Monday, January 4, 2010

ಹತ್ತರ ಹೊತ್ತು



ಮತ್ತೊಂದು ಕಾಲ ಘಟ್ಟ ಸಾಗಿ ಹೋಯಿತು. ಇದು ನಮಗೆ ಹೊಸ ವರುಷವೇ? ಹಾಗಾದರೆ ಯುಗಾದಿ ಏನು? ಈ ಪ್ರಷ್ನೆಗಳು ಸಹಜವಾಗಿ ಉದ್ಭವಿಸುತ್ತದೆ. ಆದರೆ ನಾವು ಯಾವುದನ್ನೂ ತಿರಸ್ಕಾರ ಮನೋಭಾವದಿಂದ ನೋಡುವುದನ್ನು ಕಡಿಮೆಮಾಡಿದರೆ ಮನುಜನಕ್ಕೆ ಒಳ್ಳೆಯದು. ಗ್ರೆಗೋರಿಯನ್ ಕಾಲೆಂಡರ್ ಪ್ರಕಾರ ಇದು ಹೊಸ ವರುಷವೇ. ನಾವು ಈ ಹೊಸ ವರುಷದಂದು ಶುಭ ಹಾರೈಸಿದರೆ ನಮ್ಮತನವನ್ನು ಬಿಟ್ಟುಕೊಡುವುದೆಂದಲ್ಲ.


೨೦೦೯ ಕಳೆದು ೨೦೧೦ ಪ್ರಾರಂಭದ ಅವಧಿಯಲ್ಲಿ ನಾವು ನಡೆದುಕೊಂಡು ಬಂದ ದಾರಿಯಲ್ಲಿ ಕಣ್ಣು ಹಾಯಿಸಿದರೆ, ಅದರಿಂದ ಕಲಿಯುವುದು ಬಹಳಷ್ಟಿರಬಹುದು. ಕಳೆದ ಕಾಲೆಂಡರ್ ವರುಷ, ನಮಗೆ ಅಷ್ಟಾಗಿ ಸುಗಮವಾಗಿ ಸಾಗಲಿಲ್ಲ ಎಂದು ಬಹುಮತರ ಅಭಿಪ್ರಾಯ. ವಿರೋಧಿ ಸಂವತ್ಸರದ ಹೆಚ್ಚಿನ ಅವಧಿ ೨೦೦೯ ನಲ್ಲಿ ಕಳೆದು, ಪರಸ್ಪರ ವೈಮನಸ್ಯವೇ ಹೆಚ್ಚಾಗಿ ಬೆಳೆಯುತ್ತಿರುವ ಸೂಚನೆ ಕಾಣುತ್ತಿದೆ. ೨೦೧೨ ರ ಪ್ರಳಯಕ್ಕೆ ಇದೇ ತಳಪಾಯ ಹಾಕಿದಂತಿದೆ ;-)


ನನಗಂತೂ ೨೦೦೯ ಮರೆಯುವಂತಹ ವರುಷವೇ. ವೈಯುಕ್ತಿಕವಾಗಿ, ಸಾಮಾಜಿಕವಾಗಿ ಇಷ್ಟೋಂದು ಸಾವು ಕಂಡಿರಲಿಲ್ಲ. ಕೊನೆಗೆ ಎಲ್ಲವೂ ಇಷ್ಟೆ ಎಂಬ ನಿರ್ಲಿಪ್ತತೆಯ ಮನೋಭಾವ ಹರಿದುಬಂತು. ಅಶ್ವಥ್ ಮತ್ತು ವಿಷ್ನು ಅವರನ್ನು ಕಳೆದುಕೊಂಡ ನಾವೇ ದುರ್ಭಾಗ್ಯವಂತರು. ಮುಂಬರುವ ವರುಷ ನಮ್ಮ ಸ್ವಾರ್ಥ, ವೈಮನಸ್ಯವನ್ನು ಹೋಗಲಾಡಿಸಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಹೊಸ ವರುಷದ ಶುಭಾಷಯಗಳು.


