆ ಕ್ಷೇತ್ರದಲ್ಲು ಇರಬಹುದಲ್ಲಾ?
ಉತ್ತರ: ಇರಬಹುದು. ಆದರೆ ಬೇರೆ ಕ್ಷೇತ್ರದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕುವುದು ಕಡಿಮೆ. ಕೆಲಸದ ಭಯ (ಇನ್ಸೆಕ್ಯೂರಿಟಿ ಫೀಲಿಂಗ್) ಐಟಿಯಲ್ಲಿ ಹೆಚ್ಚು.


ಪ್ರಶ್ನೆ: ಬೇರೆ ಎಷ್ಟೋ ಜನ ಕೆಲಸ ಕಳ್ಕೊಂಡಿಲ್ವಾ? ಬಾಂಕು, ಸಪ್ಪೋಟು ಇಟಿಸಿ.
ಉತರ: ಹೌದು. ಇಲ್ಲಿ ಐಟಿ ಅಂದರೆ ಎಮ್‍ಎನ್‍ಸಿ ಅಂತ ಹೇಳ್ಬಹುದಾ ಹಾಗಿದ್ದರೆ? ಎಮ್‍ಎನ್‍ಸಿನವರಿಗೆ ಮಾನವೀಯತೆ ಸ್ವಲ್ಪ ಕಡಿಮೆ ;-)


ವೈಯಕ್ತಿಕವಾಗಿ ನಾನು ಇಂತಹ ಮಾತುಗಳನ್ನು ಒಪ್ಪುವುದುಲ್ಲ. ನಾನು ಕೂಡ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೀನಿ. ಆದರೆ ನನ್ನ ಕೆಲಸ ನನ್ನ ಪ್ರವೃತ್ತಿಗೆ ಅಡ್ಡಿ ಬಂದಿತೆಂದು ನನಗೆ ಅನಿಸುವುದಿಲ್ಲ. ಆದರೆ ಐಟಿನವರು ತಮ್ಮ ಮನೆತನದ ಸಂಸ್ಕೃತಿಯನು ಮರೆಯುತ್ತಿರುವುದು ನಿಜವಲ್ಲವೇ? ಸೋ ... ಇಲ್ಲಿ (ಐಟಿನಲ್ಲಿ) ಅದೊಂತರಾ ಸೆಳೆತನ ಇದೆ ಅಂತ ಅರ್ಥ ಅಲ್ವಾ? ನನ್ನಲ್ಲೂ ಈ ಆಕರ್ಷಣೆ ಮೂಡಿದ್ರೆ? ನಾನೂ ಹೀಗೇ ಎಲ್ಲರಂತೆ ಇಲ್ಲೇ ಕೊಳಿಬೇಕಾ? ಇದಿಲ್ಲದಿದ್ದರೆ ಏನು ಮಹಾ? ಸುಮ್ಮನೆ ಇಲ್ಲಿಂದ ಹೊರಗೆ ಬಂದು ಮತ್ತೇನಾದರೂ ಮಾಡುವುದರ ಬಗೆ ಯೋಚಿಸಬಹುದಲ್ಲವೇ!!


ಪ್ರಶ್ನೆ: ಯಾಕೆ ಕೆಲಸ ಬೀಡಬೇಕು? ಕೆಲಸ ಇಷ್ಟ ಆಗ್ತಿಲ್ವಾ?
ಉತ್ತರ: ಕೆಲಸ ಇಷ್ಟ. ನನಗೇನು ತೊಂದರೆ ಇಲ್ಲ ಇಲ್ಲಿ. ಒಳ್ಳೆ ಹೆಸರೂ ಇದೆ. ಯಾರ ಜೊತೆನೂ ಜಗಳವಾಡಿಲ್ಲ. ನಾನೇನು ರಾತ್ರಿಯೆಲ್ಲ ಕೂತು ಕೆಲಸ ಮಾಡ್ಬೇಕಿಲ್ಲ. ಬರಿ ೬ ಗಂಟೆವರಿಗೆ ಅಷ್ಟೆ. ಆದರೆ ಬೇರೆಯವರ ದೃಷ್ಟಿಕೋನ ಬೇರೆ ರೀತಿಯಲ್ಲಿ ಇದೆ. ಮಾತುಮಾತಿಗೂ ಅವರು ಕೇಳುವ ಪ್ರಶ್ನೆ "ನೀನು ಐಟಿನಲ್ಲಿ ಇದಿಯಾ. ಯಾವ ತೊಂದರೆಯೂ ಇಲ್ಲ. ಅದಕ್ಕೆ ನಿನಗೆ ನಮ್ಮ ಕಷ್ಟ ಅರ್ಥ ಆಗಲ್ಲ" ಅಂತ. ಮುಂದೆ ನಾನೇನು ಮಾತಾಡ್ಲಿ?


ಪ್ರಶ್ನೆ: ಇದನ್ನು ಬಿಟ್ಟು ಇನ್ನೇನು ಮಾಡ್ಬೇಕು ಅಂತ ಯೋಚನೆ ಮಾಡ್ತಿದೀಯ?
ಉತ್ತರ: ಗೊತ್ತಿಲ್ಲ.


ಪ್ರಶ್ನೆ: ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುವ ಪ್ಲಾನ್?
ಉತ್ತರ: ನನ್ನ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಹೋಗಬೇಕಾದರೆ ಕೆಲವೊಂದು ಅರ್ಹತೆಗಳಿರಬೇಕು. ಈಗ ಸಧ್ಯಕ್ಕೆ ಅದು ನನಗೆ ಇದೆ ಅಂತ ನನಗೆ ಅನಿಸುತ್ತಿಲ್ಲ. ಸುಮ್ಸುಮ್ನೆ ಎಲ್ಲರೂ ಅಲ್ಲಿಗೆ ಹೂಗಕ್ಕಾಗಲ್ಲ.


ಪ್ರಶ್ನೆ: ಮುಂದೆ ಏನು ಅಂತ ಗೊತ್ತಿಲ್ದೇನೆ ಇದ್ದರೆ ಹೇಗೆ? ಹೊಟ್ಟೆಗೆ ಏನು ಮಾಡ್ತೀಯ?
ಉತ್ತರ: ದೇವರು ಏನಾದ್ರು ಒಂದು ದಾರಿ ತೋರಿಸ್ತಾನೆ.


ಪ್ರಶ್ನೆ: ನಿನಗೆ ಇನ್ನೂ ಮದುವೆ ಕೂಡ ಆಗಿಲ್ಲ. ಕೆಲಸಾನೂ ಇಲ್ಲದಿದ್ರೆ ನಿನಗೆ ಯಾರು ಹೆಣ್ಣು ಕೊಡೊಲ್ಲ.
ಉತ್ತರ: !!!


ಪ್ರಶ್ನೆ: ಉದ್ಯೋಗಂ ಪುರುಷಲಕ್ಷಣಂ.
ಉತ್ತರ: ಹೌದು. ಆದರೆ ಉದ್ಯೋಗ ಅಂದ್ರೆ ಏನು? ದುಡ್ದು ಸಂಪಾದಿಸುವ ಕೆಲಸಮಾತ್ರವೇ ಉದ್ಯೋಗವೇ? ಮನೆಯಲ್ಲಿ ಗಾರ್ಡನಿಂಗ್, ವೇದಪಾಠ, ಬ್ಲಾಗಿಂಗ್, ಸಮಾಜ ಸೇವೆ, ಓದು, ಅಂತ ಆಕ್ಟಿವ್ ಆಗಿ ಇದ್ದರೆ ಅದು ಉದ್ಯೋಗ ಅಂತ ಅನ್ನಿಸ್ಕೊಳಲ್ವಾ? ಬರೀ ದುಡ್ಡಿನಿಂದ ಇದನ್ನು ಅಳಿಯಬೇಕಾ?
....
....
ಪ್ರಶ್ನೆ: ಇವಾಗ ಏನು ನಿನ್ನ ಪ್ರಾಬ್ಲಮ್ಮು?
ಉತ್ತರ: ಇವತ್ತು "ವಿಶ್ವ ಮಂಗಲ ಗೌ ಗ್ರಾಮ ಯಾತ್ರೆ"ಯ ಸಮಾವೇಶ ಬೆಂಗಳೂರಿನಲ್ಲಿ ಇದೆ. ಆದರೆ ನನಗೆ ಹೋಗಕ್ಕೆ ಅಗ್ತಿಲ್ಲ. ಇಲ್ಲಿ ನನ್ನನ್ನು ಯಾರು ಕಾಟ್ಟಾಕಿಲ್ಲ. ಆದರೆ ವೃತ್ತಿಧರ್ಮ ಅಂತ ಇದೆಯಲ್ಲಾ? ನನ್ನ ಜವಾಬ್ದಾರಿಯನ್ನ ಬಿಟ್ಟು ಹೋಗಕ್ಕೆ ಮನಸ್ಸಿಲ್ಲ. ಬಿಡುವುದಕ್ಕೂ ಮನಸ್ಸಿಲ್ಲ.


ಓಓಓ ಹಾಗೆ!!!


ಎಲ್ಲವೂ ದ್ವಂದ್ವಮಯವಾಗಿದೆ. ಇಷ್ಟೊತ್ತು ಏನೇನು ಬರ್ದೆ ಅಂತ ಕೂಡ ಗೊತ್ತಾಗ್ತಿಲ್ಲ. ನಿಮಗೇನಾದ್ರು ಅರ್ಥ ಆಯ್ತಾ?

ಚಿತ್ರ: ಅಂತರ್ಜಾಲ

Saturday, November 14, 2009

ಮಾಮಕಾಃ ಪಾಂಡವಾಶ್ಚೈವ


ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ

ಮಾಮಕಾಃ ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ


ಭವದ್ಗೀತೆಯ ಈ ಸಾಲು ಎಲ್ಲರಿಗೂ ಚಿರಪರಿಚಿತ. ಕುರುಕ್ಷೇತ್ರ ಮಹಾಯುದ್ಧದ ಮೂಲ ಕಾರಣ, ಈ ಒಂದು ಸಾಲು ಎತ್ತು ತೋರಿಸುತ್ತದೆ. ಮಹಾರಾಜ ಧೃತರಾಷ್ಟ್ರ, ಸಂಜಯನಿಗೆ ಹೇಳುವ ಮಾತಿದು. ಕುರುಕ್ಷೇತ್ರದ ಯುದ್ಧದಲ್ಲಿ ನಡೆಯುವ ಪ್ರಸಂಗಗಳನ್ನು ವಿವರಿಸುವಂತೆ ಸಂಜಯನಿಗೆ ಹೇಳುತ್ತಾನೆ. ಇಲ್ಲಿ ಕೌರವರನ್ನು "ಮಾಮಕಾಃ" ಎಂಬಲ್ಲಿ "ನನ್ನವರು ಮತ್ತು ಪಾಂಡವರು" ಎಂದು ಒಂದೇ ಮನೆಯಲ್ಲೇ ಇದ್ದು ಬೆಳೆದ ಕೌರವ-ಪಾಂಡವರನ್ನು ಬೇರೆಬೇರೆಯಾಗೇ ಕಾಣುತ್ತಾನೆ. ಮೊನ್ನೆ "ವಂದೇ ಮಾತರಮ್" ಹಾಡಿಗೆ ಫತ್ವಾ ಹೊರಡಿಸಲಾಗಿದೆ. ಕಾರಣ, ಮುಸಲ್ಮಾನರು ಬೇರೆ ಯಾರನ್ನೂ ಪೂಜಿಸಬಾರದೆಂದು. ಇವರಿಗೂ ಅಂಧ ಧೃತರಾಷ್ಟ್ರನಿಗೂ ಇರುವ ವ್ಯತ್ಯಾಸ ಇಷ್ಟೇ, ಆ ಅಂಧರಾಜ ರಾಷ್ಟ್ರದ ಹಿತದ ಬಗ್ಗೆ ಯೋಚಿಸದೆ, ತನ್ನ ಮಕ್ಕಳ ಅಧಿಕಾರದ ಸ್ವಾರ್ಥ ಮನೋಭಾವವನ್ನೇ ಬೆಳೆಸಿಕೊಂಡು ಬಂದ. ಇವತ್ತು ಒಂದು ಮತದ ಸ್ವಾರ್ಥಕ್ಕೆ ರಾಷ್ಟ್ರವನ್ನು ಪೂಜಿಸುವ ಗೀತೆಯನ್ನು ತಡೆದು ನಿಲ್ಲಿಸುವ ಪ್ರಯತ್ನ.