೨೦೧೦ಯನ್ನು ಈ ಮನುಸ್ಮೃತಿಯ ಶ್ಲೋಕದಿಂದ ಪ್ರಾರಂಭಿಸುತ್ತಿದ್ದೇನೆ.


ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವಿರ್ಜತೌ
ಧರ್ಮಚಾಪ್ಯಸುಖೋದರ್ಕ ಲೋಕನಿಕೃಷ್ಟಮೇವ ಚ


ಅರ್ಥ: ಧರ್ಮದಿಂದ ತಿರಸ್ಕೃತವಾದ ಧನವನ್ನು ಸ್ವೀಕಾರವಾಗದಿರಲಿ. ಧರ್ಮದಿಂದ ಭವಿಷ್ಯದಲ್ಲಿ ಮನುಜ ಜನಾಂಗಕ್ಕೆ/ಪ್ರಕೃತಿಗೆ ನೋವು ಉಂಟಾದರೆ, ಈ ಧರ್ಮವೇ ಸ್ವೀಕಾರವಾಗದಿರಲಿ.


ಇದು ಮನುಸ್ಮೃತಿಯಲ್ಲೇ ಹೇಳಿದೆ. ಹಾಗಾದರೆ, ಧರ್ಮ ಬದಲಾಗುತ್ತದೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ’ಧರ್ಮ’ ಎಂದರೆ ಯುಗಧರ್ಮ ಎಂಬ ಅರ್ಥ. ಸನಾತನ ಧರ್ಮವಲ್ಲ. ಸನಾತನ ಧರ್ಮ ಬದಲಾಗುವುದಿಲ್ಲ. ಆದರೆ ಸಮಯಕ್ಕೆ ತಕ್ಕಹಾಗೆ ನಮ್ಮ ನಡವಳಿಕೆಗಳನ್ನು ಮಾರ್ಪಾಡಿಸಬೇಕೆಂಬುದಾಗಿ ಮನುವೇ ಹೇಳಿರುವಂತಿದೆ (ಮಾರ್ಪಾಡು ಸನಾತನಧರ್ಮದ ಚೌಕಟ್ಟಿನಲ್ಲಿ). ಇದರ ವಿಸ್ತಾರವಾದ ಅರ್ಥ ತಿಳಿದವರು ಹಂಚಿಕೊಳ್ಳಬಹುದು.

ಚಿತ್ರ: ಅಂತರ್ಜಾಲ

7 comments:

shivu.k said...

ರಾಜೀವ್ ಸರ್,

೨೦೦೯ ಕಳೆದು ೨೦೧೦ ಬಂದಮೇಲೆ ಅದನ್ನು ಹೊಸ ವರುಷ ಎಂದು ಆಚರಿಸಲು ನಮ್ಮ ಹೊಸ ವರುಷ ಯುಗಾದಿಗೆ ಬರುವುದು ಅಂತ ಕಾಯಬೇಕಿಲ್ಲ. ಸಂತೋಷ ಪಡಲು ಇವೆಲ್ಲಾ ಕಾರಣಗಳು. ನಿಮ್ಮ ಅನಿಸಿಕೆಯೂ ಸರಿಯೆಂದು ನನ್ನ ಭಾವನೆ.
ನಿಮಗೆ ಹೊಸ ವರುಷ ಶುಭ ತರಲಿ.

ಬಾಲು said...

ಸನಾತನ ಧರ್ಮದ ಆಳ ಅಗಲ ಗಳನ್ನು ನೀವೇ or ಗೊತ್ತಿದ್ದವರು ಹೇಳಿದರೆ, ಮನುಷ್ಯ ಅಥವಾ ಸಾಮಾಜಿಕೆ ನಡವಳಿಕೆಗಳ ಬದಲಾವಣೆಗಳ ಬಗ್ಗೆ, ಅದರ ಅಗತ್ಯದ ಬಗ್ಗೆ ಚಿಂತಿಸಿ ಚರ್ಚಿಸ ಬಹುದು. ಮತ್ತೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಒಪ್ಪಿಗೆ ಇದೆ.

Ittigecement said...

ರಾಜೀವ...