ಕುರುಕ್ಷೇತ್ರ ಯುದ್ದದ ಪ್ರಾರಂಭದಲ್ಲಿ ಅರ್ಜುನ ತನ್ನ ಶಸ್ತ್ರಾಸ್ತ್ರಗಳನ್ನು ಕಳಚಿ, ಕೆಳಗಿಟ್ಟು ತಾನು ಯುದ್ಧ ಮಾಡುವುದಿಲ್ಲವೆಂದು ಹೇಳುತ್ತಾನೆ. ಕಾರಣ, ತನ್ನ ಶತ್ರುಸೈನ್ಯದಲ್ಲಿ ಅವನಿಗೆ ಎಲ್ಲರೂ ತನ್ನವರೇ ಕಾಣಿಸುತ್ತಾರೆ (ಸ್ವಜನೇ ಶತೃಸೈನ್ಯೆ). ಕೌರವರಿಗೂ ಪಾಂಡವರಿಗೂ ಇದ್ದ ವ್ಯತ್ಯಾಸ ಈ ಮನೋಭಾವವೇ. ಆದರೆ ತನ್ನವರು ಎಂಬ ಮಮಕಾರಕ್ಕಿಂತ, ರಾಷ್ಟ್ರದ ಹಿತ ಮುಖ್ಯ, ಧರ್ಮವನ್ನು ಕಾಪಾಡುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶ್ರೀ ಕೃಷ್ಣ ನಮಗೆಲ್ಲರಿಗೂ ಗೀತೆಯ ಮೂಲಕ ಸಂದೇಶವನ್ನು ಕೊಟ್ಟಿದ್ದಾನೆ. ಭಗವದ್ಗೀತೆಯ ಪೂರ್ಣ ಸಾರವನ್ನು ತಿಳಿಯಬೇಕಾದರೆ, ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಯಬೇಕು.


ವಂದೇ ಮಾತರಮ್ ವಿರುದ್ಧ ಮಾತುಗಳು ಕೇಳುತ್ತಿರುವುದು ಇದೇನು ಮೊದಲನೆಯ ಸಲವಲ್ಲ. ಆದರೆ ಎಷ್ಟು ಸಲ ಇದರ ಬಗ್ಗೆ ಮಾತಾದರೂ, ಇದರ ಬಗ್ಗೆ ಹೆಚ್ಚು ಜನ ಕಾಳಜಿಯನ್ನೇ ತೋರಿಸುವುದಿಲ್ಲ. ಅದು ತಪ್ಪಲ್ಲ. ಕೆಟ್ಟದ್ದನ್ನು ಇಗ್ನೋರ್ ಮಾಡುವುದು ಒಂದು ರೀತಿಯಲ್ಲಿ ಒಳ್ಳೆಯದು. ಇತಿಹಾಸವು ನಮಗೆ ತೋರಿಸುವ ಘೋರಾತಿಘೋರ ವನ್ನಿವೇಷಗಳನ್ನು ನಾವು ಎಷ್ಟು ಬೇಗ ಮರೆತುಬಿಡುತ್ತೇವೆ ಅಲ್ಲವೇ? ಎಲ್ಲವನ್ನೂ ಮರೆತರೆ ಇತಿಹಾಸ ಓದುವುದಾದರೂ ಯಾಕೆ?


ರಮಾಯಣದಲ್ಲಿ ಕೈಕೇಯಿ-ಮಂತರರ ಪಿತೂರಿಯಿಂದ ರಾಮ ಕಾಡಿಗೆ ಹೋಗಬೇಕಾಯಿತು. ಕೈಕೇಯ ರಾಜ್ಯ ಈಗಿನ ಅಫ್ಗಾನಿಸ್ಥಾನ್-ರಶ್ಶ್ಯಾ ಬಾರ್ಡರ್. ಅವರು ಭಾರತಕ್ಕೆ ಬಂದಿದ್ದು ಈಗ ಭಯೋತ್ಪಾದಕರು ಬರುತ್ತಿರುವ ದಾರಿಯಲ್ಲೇ. ಮಹಭಾರತದಲ್ಲಿ, ಗಾಂಧಾರಿ-ಶಕುನಿಯರು ಕೂಡ ಬಂದಿದ್ದು ಅದೇ ದಾರಿಯಲ್ಲೇ. ಈಗಲೂ ನಾವು ಈ ದಾರಿಯನ್ನು ಮುಕ್ತವಾಗಿ ಓಡಾದಲು ಬಿಡುತ್ತಿದ್ದೇವೆ. ಭಾರತೀಯರು ಎಷ್ಟು ಕರುಣಾಮಯಿಗಳು. ಎಲ್ಲರಿಗೂ "ಬನ್ನಿ ಬನ್ನಿ, ನಮ್ಮನ್ನು ದೋಚಿ, ನೀವು ಸುಖವಾಗಿರಿ" ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಇಂತಹವರನ್ನು ತನ್ನ ಭೂಮಿಯಲ್ಲಿ ಹೆತ್ತಿದ್ದಕ್ಕೆ ಭಾರತ ಮಾತೆ ಎಷ್ಟು ಸಂತೋಶ ಪಡುತ್ತಿದ್ದಾಳೋ.


ದ್ವಾಪರಯುಗದಲ್ಲಿ ಶ್ರೀ ಕೃಷ್ಣ, ಸಮುದ್ರದ ನೆಲದಲ್ಲೇ ದ್ವಾರಕೆಯೆಂಬ ನಗರವನ್ನು ನಿರ್ಮಾಣ ಮಾಡಿದ. ಸಮುದ್ರದಿಂದ ಬರುವ ಅಪಾಯಗಳಿಂದ ರಾಷ್ಟ್ರವನ್ನು ಕಾಪಾಡಬೇಕೆಂಬ ಹಿತದೃಷ್ಟಿಯಲಿ. ನಂತರ ಏನಾಯಿತು ನೋಡಿ. ಮಹಮ್ಮದ್ ಘಝ್ನಿ ಸಮುದ್ರಿಂದ ದಾಳಿ ನಡೆಸಿ ಸೊಮನಾಥ ದೇವಾಲಯವನ್ನು ಮಟ್ಟ ಹಾಕಿದ ಎಂದು ಕೇಳ್ಪಟ್ಟೆ. ಇತ್ತೀಚೆಗೆ ನಡೆದ ಮುಂಬೈ ದಾಳಿಯಲ್ಲಿ ಕೂಡ ಭಯೋದ್ಪಾದಕರು ಸಮುದ್ರದಿಂದ ಬಂದಿಳಿದಿದ್ದರು. ಆದರೆ ನಾವು ಭಾರತೀಯರು ತೆರೆದ ಹೃದಯದಿಂದ ಎಲ್ಲರನ್ನೂ ಒಪ್ಪಿಕೊಳ್ಳಬೇಕಲ್ಲವೇ? ಅದಕ್ಕೇ ಹೊಸ ಭದ್ರಕೋಟೆಗಳನ್ನು ಕಟ್ಟುವುದಿಲ್ಲ. ಬೇರೆಯವರು ನಮ್ಮ ಮೇಲೆ ಎಷ್ಟು ಕೈ ಮಾಡಿದರೂ ನಾವು ಅಂತಹ ದುಃಸಾಹಸಕ್ಕೆ ಕೈ ಹಾಕುವುದಿಲ್ಲ. ಸುಭಾಶ್ ಚಂದ್ರ ಬೋಸ್ ಅವರ "ಇಂಡಿಯನ್ ನಾಶನಲ್ ಆರ್ಮಿ" ಇಂದ ನಮಗೆ ಸ್ವಾತಂತ್ರ್ಯ ಬಂದಿದ್ದು ನಿಜವಾದರೂ, ನಾವು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ ನಾವು ಅಹಿಂಸಾವಾದಿಗಳಲವೇ?


ಅರ್ಜುನ, ಚಂದ್ರಗುಪ್ತರು ನಮಗೆ ಸಿಗಬಹುದೇನೋ. ಆದರೆ ಅವರ ಸಾರಥಿಯಾಗಿ ಒಬ್ಬ ಶ್ರೀ ಕೃಷ್ಣ, ಚಾಣಕ್ಯ ಅಥವಾ ವಿವೇಕಾನಂದ ಬರಬಾರದೇ?

Wednesday, October 28, 2009

೫೦೦ರ ಸಂಭ್ರಮ


ಇತ್ತೀಚಿನ ಪ್ರವಾಹದಿಂದ ಉತ್ತರ ಕರ್ನಾಟಕ ಇನ್ನೂ ಸುಧಾರಿಕೊಳ್ಳುತ್ತಿದೆ. ಇನ್ನೆಷ್ಟು ವರುಷಗಳು ಬೇಕೋ ಮೊದಲಿನಂತಾಗಲು! ಹಪಿಯ ಧ್ವಂಸ ನೋಡಿದಾಗ ನೆನಪಾಗುವುದು, ವಿಜಯನಗರದ ಸಾಮ್ರಾಜ್ಯ. ೩೦೦ಕ್ಕೂ ಹೆಚ್ಚು ವರುಷಗಳ ಕಾಲ ಮುಸಲ್ಮಾನ ದಾಳಿಕೋರರ ಆಕ್ರಮಣದಿಂದ ದಕ್ಷಿಣ ಭಾರತವನ್ನು ರಕ್ಷಿಸಿದ ನಮ್ಮ ವಿಜಯನಗರ ಸಾಮ್ರಾಜ್ಯ, ಇತಿಹಾಸದಲ್ಲಿ ಒಂದು ಮಾದರಿಯ ಸಾಮ್ರಾಜ್ಯ ಎಂದೆನಿಸಿಕೊಂಡಿತು. ನಂತರ ಬಂದ ಶಿವಾಜಿ, ವಿಜಯನಗರದ ನಕಾಶೆಯನ್ನು ಪರಿಶೀಲಿಸಿ, ಅದೇ ರೀತಿಯ ಹೈಂದವಿ ಸಾಮ್ರಾಜ್ಯವನ್ನು ಕಟ್ಟಬೇಕೆಂದು ಸತತವಾಗಿ ಪ್ರಯತ್ನಿಸಿದ. ಇಂತಹ ಮೆಚ್ಚುಗೆಯನ್ನು ಪಡೆದ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ.