೨೦೧೦ ಇದು ನಮ್ಮ ಕ್ಯಾಲೆಂಡರ್ ವರ್ಷ...
ಧಾರ್ಮಿಕವಾಗಿ ಸಾವಿರಾರು ವರ್ಷಗಳಿಂದ ನಮ್ಮ ಹೊಸ ವರ್ಷ "ಯುಗಾದಿ"

ಇದು ನಿಜ ಈ ವರ್ಷವನ್ನು ನಾವು ನಿರಾಸೆಯಿಂದ ಶುರುಮಾಡಿದ್ದೇವೆ..
ಬೇಸರದ ಛಾಯೆ ಇದೆ....

ಆದರೆ ...

ಆರ್ಥಿಕ ಹಿಂಜರಿತ ಎನ್ನುವ ಭೂತ ನಮ್ಮನ್ನು ಬಿಟ್ಟು ಓಡುತ್ತಿದೆ... ಅಲ್ಲವಾ...?

ಚಂದದ ಲೇಖನಕ್ಕೆ ಅಭಿನಂದನೆಗಳು..

ರಾಜೀವ said...

@ಶಿವು,
ನನ್ನ ಅನಿಸಿಕೆಗೆ ನಿಮ್ಮ ಧ್ವನಿಗೂಡಿಸಿದ್ದಕ್ಕೆ ಧನ್ಯವಾದ.

@ಬಾಲು,
ನಮ್ಮ ಆಳ ಅಗಲವೇ ನಮಗೆ ಗೊತ್ತಿಲ್ಲ, ಇನ್ನು ಸನಾತನಧರ್ಮದ ಬಗ್ಗೆ ನಾನು ಹೇಳುವುದೇ?
ನೀವು ಕವಿಯಾಗುವ ಎಷ್ಟು ದೂರ ಸಾಗಿದ್ದೀರೆಂದು ಹೇಳಲೇ ಇಲ್ಲಾ? ;-)

@ಪ್ರಕಾಶ್,
ನಿಜ ನೀವು ಹೇಳುವುದು. ಆದರೆ ಬೇರೆ ಬೇರೆ ಭೂತಗಳು ಇಲ್ಲೇ ನೆಲೆಮಾಡಿರುವುದು ದುರಂತ.
ಹೀಗೇ ಬರುತ್ತಿರಿ.

ದೀಪಸ್ಮಿತಾ said...

ನೋಡೋಣ, ಈ ವರ್ಷದಲಾದರೂ ಹಳೆ ಸಮಸ್ಯೆಗಳಿಗೆ ಕೊನೆ ಹಾಡುತ್ತದೆಯೋ ಎಂದು

ಸಾಗರದಾಚೆಯ ಇಂಚರ said...

ರಾಜೀವ್ ಸರ್
ತಡವಾಗಿ ಹೊಸ ವರುಷಕ್ಕೆ ಶುಭಾಷಯ ಕೊಡುತ್ತಿದ್ದೇನೆ
ಪ್ರತಿದಿನವೂ ಹೊಸ ದಿನ ಎಂದು ತಿಳಿದರೆ ದಿನವೂ ಹೊಸ ವರುಷದಂತೆ ಅಲ್ಲವೇ

ರಾಜೀವ said...

@ದೀಪಸ್ಮಿತ,
ನಾನೂ ಅದಕ್ಕೇ ಕಾಯ್ತಿದಿನಿ. ನಿಮ್ಮ ಶುಭ ಹಾರೈಕೆಗೆ ನನ್ನಿ.

@ಗುರುಮೂರ್ತಿ,
ನಿಮಗೂ ಹೊಸ ವರುಷದ ಶುಭಾಶಯಗಳು.
ನೀವು ಹೇಳೋದು ನಿಜ. ಆದರೆ ಪಾಲಿಸಿವುದು ಕಷ್ಟ ;-)
ನಿಮ್ಮ ಸ್ವೀಡನ್ ಸರಣಿಯಲ್ಲಿ ಇಣುಕಿ ನೋಡಿದೆ. ಕೆಲಸದ ಒತ್ತಡದಿಂದ ಪೂರ್ತಿ ಓದಲಾಗಲಿಲ್ಲ.
ಶುಭದಿನ.