ರಮರಾಯನನ್ನು ಮೋಸದಿಂದ ಸೋಲಿಸಿ, ವಿಜಯನಗರವನ್ನು ತನ್ನ ಕೈವಷಕ್ಕೆ ತೆಗೆದುಕೊಂಡ ಸುಲ್ತಾನರು, ೫ ತಿಂಗಳು ಸತತವಾಗಿ ಲೋಟಿಮಾಡಿ, ದೇವಾಲಯಗಳನ್ನು ಕೆಡವಿದರೂ, ಉಳಿದು ನಿಂತ ಅವಶೇಷಗಳು ಕೂಡ, ವಿಜಯನಗರದ ವೈಭವವನ್ನು ಕೂಗಿ ಹೇಳುತ್ತಿದೆ. ವಿಜಯನಗರದ ಸಿರಿವಂತಿಕೆ ಎಂದ ಕೋಡಲೇ ನಮ್ಮ ತಲೆಗೆ ತೋರುವುದು ಕೃಷ್ಣದೇವರಾಯ. ಕೃಷ್ಣದೇವರಾಯ ವಿಜಯನಗರದ ಪಟ್ಟಕ್ಕೆ ಏರಿದ್ದು ೧೫೦೯ ನಲ್ಲಿ. ಅಂದರೆ ಸೆರಿಯಾಗಿ ೫೦೦ ವರುಷಗಳ ಹಿಂದೆ. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭರತಕ್ಕೆ, ಭಾರತೀಯರಿಗೆ ಸಂಭ್ರಮದ ನೆನಪು.

ತಾನು ಪಟ್ಟಭಿಷಿಕ್ತನಾದ ಒಡನೆ ಕೃಷ್ಣದೇವರಾಯ ತನ್ನ ರಾಜ್ಯವನ್ನು ಬಲಪಡಿಸುವ ಕೆಲಸಕ್ಕೆ ತೊಡಗಿದ. ನೆರೆಹೊರೆಯ ರಾಜ್ಯಗಳು ತನ್ನ ರಾಜ್ಯದತ್ತ ಕಣ್ಣೆತ್ತಿಯೂ ನೋಡದಂತ ಸನ್ನಿವೇಶವನ್ನು ನಿರ್ಮಿಸಿದ್ದ. ಒರಿಸ್ಸಾದ ಕಳಿಂಗ ರಾಜ್ಯವನ್ನೂ ಗೆದ್ದು, ಹಂಪಿಯಿಂದ ಸಾವಿರಾರು ಮೈಲು ದೂರದಲ್ಲೂ ಲಕ್ಷಗಟ್ಟಲೆ ಸೈನಿಕರನ್ನು, ಅವರಿಗೆ ಬೇಕಾಗುವ ಸಾಮಗ್ರಿಗಳು, ಹಣಕಾಸು, ಶಸ್ತ್ರಾಸ್ತ್ರ ಎಲ್ಲವನ್ನೂ ಯೋಜಿಸಿದ್ದ. ಭರತಖಂಡದ ಪ್ರತಿಯೊಬ್ಬ ರಾಜನೂ ಬೆಚ್ಚುಬೀಳುವಂತೆ ಮಾಡಿದ್ದ. ಇದು ತನ್ನ ಮೊದಲ ನಾಲ್ಕೈದು ವರುಷಗಳ ಆಡಳಿತದಲ್ಲಿ ಮಾಡಿದ ಕೆಲಸ. ನಂತರ ರಾಜ್ಯದೊಳಗಿನ ಅಭಿವೃದ್ಧಿಯತ್ತ ಗಮನ ಹರಿಸಿದ. ಇದನ್ನು ಭಾರತ ಸ್ವಾತಂತ್ರ್ಯ ಪಡೆದ ಮೊದಮೊದಲ ಕಾಲಕ್ಕೆ ಹೋಲಿಸಿದರೆ, ನಮ್ಮ ದೇಶದ ಈಗಿನ ಸ್ಥಿತಿಗೆ ಏನು ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತದೆ.

ತುಂಗಭದ್ರೆಯಿಂದ ಕಾಳುವೆಗಳ ಮೂಲಕ ಎಲ್ಲೆಡೆ ನೀರು ಹರಿಯುವಂತೆ ಮಾಡಿದ. ಅಂದು ಆರಂಭಗೊಂಡ ಪರಿಪಾಠ ಇಂದಿಗೂ ಮುಂದುವರಿಯುತ್ತಿದೆ ಎಂದು ಕೇಳ್ಪಟ್ಟೆ. ತುಂಗಭದ್ರೆ ಸಾಗಿ ಕೃಷ್ಣೆಯನ್ನು ಸೇರುವಷ್ಟು ಉದ್ದಕ್ಕೂ ರೈತರು ಏರ್ಪಡಿಸಿರುವ ವ್ಯವಸ್ಥೆ ಕಣ್ಣಾರೆ ನೋಡಬಹುದು ಎಂದು ನೋಡಿದವರು ಹೇಳುತ್ತಾರೆ. ಕೃಷ್ಣದೇವರಾಯ ಕಾಲುವೆ, ಜಲಾಶಯಗಳನ್ನು ಮಾತ್ರವಲ್ಲ, ದೇವಾಲಯಗಳನ್ನು, ವಿಧ್ಯಾಸಂಸ್ಥೆಗಳನ್ನು, ಕಲ್ಯಾಣ ಮಂಟಪಗಳನ್ನು, ಮತ್ತಿತರ ಜನೋಪಯೋಗಿ ಸಂಸ್ಥೆಗಳನ್ನು ನಿರ್ಮಿಸಿದ. ಇದರ ಪರಿಣಾಮವೇ ಇಡೀ ರಾಜ್ಯ ಸುಭೀಕ್ಷೆಯಿಂದ ಇದ್ದು ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು.

ಕೃಷ್ಣದೇವರಾಯನ ನಂತರ ಬಂದ ವಿಜಯನಗರದ ಅರಸರು, ಇದೇ ರೀತಿ ಮುಂದುವರೆಸಿದ್ದರೆ, ಹಂಪಿ ದುಸ್ಥಿತಿಯನ್ನು ಕಾಣಬೇಕಾಗಿರುತ್ತಿರಲಿಲ್ಲವೋ ಏನೋ. ಇತಿಹಾಸದ ಪುಟಗಳಲ್ಲಿ ಇಷ್ಟೆಲ್ಲಾ ಇದ್ದರೂ, ನಮ್ಮ ಬುದ್ದಿಜೀವಿಗಳು ಕೇಳುವ ಪ್ರಶ್ನೆ "ಕೃಷ್ಣದೇವರಾಯ ಕನ್ನಡಕ್ಕೆ ಏನು ಮಾಡಿದ? ಅವನ ಪುಸ್ತಕಗಳು ತೆಲುಗಿನಲ್ಲಿದೆ ಅಲ್ಲವೇ?". ಕೆಲವರಿಗೆ ವಾದ ಮಾಡುವುದರಲ್ಲೇ ಹೆಚ್ಚುಗಾರಿಕೆ. ಆಂಧ್ರದ ರಮಾರಮಣನ ಆದ ಮಾತ್ರಕ್ಕೆ ಕನ್ನಡರಾಯ ಆಗಬಾರದು ಎಂದು ಅರ್ಥವೇ?

ಹಳೆಯ ನೆನಪು, ಈಗಿನ ಮಾತು, ದೃಷ್ಯಗಳು ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಿಲ್ಲ. ರಾಜಕಾರಿಣಿಗಳನ್ನ ದೂಷಿಸುವುದು ದಂಡ. ಬೆಳೆದ ಮರವನ್ನು ಬಗ್ಗಿಸುವುದು ಕಷ್ಟ. ಹೊಸದಾಗಿ ಬರುವ ಗಿಡಗಳನ್ನು ಸೆರಿಯಾಗಿ ನೋಡಿಕೊಳೋಣ.

Wednesday, October 14, 2009

ಮರಳಿ ಬಾ ಪುಣ್ಯಕೋಟಿ



ಬಹಳ ವರುಷಗಳಿಂದ ನನಗೊಂದು ಆಸೆ. ಮನೆಯಲ್ಲಿ ಒಂದು ಹಸು ಇರಬೇಕೆಂದು. ಆದರೆ ಈ ಬೆಂಗಳೂರಿನಲ್ಲಿ ಅದನ್ನು ಮೇಯಿಸಲು ಎಲ್ಲಿಗೆ ಕಳಿಸುವುದು? ಹಸು ಆರೋಗ್ಯದಿಂದ ಇರಬೇಕಾದರೆ ಅದು ದಿನಕ್ಕೆ ಐದಾರು ಗಂಟೆಗಳವರಿಗಾದರೂ ಓಡಾಡಿ ಮೇಯಬೇಕು. ಕೂತಲ್ಲೇ ಕೂತರೆ ಅದು ನಿಶ್ಪ್ರಯೋಜಕವಾಗುತ್ತದೆ. ನನ್ನ ಕನಸು ಕನಸಾಗಿಯೇ ಉಳಿಯಿತು.


ಹಸು ಮನೆಯಲ್ಲಿದ್ದರೆ ಮನೆಗೆ ಒಳ್ಳೆಯದು ಎಂಬ ಭಾವನೆ ಇದೆ. ಹಸುವಿನ ಪ್ರಯೋಜನ ಎಲ್ಲರಿಗೂ ತಿಳಿದ ವಿಷಯವೇ. ಪಾಕೆಟ್ ಹಾಲಿಗಿಂತ ಹಸುವಿನ ಹಾಲು ಬೆಳೆಯುವ ಮಕ್ಕಳಿಗೆ ಹೆಚ್ಚು ಪುಷ್ಟಿದಾಯಕ ಎಂದು ವಿಜ್ಙಾನವೇ ಹೇಳುತ್ತದೆ. ಅದರ ಮೂತ್ರ, ಸಗಣಿಯಿಂದ ನಿರೋಧಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಹಸುವೊಂದಿದ್ದರೆ ಎಚ್೧ಎನ್೧ ಗೆ ಹೆದರಬೇಕಾಗಿಲ್ಲ ಅಲ್ಲವೇ?
ಈಗ ಯಾಕಪ್ಪ ಇದರ ಬಗ್ಗೆ, ಅದೂ ಬೆಂಗಲೂರಿನಲ್ಲಿ ಅಂತ ಯೋಚನೆ ಮಾಡ್ತಿದಿರಾ? ಭಾರತೀಯ ಹಸುವಿನ ೧೦೦ಕ್ಕೂ ಹೆಚ್ಚು ತಳಿಗಳಲ್ಲಿ ಕೇವಲ ೩೩ ತಳಿಗಲು ಇನ್ನು ನಶಿಸದೇ ಉಳಿದುಕೊಂಡಿದೆ. ಇದರ ಬಗ್ಗೆ ನಾವು ಏನು ಮಾಡುತ್ತಿದ್ದೀವಿ?


ನಮ್ಮ ಇತಿಹಾಸದಲ್ಲಿ ನಾವು ನೋಡುತ್ತೇವೆ, ಹಸುಗಳು ಆಧಾರವಾಗಿದ್ದ ರಾಜ್ಯಗಳು ಬೆಳವಣಿಗೆಯ ಹಾದಿಯಲ್ಲಿ ಸಾಗಿತು. ಆದರೆ ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ. ನಮ್ಮ ಪ್ರಧಾನ ಉದ್ಯಮ ಕೃಶಿ ಎಂದು ಹೇಳಿಕೊಂಡರೂ, ನಾವು ಪಾಶ್ಚಾತ್ಯದ ಹಾದಿನನ್ನು ಅನುಸರಿಸುತ್ತಿದ್ದೇವೆ. ಹಳ್ಳಿಗಳಿಂದ ರೈತರು ತಮ್ಮ ಬೇಸಾಯವನ್ನು ಬಿಟ್ಟು ಪಟ್ಟಣದ ಕಡೆ ಮುಖ ಮಾಡಿದ್ದಾರೆ. ಅವರನ್ನು ದೂಶಿಸುವುದು ಉಚಿತವಲ್ಲ. ಪಟ್ಟಣಗಳಲ್ಲಿರುವವರು ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ರೈತರು ಮಾತ್ರ ಹಳ್ಳಿಗಳಲ್ಲೇ ಉಳಿಯಬೇಕು ಎಂದು ನಾವು ಯಾಕೆ ನಿರೀಕ್ಷಿಸಬೇಕು? ಆದರೆ ಹೀಗಯೇ ಮುಂದುವರೆದರೆ, ನಮ್ಮಲ್ಲಿ ಹಣವಿರಬಹುದೇನೋ ಆದರೆ ಉಣ್ಣಲು ಅನ್ನ ಇರುವುದಿಲ್ಲ. ಹೇಗೆ ಕಳೆದ ೨೦-೨೫ ವರುಷಗಳಿಂದ ಪಟ್ಟಣಗಳಲ್ಲಿ ಐಟಿ ಆಂದೋಲನವಾಯಿತೋ ಹಾಗೆ ಈಗ ಕೃಶಿ ಮತ್ತು ಗೋ ಆಂದೋಲನವಾಗಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಅದೋಗತಿ. ಗೋವನ್ನು ಕಾಪಾಡುವುದು ಎಲ್ಲರ ಕರ್ತವ್ಯವಲ್ಲವೇ? ಅದು ಬರಿ ರೈತರಿಗೆ ಸಂಬಂದಪಟ್ಟ ವಿಷಯವೇ?


ಸೆಪ್ಟಂಬರ್ ೩೦ನೇ ತಾರೀಕು ಕುರುಕ್ಷೇತ್ರದಲ್ಲಿ "ವಿಷ್ವ ಮಂಗಲ ಗೋ-ಗ್ರಾಮ ಯಾತ್ರೆ" ಪ್ರಾರಂಭವಾಯಿತು. ಯಾತ್ರೆ ೧೦೮ ದಿನ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದಲೂ ಸಾಗಿ ನಾಗಪುರದಲ್ಲಿ ಅಂತ್ಯಗೊಳ್ಳಲಿದೆ. ಬೆಂಗಲೂರಿಗೆ ಡಿಸೆಂಬರ್ ೧ನೇ ತಾರೀಕು ಬರುತ್ತದೆ. ಭಾರತದ ಪ್ರತಿಷ್ಠಿತ ಸ್ವಾಮಿ-ಸಂತರು ಸೇರಿ ಮಾಡುತ್ತಿರುವ ಈ ಕಾರ್ಯಕ್ರಮ, ಹೆಚ್ಚು ಜನರನ್ನು ಗೋ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ http://kan.gougram.org/ ಗೆ ಭೇಟಿನೀಡಿ.


ಇದರಲ್ಲಿ ನಮ್ಮ ಪಾತ್ರವೂ ಇದೆ. ಈ ಯಾತ್ರೆಯ ಫಲ ಹೆಚ್ಚು ಜನರಿಗೆ ಮುಟ್ಟಬೇಕಾಗಿದೆ. ಹೆಚ್ಚೆಚ್ಚು ಜನರು, ರೈತರು, ಕೈಗಾರಿಕೋದ್ಯಮರು, ರಾಜಕಾರಿಣಿಗಳು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು. ನಮ್ಮ ಸಾಂಸ್ಕೃತಿಕ ಬೆಳವಣಿಗೆಗೆ ಈಗಲೇ ಅಡಿಗಟ್ಟು ಹಾಕಬೇಕಿದೆ. ನೀವೂ ಇದಕ್ಕೆ ಕೈ ಜೋಡಿಸ್ತೀರ ಅಲ್ವಾ?

Wednesday, September 30, 2009

ಸಹಜವೇ ಅಸಹಜ


ಇವತ್ತು ದಿನಪತ್ರಿಕೆಯಲ್ಲಿ ಓದಿದ್ದು, "ಒಬ್ಬ ಅಟೊ ಡ್ರೈವರ್ ಒಬ್ಬ ಗಿರಾಕಿಗೆ ಅವರು ಬಿಟ್ಟು ಹೋಗಿದ್ದ ಲಾಪ್‍ಟಾಪ್‍ಅನ್ನು ಹಿಂತಿರುಗಿಸಿ ಕೊಟ್ಟ" ಎಂದು. ಆ ಡ್ರೈವರ್ ಮಾಡಿದ ಕೆಲಸ ಶ್ಲಾಘನೀಯ. ಆದರೂ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ದೊಡ್ಡ ವಿಷಯವೇ? ಹೌದು ಅದು ದೊಡ್ಡ ವಿಷಯ. ಯಾಕೆಂದರೆ ಈಗಿನ ಕಾಲದಲ್ಲಿ ಅಷ್ಟು ಕೂಡ ಯಾರು ಮಾಡುವುದಿಲ್ಲ. ಅಂದರೆ, ಯಾವುದು ಸಹಜವಾಗಿ ಆಗಬೇಕೋ ಅದು ಅಪರೂಪವಾಗಿದೆ ಎಂದೇ ಅರ್ಥವಲ್ಲವೇ? ಇಂತಹ ವಿಷಯಗಳನ್ನು ಪತ್ರಿಕೆಯಲ್ಲಿ ಓದಿ ಸಂತೋಷಪಡಬೇಕೋ ದುಃಖಪಡಬೇಕೋ ತಿಳಿಯುತ್ತಿಲ್ಲ.


ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಒಂದೇ ಸುದ್ದಿ. ಕಾಂಗ್ರೆಸ್ ಪಾರ್ಟಿಯ ರಾಜಕಾರಣಿಯರು ವಿಮಾನದಲ್ಲಿ ಎಕೊನೊಮಿ ಕ್ಲಾಸ್ನಲ್ಲೇ ಪ್ರಯಾಣ ಮಾಡುತ್ತಾರಂತೆ. ಅದರ ಉದ್ದೇಶ, ಪ್ರಜೆಗಳ ಹಣವನ್ನು ತಮ್ಮ ಸುಖಕ್ಕೋಸ್ಕರ ದುರುಪಯೋಗ ಆಗಬಾರದು ಎಂದು. ಅಂದರೆ ಇಷ್ಟು ವರ್ಷ ದುರುಪಯೋಗವಾಗುತ್ತಿತ್ತು ಅಂತೆಲ್ಲವೇ? ಹೋದ ವಾರ "ಬೆತ್ತಲೆ ಜಗತ್ತು" ಲೇಖನದಲ್ಲಿ ಪ್ರತಾಪ್ ಸಿಂಹ ಇದರ ಬಗ್ಗೆ ದೇರ್ಘವಾಗಿ ಬರೆದಿದ್ದಾರೆ.


ಅಭಿಶೇಕ್ ಭಚ್ಚನ್ ಮತ್ತು ಐಶ್ವರ್ಯ ಭಚ್ಚನ್ ಅಮಿತಾಬ್ ಮತ್ತು ಜಯ ಜೊತೇಗೇ ಇರ್ತಾರೆ. ಬೇರೆ ಮನೆ ಮಾಡುವುದಿಲ್ಲವಂತೆ. ಅದಕ್ಕೇನು? ಅವನಿಗೆ ನೊಬೆಲ್ ಪ್ರೈಜ಼್ ಕೊಡಬೇಕೇ? ತಂದೆ ತಾಯಿಯ ಜೊತೆ ಇರುವುದು ಅಷ್ಟು ಅಸಹಜವಾಗಿದೆಯೇ?


ಈ ರೀತಿಯ ಸುದ್ದಿಗಳು ಪತ್ರಿಕೆಯಲ್ಲಿ ಪದೇ ಪದೇ ನೋಡುತ್ತೇವೆ. ಅದು ಬಿಡಿ. ನಮ್ಮ ನಿತ್ಯ ಜೀವನದಲ್ಲಿ ಕೂಡ ಇದನ್ನು ನೋಡಬಹುದು. ಉದಾಹರಣೆಗೆ -


ಕೆಲವರಿಗೆ ಬೆಳಗ್ಗೆ ಬೇಗ ಏಳುವುದೇ ದೊಡ್ಡ ಸಾಹಸ ಮಾಡಿದಂತೆ. ದಿನಾ ಬೇಗ ಏಳುವವರು ಎಷ್ಟೋ ಜನ ಇದ್ದಾರೆ. ಆದರೆ ಅವರನ್ನು ಕಂಡರೆ, ಅದೇನು ಮಹಾ ಅವರು ಮೊದಲಿನಿಂದಲೂ ಬೇಗ ಎದ್ದು ಅಭ್ಯಾಸ. ಅದಕ್ಕೆ ಅವರಿಗೆ ಏನು ಕಷ್ಟ ಆಗಲ್ಲ. ನಿದಾನವಾಗಿ ೯ ಅಥವ ೧೦ ಗಂಟೆಗೆ ಏಳುವವನು ಅಪರೋಪವಾಗಿ ಒಂದು ದಿನ ಬೇಗ ಎದ್ದರೆ, ಅದೇ ದೊಡ್ಡ ಸುದ್ದಿ. ಅಕ್ಕಪಕ್ಕದಲ್ಲಿದ್ದವರಿಗೆ, ನೆಂಟರಿಗೆ ಸಂತೋಷದಿಂದ ಹೇಳ್ಕೋತಾರೆ "ರೀ ಇವತ್ತು ನನ್ನ ಮಗ ಬೆಳಗ್ಗೆ ೫ ಗಂಟೆಗೇ ಎದ್ದ ಗೊತ್ತಾ?".

ರೋಡಿನಲ್ಲಿ ಪ್ರಯಾಣಿಸುವಾಗ ಒಬ್ಬ ಆಕ್ಸಿಡೆಂಟ್ ಆಗಿ ಮೃತಪಡುತ್ತಾನೆ. ಅದನ್ನು ಕೇಳಿ, "ಅದೇನು ಮಹಾ. ದಿನಾ ಆಗ್ತಾನೆ ಇರತ್ತೆ ಮರಣಗಳು". ಪ್ರತೀ ದಿನ ಆಕ್ಸಿಡೆಂಟ್ ಆದರೂ, ಒಂದು ಮರಣವನ್ನು ಅಷ್ಟು ಸಾಧಾರಣಾವಾಗಿ ಕಾಣಬಹುದೇ?

ಹೀಗೇ, "ಆಯುಧಪೂಜೆಗೆ ಅವನ ಬೈಕನ್ನು ಅವನೇ ತೊಳೆದನಂತೆ", "ಆಫೀಸಿಗೆ ಊಟ ಮನೆಯಿಂದಲೇ ತೆಗೆದುಕೊಂಡು ಹೋಗ್ತಾನೆ. ಹೊರಗಡೆ ಹೋಟೆಲ್ನಲ್ಲಿ ತಿನ್ನಲ್ವಂತೆ", "ಅವನು ಕನ್ನಡದಲ್ಲೇ ಮಾತಾಡ್ತಾನೆ" .. ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. common sense is not common ಅನ್ನುವ ಹಾಗೆ, ಯಾವುದು ಸಹಜವಾಗಿ ನಡಿಯಬೇಕೋ, ಅದೇ ಅಪರೂಪದ ವಿಷಯಗಳು. ಇದೆಲ್ಲ ಮನುಷ್ಯ ಅಷ್ಟು ಸ್ವಾರ್ಥಿ ಆಗಿರುವುದಿಂದಲೋ, ಪಾಷ್ಚಾತ್ಯ ಸಂಸ್ಕೃತಿ ನಮ್ಮನ್ನು ಹೇಗೆ ಮಾಡಿದೆಯೋ ಅಥವಾ ನಮ್ಮ ನಿರ್ದಿಷ್ಟಮಾನವೇ ಇಳಿದಿದೆಯೋ ತಿಳಿಯುತ್ತಿಲ್ಲ.